ಜನತಾ ಪರಿವಾರದ ಅಲೆಯ (1983) ನಂತರ ಯಾರನ್ನೂ ಸತತ ಎರಡನೇ ಅವಧಿಗೆ ಗೆಲ್ಲಿಸದೇ ಇರುವ ಧಾರವಾಡ ಗ್ರಾಮೀಣ ವಿಧಾನಸಭಾ ಮತಕ್ಷೇತ್ರ ಈಗ ಜಿದ್ದಾಜಿದ್ದಿನ ಕಣ. ಇಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಕುತೂಹಲ ಮೂಡಿಸಿದೆ.ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ್ ಅವರಂತಹ ರೈತ ನಾಯಕರನ್ನು ಈ ಕ್ಷೇತ್ರ ವಿಧಾನಸಭೆಗೆ ಕಳುಹಿಸಿದೆ. ಆದರೆ, 1972, 1978 ರಲ್ಲಿ ಸುಮತಿ ಮಡಿಮನ್, 1981, 1983 ರಲ್ಲಿ ಸಿ.ವಿ. ಪುಡಕಲಕಟ್ಟಿ ಬಿಟ್ಟರೆ ಈ ಕ್ಷೇತ್ರದಿಂದ ಯಾರೊಬ್ಬರೂ ಸತತ ಎರಡನೇ ಬಾರಿ ಗೆದ್ದಿಲ್ಲ. ಪ್ರತಿ ಚುನಾವಣೆಯಲ್ಲೂ ಹೊಸಮುಖಗಳಿಗೆ ಮಣೆ ಹಾಕುವ ಮತದಾರರ ನಾಡಿಮಿಡಿತ ಅರಿಯಲು ಒದ್ದಾಡುತ್ತಿರುವ ರಾಜಕೀಯ ಪಕ್ಷಗಳು ಗೆಲುವಿನ ನಾಗಾಲೋಟಕ್ಕಾಗಿ ಪ್ರಬಲ ಕದನಕಲಿಗಳ ಆಯ್ಕೆಯಲ್ಲಿ ಗೊಂದಲಕ್ಕೆ ಬಿದ್ದಿವೆ.ಬಿಜೆಪಿ, ಕಾಂಗ್ರೆಸ್, ಜನತಾ ಪಕ್ಷ, ರಾಜ್ಯ ರೈತಸಂಘ ಸೇರಿದಂತೆ ಎಲ್ಲ ಪಕ್ಷಗಳನ್ನೂ ಕ್ಷೇತ್ರ ಒಪ್ಪಿಕೊಂಡಿದೆ. ಪಕ್ಷೇತರರಿಗೂ ಮಣೆ ಹಾಕಿದೆ.
ಸದ್ಯ ಹಾಲಿ ಶಾಸಕ ಬಿಜೆಪಿಯ ಅಮೃತ ದೇಸಾಯಿ, ಕಾಂಗ್ರೆಸ್ನ ಮಾಜಿ ಸಚಿವ ವಿನಯ್ ಕುಲಕರ್ಣಿ ಮಧ್ಯೆ ನೇರ ಫೈಟ್ ನಿಶ್ಚಿತ ಎನ್ನಲಾಗುತ್ತಿದ್ದರೂ ಇಬ್ಬರಿಗೂ ಇನ್ನು ಟಿಕೆಟ್ ಖಾತ್ರಿಯಾಗಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada