ನಟ ಉಪೇಂದ್ರ ಮತ್ತೆ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಹಲವು ವರ್ಷಗಳಿಂದ ನಿರ್ದೇಶನದಿಂದ ದೂರ ಉಳಿದಿದ್ದ ನಟ ಉಪೇಂದ್ರ ಈಗ ಮತ್ತೆ ನಿರ್ದೇಶಕನಾಗಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಉಪ್ಪಿ ಏನೇ ಮಾಡಿದರು ಅದು ಡಿಫ್ರೆಂಟ್. ಅವರ ಹೊಸ ಸಿನಿಮಾದ ಟೈಟಲ್ ರಿಲೀಸ್ ಆದಾಗಿನಿಂದಲೂ ಎಲ್ಲರನ್ನು ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಈ ಚಿತ್ರದ ಬಗ್ಗೆ ನಟ ಉಪೇಂದ್ರ ಆಗಲಿ, ಸಿನಿಮಾ ತಂಡ ಆಗಲಿ ಹೆಚ್ಚಿನದ್ದೇನನ್ನೂ ಹೇಳಿರಲಿಲ್ಲ. ಆದರೆ ಸಿನಿಮಾದ ಪೋಸ್ಟರ್ ಮೂಲಕ ಉಪ್ಪಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದರು. ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಮೂಲಕ ಉಪ್ಪಿ ಪ್ರಶ್ನೆಗಳ ಬೆಟ್ಟವನ್ನೇ ಹೊತ್ತು ಬಂದಿದ್ದಾರೆ.
ಇದೀಗ ಸಿನಿಮಾದ ಮುಹೂರ್ತ ನೆರವೇರಿದೆ. ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ. ನಟ, ನಿರ್ದೇಶಕ ಉಪೇಂದ್ರ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲಗಳನ್ನು ಹುಟ್ಟು ಹಾಕಿದ್ದಾರೆ. ಸಿನಿಮಾ ಬಗ್ಗೆ ನಟ ಉಪೇಂದ್ರ ಹೇಳುತ್ತಿರೋದೇನು? ಹೇಳಲು ಹೊರಟಿರುವುದೇನು? ಎನ್ನುವ ಬಗ್ಗೆ ಮುಂದೆ ಓದಿ….
ಉಪೇಂದ್ರ ಹೊಸ ಸಿನಿಮಾಗೆ ಸುದೀಪ್ ಸಾಥ್!
ಉಪೇಂದ್ರ ಹೊಸ ಚಿತ್ರದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನಲ್ಲಿರುವ ಬಂಡಿಮಾಕಾಳಂ ದೇವಸ್ಥಾನದಲ್ಲಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ ತಂಡದ ಎಂಟ್ರಿಯೇ ವಿಭಿನ್ನವಾಗಿತ್ತು. ನಟ ಉಪೇಂದ್ರ ಹಣೆಯ ಮೇಲೆ ನಾಮ ಹಾಕಿಕೊಂಡಿದ್ದರು. ಉಪ್ಪಿ ಮಾತ್ರ ಅಲ್ಲ, ಇಡೀ ಸಿನಿಮಾತಂಡ ನಾಮ ಹಾಕಿಕೊಂಡು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದೆ. ಇನ್ನು ಚಿತ್ರದ ಕಾರ್ಯಮದಲ್ಲಿ ಹಲವು ಸಿನಿಮಾ ಗಣ್ಯರು ಭಾಗಿ ಆಗಿದ್ದರು. ನಟ ಸುದೀಪ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಉಪೇಂದ್ರ ಸಿನಿಮಾ ಟೈಟಲ್ UI!
ನಟ ಉಪೇಂದ್ರ ಸಿನಿಮಾ ಟೈಟಲ್ ಏನು ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಇದ್ದವು. ಈ ಬಗ್ಗೆ ಈ ಸ್ಪಷ್ಟನೆ ಸಿಕ್ಕಿದ್ದು, ಸಿನಿಮಾದ ಟೈಟಲ್ ಯುಐ (ನೀನು ನಾನು) ಎಂದು ಉಪೇಂದ್ರ ಹೇಳಿದ್ದಾರೆ. ಜೊತೆಗೆ ಜೀವನದ ಬಗ್ಗೆ ಒಂದಷ್ಟು ತತ್ವಗಳನ್ನು ನಟ ಉಪೇಂದ್ರ ಈ ಚಿತ್ರದಲ್ಲಿ ತಮ್ಮ ಶೈಲಿಯಲ್ಲಿ ಹೇಳಲಿದ್ದಾರೆ ಎನ್ನುವ ಬಗ್ಗೆ ಒಂದಷ್ಟು ಸೂಚನೆ ಕೊಟ್ಟಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಬಿಟ್ಟು ಕೊಡಲಿದೆ ಚಿತ್ರತಂಡ.
15 ವರ್ಷದ ಹಿಂದೆ ಮಾಡಿದ ಕಥೆ!
ಈ ಚಿತ್ರದ ಬಗ್ಗೆ ನಟ ಉಪೇಂದ್ರ ಒಂದು ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಈ ಸಿನಿಮಾದ ಕಥೆ 15 ವರ್ಷದ ಹಿಂದೆಯೇ ಉಪೇಂದ್ರ ಬರೆದಿದ್ದಾರೆ. ಆದರೆ ಹಾಗಂತ ಇದು ಯಾವುದೋ ಕಾಲಘಟ್ಟದ ಕಥೆಯಲ್ಲ. ಈ ಸಿನಿಮಾ ಪ್ರಸ್ತುತ ಕಾಲಘಟ್ಟಕ್ಕೆ ಹೊಂದಾಣಿಕೆ ಆಗುವ ಕಥೆ ಎಂದಿದ್ದಾರೆ ನಟ, ನಿರ್ದೇಶಕ ಉಪೇಂದ್ರ.
ಉಪೇಂದ್ರ ಯಾರಿಗೆ ನಾಮ ಹಾಕ್ತಾರೆ!
ನಟ ಉಪೇಂದ್ರ ಅವರ ಮುಂದಿನ ಸಿನಿಮಾ ಬಗ್ಗೆ ಇದ್ದ ಕುತೂಹಲಗಳಿಗೆ, ಮುಹೂರ್ತದಲ್ಲಿ ತೆರೆ ಬಿದ್ದಿಲ್ಲ. ಬದಲಿಗೆ ಇದ್ದ ಕುತೂಹಲಗಳು ಮತ್ತಷ್ಟು ಹೆಚ್ಚಾಗಿವೆ. ಆ ರೀತಿಯಾಗಿ ಮತ್ತಷ್ಟು ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ ನಟ ಉಪೇಂದ್ರ. ಉಪೇಂದ್ರ ಎಲ್ಲವನ್ನೂ ಪ್ರೇಕ್ಷಕರಿಗೆ ಬಿಟ್ಟು ಬಿಟ್ಟಿದ್ದಾರೆ. ಜನ ಏನು ಹೇಳುತ್ತಾರೋ ಅದೇ ಸಿನಿಮಾ. ಅದೇ ಕಥೆ ಎಂದೆಲ್ಲಾ ಹೇಳಿ ಅಡ್ಡಗೋಡೆ ಮೇಲೆ ದೀಪ ಇಟ್ಟು ಬಿಟ್ಟಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada