ವಾಸುದೇವ ಗಿರಿಮಾಜಿ

 
ವಾಸುದೇವ ಗಿರಿಮಾಜಿ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಪ್ರಸಿದ್ಧರಾದವರು.
ವಾಸುದೇವ ಗಿರಿಮಾಜಿ ಅವರು 1912ರ ಮಾರ್ಚ್ 19ರಂದು ಜನಿಸಿದರು. ವೃತ್ತಿ ರಂಗಭೂಮಿಯಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಗೌರಿನರಸಿಂಹಯ್ಯ, ಬಿ. ರಾಚಪ್ಪ, ಸಮುಖದ ಲಕ್ಷ್ಮೀಪತಿ ಶಾಸ್ತ್ರಿ, ಸೋಮಾಜಿರಾವ್ ಜೊತೆಗೆ ವಾಸುದೇವ ಗಿರಿಮಾಜಿ ಅವರೂ ಪ್ರಸಿದ್ಧರಾಗಿದ್ದರು. ತಂದೆ ಗೋವಿಂದರಾವ್ ಗಿರಿಮಾಜಿ, ತಾಯಿ ತುಂಗಮ್ಮನವರು ಸ್ವಯಂ ಕಲಾವಿದರು,
ಕಲಾಪ್ರೇಮಿಗಳಾದ ತಂದೆಯೊಡನೆ ರಂಗ ತಾಲೀಮಿನ ಸ್ಥಳಕ್ಕೆ ಹೋಗುತ್ತಿದ್ದ ವಾಸುದೇವರಿಗೂ ರಂಗಭೂಮಿಯ ನಂಟು ಕೂಡಿಬಂತು. ಲಿಟರರಿ ಅಂಡ್ ಡ್ರಾಮಾಟಿಕ್ಸ್ ಅಸೋಸಿಯೇಷನ್ನಿನ ವಿದ್ಯಾರಣ್ಯ, ಲವ-ಕುಶ, ರಾಮದಾಸ ನಾಟಕಗಳಲ್ಲಿ ಅವರು ಬಾಲಕಲಾವಿದನ ಪಾತ್ರ ನಿರ್ವಹಿಸುತ್ತಿದ್ದರು. ಅಂದಿನ ದಿನಗಳಲ್ಲೇ ಅವರಿಗೆ ಶಾಕುಂತಲ, ರಾಜವರ್ಮ-ಲೀಲಾವತಿ ನಾಟಕಗಳಲ್ಲಿ ಅಭಿನಯಿಸುವಾಸೆ ಉತ್ಕಟವಾಯಿತು. ತಂದೆಗೆ ಶಿವಮೊಗ್ಗಕ್ಕೆ ವರ್ಗವಾದಾಗ ನಾಟಕದ ಹುಚ್ಚಿನಿಂದ ಮನೆಯಿಂದಲೇ ಪರಾರಿಯಾದರು.
ಹೀಗೆ ವಾಸುದೇವ ಗಿರಿಮಾಜಿ ಸಕಲೇಶಪುರದಲ್ಲಿ ನಾಟಕವಾಡುತ್ತಿದ್ದ ಪೀರ್ ಮಹಮದ್ ಕಂಪನಿಗೆ ಸೇರ್ಪಡೆಗೊಂಡರು. ಆದರೆ ಪ್ರಮುಖ ಪಾತ್ರ ದೊರೆಯದೆ ಅವರಲ್ಲಿ ನಿರಾಸೆ ತಾಂಡವವಾಡುತ್ತಿತ್ತು. ಕಂಪನಿಯಲ್ಲಿ ನಾಲ್ವಾರು ನಟರು ಕಂಪನಿ ಬಿಟ್ಟಿದ್ದರಿಂದ ರಾಮಾಯಣದಲ್ಲಿ ಸೀತೆ, ಸಂಸಾರ ನೌಕಾದಲ್ಲಿ ಸರಳ, ಗೌತಮಬುದ್ಧದಲ್ಲಿ ಯಶೋಧರ, ಷಹಜಾನ್‌ನಲ್ಲಿ ನಾದಿರ್ ಮುಂತಾದ ಪಾತ್ರಗಳು ಅವರಿಗೆ ದೊರಕಿ, ಪ್ರೇಕ್ಷಕರಿಂದ ಮೆಚ್ಚುಗೆ ದೊರೆಯತೊಡಗಿತು.
ಮುಂದೆ ಸಾಗರದಲ್ಲಿ ಗುಬ್ಬಿ ಕಂಪನಿ ಮೊಕ್ಕಾಂಮಾಡಿದಾಗ ಅಲ್ಲಿ ಸೇರ್ಪಡೆಗೊಂಡರು. ಸದಾರಮೆ ನಾಟಕವನ್ನು ಚಲನಚಿತ್ರವಾಗಿಸಲು ಬೊಂಬಾಯಿಯಲ್ಲಿ ಚಿತ್ರೀಕರಣ ಮಾಡಲಾಯಿತು. ಕುರುಕ್ಷೇತ್ರದಲ್ಲಿ ಗಾಂಧಾರಿ, ಶ್ರೀಕೃಷ್ಣನ ಪಾತ್ರ, ಗುಲೇಬಕಾವಲಿ, ಪ್ರಭಾಮಣಿ ವಿಜಯದಲ್ಲಿ ಪಾತ್ರ ದೊರೆಯಿತು. ಹೀಗೆ ಆಂಧ್ರದಲ್ಲೂ ಜಯಭೇರಿ ಭಾರಿಸಿದರು. ಇದೇ ಸಂದರ್ಭದಲ್ಲಿ ರಾಜಮಂಡ್ರಿ, ಕಾಕಿನಾಡ, ಹೈದರಾಬಾದ್‌ಗಳಲ್ಲೂ ನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡರು.
ಮುಂದೆ ಚಲನಚಿತ್ರಾಸಕ್ತರಾದ ವಾಸುದೇವ ಗಿರಿಮಾಜಿಯವರು ಹಲವಾರು ಪತ್ರವ್ಯವಹಾರ ನಡೆಸಿದರು. ಈ ಸಂದರ್ಭದಲ್ಲಿ ಅವರಿಗೆ ರಾಮಾನುಜ ಹಿಂದಿ ಚಿತ್ರದಲ್ಲಿ ಅಭಿನಯಿಸಲು ಕರೆ ಬಂತು. ಆದರೆ ಅಭಿನಯಕ್ಕೆ ಅವಕಾಶ ದೊರೆಯಲಿಲ್ಲ. ಬದಲಿಗೆ ಅವರಿಗೆ ದೊರೆತದ್ದು ಬಂಗಾಳಿ ಚಿತ್ರದ ಸಹಾಯಕ ನಿರ್ದೇಶಕರ ಹುದ್ದೆ. ಪಿ.ಸಿ. ಬರುವಾ ನಿಧನಾನಂತರ ಇರಾನ್-ಕಿ-ಏಕ್‌ರಾತ್ ಪೂರ್ಣ ನಿರ್ದೇಶನದ ಹೊಣೆ ನಿರ್ವಹಿಸಿದರು. ಕನ್ನಡದಲ್ಲಿ ಸುಭದ್ರಾ, ವಿಚಿತ್ರ ಪ್ರಪಂಚ, ಹಂಸಗೀತೆ, ನಾಗರಹೊಳೆ ಭರ್ಜರಿ ಭೇಟೆ, ಸಂಕ್ರಾಂತಿ ಮುಂತಾದವು ವಾಸುದೇವ ಗಿರಿಮಾಜಿ ಅವರು ವಿವಿಧ ಕಾಲಘಟ್ಟಗಳಲ್ಲಿ ನಟಿಸಿದ ಕೆಲವೊಂದು ಚಿತ್ರಗಳಲ್ಲಿ ಸೇರಿವೆ. ಹೀಗೆ ವಾಸುದೇವ ಗಿರಿಮಾಜಿಯವರು ಹಲವಾರು ಚಿತ್ರಗಳ ನಾಯಕ, ಖಳ ನಾಯಕ ಪಾತ್ರ ನಿರ್ವಹಿಸಿದ್ದರು.

ಹೀಗೆ ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ತಮ್ಮ ವಿಶಿಷ್ಟ ಛಾಪಿನಿಂದ ಕಂಗೊಳಿಸಿದ್ದ ವಾಸುದೇವ ಗಿರಿಮಾಜಿಯವರು 1993ರ ವರ್ಷದಲ್ಲಿ ಈ ಲೋಕವನ್ನಗಲಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪು.ತಿ.ನರಸಿಂಹಾಚಾರ್

Sun Mar 20 , 2022
  ಕನ್ನಡನಾಡಿನ ಮಹಾನ್ ಕವಿಗಳಾದ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ ಅವರು ಮೇಲುಕೋಟೆಯಲ್ಲಿನ ವೈದಿಕ ಮನೆತನಕ್ಕೆ ಸೇರಿದವರು. ಅವರ ಹಿರಿಯರು ಕೆಲವು ಶತಮಾನಗಳ ಹಿಂದೆ ತಿರುವಳ್ಳೂರಿನಿಂದ ಮೇಲುಕೋಟೆಗೆ ಬಂದವರು. ವೇದ, ಉಪನಿಷತ್ತು, ಆಗಮ, ತರ್ಕ, ಪುರಾಣ ಮುಂತಾದ ಹತ್ತು ಹಲವು ಜ್ಞಾನ ಶಾಖೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದ್ದ ಶ್ರೀ ತಿರುನಾರಾಯಣ ಅಯ್ಯಂಗಾರ್ ಮತ್ತು ಗೊರೂರಿನ ಶ್ರೀರಂಗಮ್ಮ ಇವರ ಮೊದಲ ಮಗನಾಗಿ ಮಾರ್ಚ್ 17, 1905ರಲ್ಲಿ ಜನಿಸಿದರು. ಅವರ ಬಾಲ್ಯದ ದಿನಗಳ ಭೌತಿಕ […]

Advertisement

Wordpress Social Share Plugin powered by Ultimatelysocial