ಪ್ರಯಾಗರಾಜ್ (ಉತ್ತರ ಪ್ರದೇಶ): ವಿಶ್ವವಿಖ್ಯಾತ ತಾಜ್ಮಹಲ್ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠ ವಜಾ ಮಾಡಿದೆ.
ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿ ಇದಾಗಿತ್ತು.
ತಾಜ್ ಮಹಲ್ನಲ್ಲಿರುವ 22 ಕೊಠಡಿಗಳಲ್ಲಿ ಏನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ತಾಜ್ಮಹಲ್ನಲ್ಲಿ 22 ಕೊಠಡಿಗಳಿಗೆ ಬೀಗ ಹಾಕಿ ಇರಿಸಲಾಗಿದೆ. ಅದಕ್ಕೆ ಯಾರಿಗೂ ಪ್ರವೇಶ ಇಲ್ಲ. ಅಲ್ಲಿ ಹಿಂದು ದೇವರ ವಿಗ್ರಹಗಳು, ಹಳೆಯ ಶಾಸನಗಳು ಇವೆ ಎಂದು ಹೇಳಲಾಗುತ್ತಿದೆ. ಇದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಇದಕ್ಕಾಗಿ ಎಎಸ್ಐಗೆ ನಿರ್ದೇಶನ ನೀಡಬೇಕು ಎಂದು ಕೋರಿಕೊಂಡಿದ್ದರು.
ಅನುಮಾನ ಹೆಚ್ಚಿಸಿದ ಆರ್ಟಿಐ ಮಾಹಿತಿ: ತಾಜ್ಮಹಲ್ನ 20 ಕೊಠಡಿಗಳಿಗೆ ಸಂಬಂಧಿಸಿ ಮಾಹಿತಿ ಕೋರಿ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ತಾಜ್ಮಹಲ್ನ 20 ಕೊಠಡಿಗಳಿಗೆ ಬೀಗ ಹಾಕಲಾಗಿದೆ ಯಾಕೆ ಎಂದು ಕೇಳಲಾಗಿತ್ತು. ಇದಕ್ಕೆ ಕೇಂದ್ರ ಸಂಸತಿ ಸಚಿವಾಲಯವು ದೆಹಲಿಯ ಸೆಂಟ್ರಲ್ ಇನ್ಫಾಮೇರ್ಷನ್ ಕಮಿಷನ್ಗೆ ನೀಡಿದ ಮಾಹಿತಿ ಪ್ರಕಾರ, ಸುರಕ್ಷತೆ ದೃಷ್ಟಿಯಿಂದ ಕೊಠಡಿಗಳಿಗೆ ಬೀಗ ಹಾಕಲಾಗಿದೆ ಎಂದಷ್ಟೇ ಇದೆ. 2020ರಿಂದ ಆರ್ಟಿಐ ಮೂಲಕ ಮಾಹಿತಿ ಹೊರತೆಗೆಯಲು ಪ್ರಯತ್ನಿಸುತ್ತಿದ್ದೇನೆ. ಸರ್ಕಾರದ ಮಾಹಿತಿ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಸಿಂಗ್ ಹೇಳಿದ್ದರು. ಆರ್ಟಿಐ ಮೂಲಕವೇ ಮತ್ತೆ ಅರ್ಜಿ ಸಲ್ಲಿಸಿ ಕೊಠಡಿಗಳ ಒಳಗೆ ಏನಿದೆ? ಅವುಗಳನ್ನು ಲಾಕ್ ಮಾಡಿರುವುದು ಯಾಕೆ? ಎಂಬ ಪ್ರಶ್ನೆ ಕೇಳಿ ಮಾಹಿತಿ ಕೋರಲಾಗಿತ್ತು. ಆದರೆ, ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೈಕೋರ್ಟ್ ಮೆಟ್ಟಿಲೇರಬೇಕಾಗಿ ಬಂದಿದೆ ಎಂದು ಸಿಂಗ್ ಹೇಳಿದ್ದರು.
ಆದರೆ ಇದನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ನಿಮ್ಮ ವಾದವನ್ನು ನಾವು ಒಪ್ಪುವುದಿಲ್ಲ. ಸತ್ಯಶೋಧನಾ ಸಮಿತಿಯ ಮೂಲಕ ಸತ್ಯವನ್ನು ಅನ್ವೇಷಿಸಲು ನೀವು ಬಯಸುತ್ತಿರುವುದು ಏನು? ಅದು ನಿಮ್ಮ ಹಕ್ಕಲ್ಲ. ಈ ರೀತಿ ಮಾಹಿತಿ ನೀಡುವುದು ಆರ್ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada