ಸಾರ್ವಜನಿಕರು ನೀಡಿದ್ದ ಮಾಹಿತಿ ಆಧರಿಸಿ ತಾಲ್ಲೂಕಿನ ಮಾರಿಹಾಳ ಠಾಣೆ ಪೊಲೀಸರು ಒಂದು ಟ್ರಕ್ ಗೋವು ಹಾಗೂ ಎಮ್ಮೆಗಳ ಚರ್ಮವನ್ನು ಈಚೆಗೆ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಠಾಣೆಗೆ ಭೇಟಿ ನೀಡಿ ಪ್ರಕರಣದ ಸಂಪೂರ್ಣ ವಿವರ ಪಡೆದರು.
‘ಡಿ.10ರಂದು ರಾತ್ರಿ ಬಂಕ್ವೊಂದರಲ್ಲಿ ಡೀಸೆಲ್ ತುಂಬಿಸುತ್ತಿದ್ದ ಟ್ರಕ್ನಿಂದ ರಕ್ತಮಿಶ್ರಿತ ನೀರು ಹರಿಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಪೊಲೀಸರು ಟ್ರಕ್ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ’ ಎಂದು ಸಚಿವರು ತಿಳಿಸಿದರು.
‘ಟ್ರಕ್ನಲ್ಲಿ ಶೇ 60ರಷ್ಟು ಆಕಳುಗಳ ಹಾಗೂ ಶೇ 40ರಷ್ಟು ಎಮ್ಮೆಗಳ ಚರ್ಮ ಸಿಕ್ಕಿದೆ. ಇದರ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ. ಗೋ ಹತ್ಯೆ ನಿಷೇಧವಿದ್ದರೂ ಇಷ್ಟೊಂದು ಪ್ರಮಾಣದ ಚರ್ಮ ಸಿಕ್ಕಿರುವುದು, ಗೋ ಹತ್ಯೆ ಮಾಡಿರುವುದಕ್ಕೆ ನಿದರ್ಶನವಾಗಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸಬೇಕು. ಶಿಕ್ಷೆಗೆ ಗುರಿ ಆಗುವಂತೆ ನೋಡಿಕೊಳ್ಳಬೇಕು’ ಎಂದು ಪೊಲೀಸರಿಗೆ ಸೂಚಿಸಿದರು.