ವಿಶಾಲಾಕ್ಷಿ ದಕ್ಷಿಣಾಮೂರ್ತಿ ಕನ್ನಡದ ಪ್ರಖ್ಯಾತ ಕಾದಂಬರಿಗಾರ್ತಿಯಾಗಿ ಹೆಸರಾದವರು. ಕನ್ನಡ ಚಲನಚಿತ್ರರಂಗದ ಅಪಾರ ಜನಪ್ರಿಯ ಚಿತ್ರ ‘ಜೀವನ ಚೈತ್ರ’ಕ್ಕೆ ಮೂಲವಾದ ‘ವ್ಯಾಪ್ತಿ ಪ್ರಾಪ್ತಿ’ ಕಾದಂಬರಿಯೂ ಸೇರಿದಂತೆ ಅವರ ಕಾದಂಬರಿಗಳು ಅನೇಕ. ಇಂದು ಅವರ ಸಂಸ್ಮರಣೆ ದಿನ.ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರು 1935ರ ನವೆಂಬರ್ 18ರಂದು ಚಳ್ಳಕೆರೆಯಲ್ಲಿ ಜನಿಸಿದರು. ಅವರು ಜನಿಸಿದ್ದು ಸಾಹಿತ್ಯ, ಸಂಸ್ಕೃತಿ, ಆದರ್ಶಗಳಿಗೆ ಹೆಸರಾದ ತಳುಕು ಮನೆತನದಲ್ಲಿ. ತಂದೆ ತಳುಕಿನ ಶ್ರೀನಿವಾಸರಾಯರು ಮತ್ತು ತಾಯಿ ನಂಜಮ್ಮನವರು.ಎಸ್.ಎಸ್.ಎಲ್.ಸಿ. ವರೆಗೆ ಓದಿದ ವಿಶಾಲಾಕ್ಷಿ ಅವರ ವಿದ್ಯಾಭ್ಯಾಸವೆಲ್ಲ ಚಳ್ಳಕೆರೆಯಲ್ಲಿ ನಡಯಿತು. ವಂಶದ ಹಿರಿಯ ಸಾಹಿತಿಗಳಾದ ಟಿ.ಎಸ್. ವೆಂಕಣ್ಣಯ್ಯ, ತ.ಸು.ಶಾಮರಾಯರು, ಜೊತೆಗೆ ಬೆಳೆಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ, ಬೆಳಗೆರೆ ಸೀತಾರಾಮಶಾಸ್ತ್ರಿಗಳು ಮತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳು ಮುಂತಾದವರಿಂದ ವಿಶಾಲಾಕ್ಷಿ ಅವರಿಗೆ ಚಿಕ್ಕಂದಿನಲ್ಲೇ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹುಟ್ಟಿತು.ವಿಶಾಲಾಕ್ಷಿ ಅವರಿಗೆ 12ನೆಯ ವಯಸ್ಸಿಗೇ ಮದುವೆಯಾದದ್ದು ಸಾಹಿತಿಗಳಾಗಿದ್ದ ಬಿ.ವಿ. ದಕ್ಷಿಣಾ ಮೂರ್ತಿ ಅವರೊಂದಿಗೆ. ದಕ್ಷಿಣಾಮೂರ್ತಿ ಅವರು ನ್ಯಾಷನಲ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಖ್ಯಾತಿ ಪಡೆದವರು. ಸುತ್ತಲಿನ ಸಮಾಜ, ವಂಶದ ಪ್ರಭಾವ, ಪತಿಯ ಪ್ರೇರಣೆ ಎಲ್ಲವೂ ಸೇರಿ, ತಾವು ಹಳ್ಳಿಯಲ್ಲಿ ಕಂಡುಂಡ ಬದುಕಿನ ನೈಜ ಚಿತ್ರಣವನ್ನು ಅಕ್ಷರ ರೂಪಕ್ಕಿಳಿಸಿ ವಿಶಾಲಾಕ್ಷಿ ಅವರು ಬರೆದ ಮೊದಲ ಕಾದಂಬರಿ ‘ವಸುಮತಿ’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇದಕ್ಕೆ ಓದುಗರಿಂದ ಅಪಾರ ಮೆಚ್ಚುಗೆಗಳು ಅವರ ಮುಂದಿನ ಅನೇಕ ಕಾದಂಬರಿಗಳ ರಚನೆಗೆ ಪ್ರೇರಣೆ ನೀಡಿತು.
ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ‘ಕಲ್ಲು ಬೊಂಬೆ ಕರಗಿತು’, ‘ವ್ಯಾಪ್ತಿ-ಪ್ರಾಪ್ತಿ’ ‘ಶ್ರೀವನಿತೆಯರಸನ’, ‘ಭ್ರಮೆಯ ಬದುಕಿನ ಸುತ್ತ’, ‘ವಿಮುಕ್ತಿ’, ‘ಆರಾಧಕ’, ‘ಗೌರವಾನ್ವಿತ’, ‘ಅಂತರಂಗದ ಕರೆ’, ‘ಸುಳಿಗೆ ಸಿಕ್ಕವರು’, ‘ಮನೆಯ ಮಗ’ ಮುಂತಾದ ಕಾದಂಬರಿಗಳು ಕನ್ನಡದ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಧಾರಾವಾಹಿಗಳಾಗಿ ಜನಪ್ರಿಯತೆ ಗಳಿಸಿದ್ದವು. ಇವಲ್ಲದೆ ಪತಂಗಗಳು, ಹೆಣ್ಣೆಂಬ ಬೊಂಬೆ, ಬೆಳಗು ಬೆಳಗೆಲೆ ಚಂದ್ರ, ಪಶ್ಚಾತ್ತಾಪ, ಒಲಿದು ಒಂದಾದವರು, ಸೆಳೆತಗಳು, ದೊಡ್ಡ ಮನಸ್ಸಿನವನು, ದುಂಬಿ ಹಂಬಲ, ಋಣಫಲ, ವಿರಾಗಿಣಿ ಮುಂತಾದ ಅವರ 60ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟಗೊಂಡವು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: