ತಿರುಮಲಾಂಬ

 
ತಿರುಮಲಾಂಬ ಅವರು ಹೊಸಗನ್ನಡದ ಮೊದಲ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ, ಮುದ್ರಕಿ ಎಂದು ಪ್ರಖ್ಯಾತರಾಗಿ ಸ್ತ್ರೀ ಕುಲದ ಏಳಿಗೆಗೆ ಹಗಲಿರುಳೂ ಶ್ರಮಿಸಿದವರು.
ತಿರುಮಲಾಂಬ 1887ರ ಮಾರ್ಚ್ 25ರಂದು ನಂಜನಗೂಡಿನಲ್ಲಿ ಜನಿಸಿದರು. ಇವರ ತಂದೆ ವೆಂಕಟಕೃಷ್ಣ ಅಯ್ಯಂಗಾರ್ ವಕೀಲರಾಗಿದ್ದರು. ತಾಯಿ ಅಲಮೇಲಮ್ಮನವರು. ಶ್ರೀವೈಷ್ಣವ ಪದ್ಧತಿಯ ಮನೆಗಳ ಪದ್ಧತಿಯಂತೆ ಇವರ ಮನೆಯ ಭಾಷೆ ತಮಿಳು. ಊರಭಾಷೆಯಾದ ಕನ್ನಡದ ಬಗ್ಗೆ ಇವರಲ್ಲಿ ವಿಶೇಷ ಪ್ರೀತಿ. ಕನ್ನಡ, ತಮಿಳಿನ ಜೊತೆಗೆ ತೆಲುಗು ಭಾಷೆಯೂ ಇವರಿಗೆ ಪರಿಚಿತವಾಗಿತ್ತು.
ಬಾಲ್ಯವಿವಾಹವೆಂಬುದು ಸಹಜವಾಗಿದ್ದ ಅಂದಿನ ಕಾಲದಲ್ಲಿ ತಿರುಮಲಾಂಬ ಅವರಿಗೂ ಹತ್ತನೇ ವಯಸ್ಸಿನಲ್ಲಿಯೇ ಮದುವೆಯಾಯಿತು. ಆದರೆ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಅವರಿಗೆ ಪತಿವಿಯೋಗ ಉಂಟಾಯಿತು. ಸಾಹಿತ್ಯ ಪ್ರಿಯರಾಗಿದ್ದ ತಂದೆ ವೆಂಕಟಕೃಷ್ಣ ಅಯ್ಯಂಗಾರ್ಯರು ವಿಶಾಲ ಮನೋಭಾವದವರಾಗಿದ್ದು, ತಾವು ಓದಿದ್ದ ಶ್ರೇಷ್ಠತೆಗಳನ್ನು ತಮ್ಮ ಮಗಳಿಗೂ ದೊರಕುವಂತೆ ಮಾಡಿದರು. ಹೀಗಾಗಿ ಪುಸ್ತಕಗಳೇ ಅವರ ಸಂಗಾತಿಗಳಾದವು. ರಾಮಾಯಣ, ಮಹಾಭಾರತ, ಭಾಗವತಗಳ ವಾಚನವಷ್ಟೇ ಅಲ್ಲದೆ ನಂಜನಗೂಡು ಶ್ರೀಕಂಠಶಾಸ್ತ್ರಿ, ಬೆಳ್ಳಾವೆ ಸೋಮನಾಥಯ್ಯ, ಎಂ. ವೆಂಕಟಾದ್ರಿ ಶಾಸ್ತ್ರಿ ಮುಂತಾದವರ ಕಥೆ ನಾಟಕಗಳನ್ನು ಅವರು ವ್ಯಾಪಕವಾಗಿ ಓದತೊಡಗಿದರು. ಹೀಗೆ ತಮ್ಮ ಓದುಗಳಿಂದ ಆಂತರ್ಯವನ್ನು ಗಟ್ಟಿಗೊಳಿಸುತ್ತಾ ಮುನ್ನಡೆದ ತಿರುಮಲಾಂಬ, ತಮ್ಮ ವೈಯಕ್ತಿಕ ಬದುಕಿಗೆ ಕಂಬನಿ ಮಿಡಿಯದೆ, ಲೋಕದ ಜನರ ಕಷ್ಟಕಾರ್ಪಣ್ಯಗಳ ಕಡೆಗೆ ಓಗೊಡುವತ್ತ ಮನಮಾಡಿ ನಿಂತರು.
ತಮ್ಮ ಬಿಡುವಿನ ವೇಳೆಯಲ್ಲಿ ಆಚೀಚಿನ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದ ತಿರುಮಲಾಂಬ ಅವರ ಮನೆ ಕ್ರಮೇಣವಾಗಿ ಒಂದು ಪಾಠಶಾಲೆಯಾಗಿಯೇ ರೂಪುಗೊಂಡಿತು. ಮಕ್ಕಳು ಮಾತ್ರವಲ್ಲದೆ ನೆರೆಹೊರೆಯ ಮಹಿಳೆಯರೂ ತಮ್ಮ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ ತಮ್ಮ ಮಕ್ಕಳೊಂದಿಗೆ ತಾವೂ ಕಲಿಯತೊಡಗಿದರು. ಹೀಗೆ ಕ್ರಮೇಣದಲ್ಲಿ ಇದು ‘ಮಾತೃಮಂದಿರ’ ಎಂಬ ಹೆಸರು ಪಡೆಯಿತು. ಈ ದಿನಗಳಲ್ಲಿ ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗಾಗಿ ತಿರುಮಲಾಂಬ ‘ಸನ್ಮಾರ್ಗದರ್ಶಿನಿ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.
ತಮ್ಮ ಅಧ್ಯಯನ ವೇಳೆಯಲ್ಲಿ ತಮಗೆ ಇಷ್ಟವಾದದ್ದನ್ನು ಬರೆದಿಟ್ಟುಕೊಳ್ಳುವುದು ತಿರುಮಲಾಂಬ ಅವರಿಗಿದ್ದ ಒಂದು ವಾಡಿಕೆ. ಇದಕ್ಕೆ ಚಿಂತನೆಗಳ ವ್ಯಾಪ್ತಿಯೂ ಒಡಗೂಡತೊಡಗಿದಂತೆ ಅವರ ಬರಹಗಳ ವ್ಯಾಪ್ತಿ ನಾಟಕ, ಕಾದಂಬರಿ, ಕತೆ, ಭಕ್ತಿಗೀತೆಗಳಿಗೆ ವಿಸ್ತರಿಸತೊಡಗಿತು. ಇವರ ಬರಹಗಳಿಗೆ ಅವರ ‘ಮಾತೃಮಂದಿರ’ ಸಾಕಷ್ಟು ಓದುಗರನ್ನು ಒದಗಿಸುತ್ತಿತ್ತು. ಹೀಗಾಗಿ ಹೆಚ್ಚು ಹೆಚ್ಚು ವಿಷಯಗಳನ್ನು ತಮ್ಮ ಆಪ್ತ ಸಭಿಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಿರುಮಲಾಂಬ ಅವರು ಹೆಚ್ಚು ಹೆಚ್ಚು ಬರೆಯತೊಡಗಿದರು.
ಒಮ್ಮೆ ‘ಮಧುರವಾಣಿ’ ಎಂಬ ಮೈಸೂರಿನಲ್ಲಿದ್ದ ಮಾಸ ಪತ್ರಿಕೆ ಒಂದು ಕಥಾಸ್ಪರ್ಧೆಯನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ತಿರುಮಲಾಂಬ ಅವರು ತಮ್ಮ ಕತೆಯನ್ನು ಕಳುಹಿಸಿಕೊಟ್ಟರು. ಇಷ್ಟು ಸುಂದರವಾದ ಕಥೆ ಬರೆದ ಲೇಖಕಿಯನ್ನು ಹುಡುಕಿಕೊಂಡು ಸ್ವಯಂ ‘ಮಧುರವಾಣಿ’ಯ ಸಂಪಾದಕರಾದ ಶ್ರೀ ಕೆ. ಹನುಮಾನ್ ಅವರೇ ತಿರುಮಲಾಂಬ ಅವರ ಮನೆಗೆ ಬಂದರಂತೆ. ಆಗ ಅಲ್ಲಿ ಅವರಿಗೆ ಕಂಡದ್ದು ಹಲವಾರು ಬರಹಗಳ ಕಣಜ. ಹಲವು ಕತೆಗಳು, ಕಾದಂಬರಿ, ನಾಟಕ, ಪ್ರಬಂಧಗಳು ಹೀಗೆ ವೈವಿಧ್ಯಮಯ ಬರಹಗಳು ಆ ಕಣಜದಲ್ಲಿದ್ದವು. ಇವುಗಳಲ್ಲಿ ‘ವಿಧವಾ ಕರ್ತವ್ಯ’ ಎಂಬ ಬರಹದಿಂದ ಪ್ರಭಾವಿತರಾದ ಹನುಮಾನರು ಅದನ್ನು ತಮ್ಮ ‘ಮಧುರವಾಣಿ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಅಂದಿನ ಮಡಿವಂತಿಕೆಯ ಸಮಾಜದಲ್ಲಿ ಅದರ ಕುರಿತು ಹಲವಾರು ಟೀಕೆಗಳು ಬಂದರೂ ಅವಕ್ಕೆಲ್ಲ ಧೃತಿಗೆಡದ ತಿರುಮಲಾಂಬ, ತಮಗೆ ಸರಿ ಎನಿಸುವುದನ್ನು ಆತ್ಮವಿಶ್ವಾಸದಿಂದ ಮಾಡುತ್ತಾ ಹೋದರು. ಇದಕ್ಕೆ ಅವರ ವಾತ್ಸಲ್ಯಮಯಿ ತಂದೆಯ ಬೆಂಬಲ ಆಶೀರ್ವಾದಗಳೂ ಜೊತೆಗಿದ್ದವು. ಮುಂದೆ ತಿರುಮಲಾಂಬ ‘ಸತೀ ಹಿತೈಷಿಣಿ’ ಗ್ರಂಥಮಾಲೆಯನ್ನು ಪ್ರಾರಂಭಿಸಿದರು.
‘ಸತೀಹಿತೈಷಿಣಿ’ಯ ಪ್ರಥಮ ಪ್ರಕಟಣೆಯಾಗಿ ತಿರುಮಲಾಂಬ ಅವರ ‘ಸುಶೀಲೆ’ ಕಾದಂಬರಿ 1913ರಲ್ಲಿ ಪ್ರಕಟಗೊಂಡಿತು. ಆ ಕಾದಂಬರಿ ಪ್ರಕಟಗೊಂಡ ಕ್ಷಿಪ್ರ ಅವಧಿಯಲ್ಲೇ ನಾಲ್ಕು ಆವೃತ್ತಿಗಳನ್ನು ಕಂಡು 7000ಕ್ಕೂ ಹೆಚ್ಚು ಪ್ರತಿಗಳ ಮಾರಾಟವನ್ನು ಕಂಡಿತು.
‘ಸತೀಹಿತೈಷಿಣಿ’ ಸಂಸ್ಥೆಯಿಂದ ಕೇವಲ ತಿರುಮಲಾಂಬ ಅವರ ಪ್ರಕಟಣೆಗಳು ಮಾತ್ರವಲ್ಲದೆ ‘ಸನ್ಮಾನ ಗ್ರಂಥಾವಳೀ’, ‘ಸನ್ಮಾರ್ಗದರ್ಶಿ ಗ್ರಂಥ ಮಾಲಿಕಾ’, ‘ನಂದಿನಿ ಗ್ರಂಥಮಾಲಾ’ (ಪಾನ್ಯಂ ಸುಂದರಶಾಸ್ತ್ರಿ, ಸರಗೂರ ವೆಂಕಟ ವರದಾಚಾರ್ಯ), ಲಕ್ಷ್ಯಲಕ್ಷಣಗಳ ಬಗ್ಗೆ ಹೇಳುವ ‘ಅಲಂಕಾರ ಶಾಸ್ತ್ರ ಗ್ರಂಥ’ (ಡಾ. ಎಸ್ .ಎನ್. ನರಸಿಂಹಯ್ಯ), ‘ಸೂಕ್ಷ್ಮಾಯುರ್ವೇದ ಚಿಕಿತ್ಸಾ ಪ್ರಯೋಗ’, ‘ಸರಳ ಯೂನಿಪ್ಯಾಥಿ ಚಿಕಿತ್ಸಕ’ ಎಂಬ ವೈದ್ಯಶಾಸ್ತ್ರ ಗ್ರಂಥ (ಡಾ. ಶ್ರೀನಿವಾಸ ಮೂರ್ತಿ) ಅಂತಹ ಶ್ರೇಷ್ಠ ಪುಸ್ತಕಗಳೂ ಪ್ರಕಟಗೊಂಡವು. ಅಷ್ಟೊಂದು ಶ್ರೇಷ್ಠ ಮನೋಭಾವನೆ ತಿರುಮಲಾಂಬ ಅವರಲ್ಲಿತ್ತು. 1913-16ರ ಅವಧಿಯಲ್ಲಿ ತಿರುಮಲಾಂಬ ಅವರ ‘ನಭಾ’, ‘ವಿದ್ಯುಲ್ಲತಾ’, ‘ಹರಿಣ’ ಮುಂತಾಗಿ ಒಟ್ಟು ಹನ್ನೊಂದು ಪುಸ್ತಕಗಳು ಪ್ರಕಟಗೊಂಡವು. ಕತೆ, ಕಾದಂಬರಿ, ಕಿರುಕಾದಂಬರಿ, ಪತ್ತೇದಾರಿ ಕಾದಂಬರಿ, ಪ್ರಬಂಧ, ಪದ್ಯ, ನಾಟಕ ಅಂತ ಅವರು ಬರೆದ ಒಟ್ಟು ಕೃತಿಗಳು ಸುಮಾರು ಇಪ್ಪತ್ತೆಂಟು. ತಿರುಮಲಾಂಬ ಅವರು 1939ರಲ್ಲಿ ರಚಿಸಿದ ‘ಮಣಿಮಾಲ’ ಅವರ ಕೊನೆಯ ಕಾದಂಬರಿ.
‘ಸತೀ ಹಿತೈಷಿಣಿ’ ಗ್ರಂಥಮಾಲೆಯಿಂದ ಹೊರಬಂದ ‘ಮಾತೃನಂದಿನಿ’, ‘ಚಂದ್ರವದನಾ’, ‘ರಮಾನಂದ’ ಮುಂತಾದ ಕೃತಿಗಳು ಮದ್ರಾಸ್ ಸ್ಕೂಲ್ ಬುಕ್ ಏಂಡ್ ಲಿಟರೇಚರ್ ಸೊಸೈಟಿಯ ಬಹುಮಾನ ಪಡೆದವು. ಕರ್ನಾಟಕ ವಿದ್ಯಾವರ್ಧಕ ಸಂಘ ‘ರಮಾನಂದ’ ಮತ್ತು ‘ಪೂರ್ಣಕಲಾ’ ಕೃತಿಗಳಿಗೆ ಪುರಸ್ಕಾರ ನೀಡಿತು.
1917ರಿಂದ ಸುಮಾರು ಎರಡು ದಶಕಗಳ ಕಾಲ ಪ್ರತೀವರ್ಷ ಅವರ ಕೃತಿಗಳು ಮದ್ರಾಸು, ಮೈಸೂರು, ಬೊಂಬಾಯಿ ರಾಜ್ಯಗಳ ಶಾಲಾಕಾಲೇಜುಗಳಲ್ಲಿ ಪಠ್ಯವಾಗಿದ್ದವು. ಮೈಸೂರು, ಮದರಾಸು, ಬೊಂಬಾಯಿ ಸರಕಾರಗಳು ತಿರುಮಲಾಂಬ ಅವರ ಹಲವಾರು ಕೃತಿಗಳಿಗೆ ಬಹುಮಾನಗಳನ್ನು ನೀಡಿದ್ದವು.
ಮುಂದೆ ತಿರುಮಲಾಂಬ ಅವರು ‘ಕರ್ನಾಟಕ ನಂದಿನಿ’ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. “ನಾನು ವಿದ್ಯಾಗಂಧವನ್ನೇ ತಿಳಿಯದ ಅಲ್ಪಮತಿಯಾದ ಸಾಮಾನ್ಯ ಸ್ತ್ರೀ. ನವ ನಾಗರಿಕತೆಯ ಸುಳಿವಾಗಲೀ, ತಿಳಿವಳಿಕೆ ತಿರುಳಾಗಲೀ ತಿಳಿಯದ ಬಾಲಿಕೆ. ಆದರೂ ನಮ್ಮ ಸೋದರೀ ವರ್ಗಕ್ಕೆ ನನ್ನ ಕೈಯಲ್ಲಾಗುವ ಸೇವೆಯನ್ನು ಮಾಡಬೇಕೆಂಬ ಅತ್ಯುತ್ಕಟೇಚ್ಛೆಯು ನನ್ನನ್ನು ಬಿಡಲೊಲ್ಲದು” ಎಂದು ಹೇಳುತ್ತಿದ್ದ ತಿರುಮಲಾಂಬ ಅವರ ಈ ಮಾಸಪತ್ರಿಕೆ ಸ್ತ್ರೀ ಸಮುದಾಯಕ್ಕೆ ಕೊಟ್ಟ ವಿಶಿಷ್ಟ ಕೊಡುಗೆಯಾಗಿತ್ತು. ‘ನಂದಿನಿ’ಗೆ ಕವಿತೆ ಕಳಿಸಿದವರಲ್ಲಿ ಎಳವೆಯಲ್ಲೇ ತೀರಿಕೊಂಡ ಉಡುಪಿಯ ತುಳಸೀಬಾಯಿ ಎಂಬ ಲೇಖಕಿಯೂ ಒಬ್ಬರು. ಕಡೆಂಗೋಡ್ಲು ಶಂಕರಭಟ್ಟರು ತಮ್ಮ ಕೆಲ ಬರಹಗಳನ್ನು ನಂದಿನಿಗೆ ಕಳುಹಿಸುತ್ತಿದ್ದರು. ಪತ್ರಿಕೆಯಲ್ಲಿ ‘ಕನ್ನಡ ರನ್ನಗನ್ನಡಿ’ ಎಂಬೊಂದು ಪುಟ ಕನ್ನಡದ ಕೈಂಕರ್ಯ ನಡೆಸಿದವರಿಗಾಗಿಯೇ ಮೀಸಲಾಗಿತ್ತು. ಶಿಕ್ಷಿತ ಮಹಿಳೆಯರನ್ನು ‘ನಂದಿನಿ’ಗೆ ಬರೆಯಲು ಅವರು ಕೋರಿಕೊಳ್ಳುತ್ತಿದ್ದರು. ಬರೆದವರು ಬೆರಳೆಣಿಕೆಯಷ್ಟು ಮಾತ್ರವೇ ಇದ್ದಿದ್ದರಿಂದ ಪುಟ ತುಂಬಿಸಲು ಸ್ವಯಂ ತಿರುಮಲಾಂಬ ಅವರೇ ಬೇರೆ ಬೇರೆ ಹೆಸರುಗಳಲ್ಲಿ ನಿರಂತರವಾಗಿ ಬರೆಯಬೇಕಾಗುತ್ತಿತ್ತು. ಈ ಪತ್ರಿಕೆಯನ್ನು ಬಹುಕಾಲ ನಡೆಸಲು ಸಾಧ್ಯವಾಗದೆ ನಿಲ್ಲಿಸಬೇಕಾಗಿ ಬಂತು.
ಈ ಮಧ್ಯೆ ತಮ್ಮ ತಂದೆಯವರ ಮರಣ ತಿರುಮಲಾಂಬ ಅವರಿಗೆ ಆಘಾತವನ್ನು ತಂದಿತ್ತು. ಹೀಗಾಗಿ ಹೆಚ್ಚು ಹೆಚ್ಚು ಅಂತರ್ಮುಖಿಗಳಾದ ತಿರುಮಲಾಂಬ ತಮ್ಮ ಬರವಣಿಗೆಯನ್ನು ಅಧ್ಯಾತ್ಮದೆಡೆಗೆ ತಿರುಗಿಸಿದರು. ಮುಂದೆ ಬರವಣಿಗೆಯೂ ಬೇಡವೆಂದೆನಿಸಿ, ಅವರ ಮನಸ್ಸು ಮೌನಕ್ಕೆ ತಿರುಗಿತು.
ತಿರಮಲಾಂಬ ಅವರು ತೊಂಬತ್ತೈದು ವರ್ಷಗಳ ತಮ್ಮ ಸುದೀರ್ಘ ಜೀವನದಲ್ಲಿ ಕಷ್ಟಕಾರ್ಪಣ್ಯ, ಟೀಕೆ ಟಿಪ್ಪಣಿಗಳು, ಲಾಭ ನಷ್ಟಗಳು ಇವೆಲ್ಲವನ್ನೂ ಮೀರಿ ನಡೆಸಿದ ಮೌಲ್ಯಯುತ ಬದುಕು ಈ ಲೋಕದ ಜನರಿಗೆ ದಾರಿದೀಪವಾಗುವಂತದ್ದು. ಹೊಸಕನ್ನಡದ ಈ ಪ್ರಪ್ರಥಮ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ ಶ್ರೀಮತಿ ನಂಜನಗೂಡು ತಿರುಮಲಾಂಬ 1982ರ ಆಗಸ್ಟ್ 31ರಂದು ಈ ಲೋಕದಿಂದ ಮರೆಯಾದರು. ಅವರ ಬದುಕು, ಆ ಬದುಕು ತೋರಿದ ಬೆಳಕು ಎಂದೆಂದೂ ಅಳಿಸಲಾರದಂತದ್ದು.
ತಿರುಮಲಾಂಬ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಚಿ.ನ.ಮಂಗಳಾರವರು ರೂಪಿಸಿದ ‘ಶಾಶ್ವತಿ’ ಸಂಸ್ಥೆ ಪ್ರತಿವರ್ಷ ಶ್ರೇಷ್ಠ ಮಹಿಳಾ ಬರಹಗಾರ್ತಿಯೊಬ್ಬರಿಗೆ ‘ತಿರುಮಲಾಂಬ ಪ್ರಶಸ್ತಿ’ ನೀಡುತ್ತ ಬಂದಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪದ್ಮಾ ಶೆಣೈ ಸ್ಮರಣೆ

Mon Mar 28 , 2022
  ಪದ್ಮಾ ಶೆಣೈ ಕನ್ನಡದ ಜನಪ್ರಿಯ ಲೇಖಕಿ. ಅವರು ಈ ಲೋಕವನ್ನಗಲಿದ್ದು 2020ರ ಮಾರ್ಚ್ 24ರಂದು. ಪದ್ಮಾ ಶೆಣೈ ಅವರು ಕಳೆದ ಆರು ದಶಕಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದರು. ತಮ್ಮ ಎಲ್ಲ ಕೃತಿಗಳಲ್ಲೂ ಸಮಕಾಲೀನ ವಿದ್ಯಮಾನಗಳಿಗೆ ಮಹತ್ವ ನೀಡುತ್ತಾ ಮಹತ್ವದ ಲೇಖಕಿ ಎನಿಸಿದವರು. ಪದ್ಮಾ ಅವರು 1933ರ ನವೆಂಬರ್‌ 3ರಂದು ಮದರಾಸಿನಲ್ಲಿ ಜನಿಸಿದರು. ತಂದೆ ರಾಮ ಬಾಳಿಗ. ತಾಯಿ ಲಕ್ಷ್ಮೀದೇವಿ. ಕಾಲೇಜು ಪ್ರಾಧ್ಯಾಪಕರಾಗಿದ್ದ ತಂದೆಯವರ ಪ್ರಭಾವವು ಎಳೆಯ ವಯಸ್ಸಿನಲ್ಲಿಯೇ ಇವರ […]

Advertisement

Wordpress Social Share Plugin powered by Ultimatelysocial