ಚಿರಂಜೀವಿ ಸರ್ಜಾ ಅಕಾಲಿಕ ಮರಣದ ನಂತರ ಸರ್ಜಾ ಕುಟುಂಬದಲ್ಲಿ ಮತ್ತೆ ಚಿರುನಗೆ ಮೂಡಿಸಲು ಮುದ್ದಾದ ಮಗುವಿನ ಆಗಮನವಾಗಿದೆ. ಚಿರುನನ್ನು ಕಳೆದುಕೊಂಡು ಕೊರಗಿ, ಸೊರಗಿದ್ದ ಕಲಾಕುಟುಂಬದ ನೋವಿಗೆ ದಿವ್ಯೌಷಧಿಯಂತೆ ದಿವಂಗತ ನಟನ ತದ್ರೂಪಿಯಂತಹ ಚಿಂಟೂ ಬಂದಿದ್ದಾನೆ.
ಮನೆಗೆ ಬಂದ ಜ್ಯೂ. ಚಿರು..
ಶೀಘ್ರದಲ್ಲೇ ಪಾಪು ನಾಮಕರಣ
ಚಿರು ಪತ್ನಿ ಮೇಘನಾ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಮುದ್ದು ಕಂದಮ್ಮನೊಂದಿಗೆ ಗೃಹ ಪ್ರವೇಶ ಮಾಡಿದ್ದಾರೆ. ಕುಟುಂಬದಲ್ಲಿ ಈಗ ಹಳೆಯ ಸಂಭ್ರಮ ಮರುಕಳಿಸಿದೆ. ಚಿರು ಮರುಜನ್ಮ ಪಡೆದಿದ್ದಾನೆ ಎಂದೇ ಪ್ರೀತಿ ಪಾತ್ರರು ಖುಷಿಪಡುತ್ತಿದ್ದಾರೆ. ಮುದ್ದು ಮೊಮ್ಮಗುವಿನ ಸುಂದರ ಮುಖ ನೋಡಿ ಹಿರಿ-ಹಿರಿ ಹಿಗ್ಗಿರುವ ಹಿರಿಯಜ್ಜ ಹಿರಿಯ ನಟ ಸುಂದರ್ ರಾಜ್ ಸಂತಸಕ್ಕೆ ಪಾರವೇ ಇಲ್ಲ. ಮೂರು ತಿಂಗಳು ಕಳೆದ ಮೇಲೆ ಅದ್ಧೂರಿಯಾಗಿ ಚಿರು ಮಗನಿಗೆ ನಾಮಕರಣ ಮಾಡಲಾಗುವುದು ಎಂದು ಮೇಘನಾ ತಂದೆ ಸುಂದರ್ ರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ.ತಿರುಪತಿ ತಿಮ್ಮಪ್ಪನ ಹರಕೆಯಿಂದಲೇ ಮೊಮ್ಮಗನ ಜನನವಾಗಿದೆ. ಅದರಲ್ಲೂ ದಸರಾ ಹಬ್ಬದ ಸಡಗರದ ಸಂದರ್ಭದಲ್ಲಿ ಮಗು ಹುಟ್ಟಿರೋದು ಕೂಡ ಶುಭ ಸಂಕೆತ. ನವೆಂಬರ್ 1 ರಂದು ಮೇಘನಾ ರಾಜ್ ಎಲ್ಲರೊಂದಿಗೆ ಮಾತನಾಡ್ತಾರೆ. ಕೊರೊನಾದ ಅಪಾಯ ಇರೋದರಿಂದ ಅವರು ಹೊರಬರುವಂತಿಲ್ಲ ಎಂದು ಸುಂದರ್ ರಾಜ ಹೇಳಿದ್ದಾರೆ.
ಚಿರು ಮಗುವಿಗೆ ನಿಕ್ ನೇಮ್ – ಒಂದಲ್ಲಾ ಎರಡು ಹೆಸರುಗಳು
ಚಿರು ಮಗಿವಿನ ನಿಕ್ ನೇಮ್ ಬಗ್ಗೆ ಮಾತನಾಡಿರುವ ತಾತ ಸುಂದರ್ ರಾಜ ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರನ್ನೆ ಸೆಲೆಕ್ಟ್ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಅಂತಾ ಕರೆಯುತ್ತಾಳೆ ಅಂದ್ರು.
20 ವರ್ಷಗಳ ನಂತರ ಹೀರೋ ಆಗ್ತಾನೆ ಚಿಂಟೂ – ಅಜ್ಜ ಅರ್ಜುನ್ ಲಾಂಚ್ ಮಾಡ್ತಾರಂತೆ
ಚಿರು ಮಗುವನ್ನ ನೋಡಿಬಹಳ ಖುಷಿ ಹಾಗೂ ತೃಪ್ತಿ ಸರ್ಜಾರ ಮುಖದಲ್ಲಿ ಕಾಣಿಸುತ್ತಿತ್ತು. ಮೊಮ್ಮಗ ಹುಟ್ಟಿದ ದಿನ ಅರ್ಜುನ್ ಸರ್ಜಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದರಿಂದ, ಆ ದಿನ ಮಗುವನ್ನ ನೋಡೋಕೆ ಸಾಧ್ಯವಾಗಿರಲಿಲ್ಲ. ಸದ್ಯ ಜ್ಯೂನಿಯರ್ ಚಿರುನ ನೋಡಿ ಕಣ್ತುಂಬಿಕೊಂಡಿದ್ದಾರೆ ಅರ್ಜುನ್ ಸರ್ಜಾ. ’36 ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಹುಟ್ಟಿದಾಗ ನಾನು ಇದೇ ಥರದ ಸಂದರ್ಭಕ್ಕೆ ಒಳಗಾಗಿದ್ದೆ. ಬಹುಶಃ ಚಿರುನ ಲಾಂಚ್ ಮಾಡಿದ ಹಾಗೇ 20 ವರ್ಷಗಳ ನಂತರ, ಅವನ ಮಗ ಜ್ಯೂನಿಯರ್ನೂ ನಾನೇ ಲಾಂಚ್ ಮಾಡ್ತೀನಿ ಅನ್ಸುತ್ತೆ’ ಅಂತಾ ಖುಷಿ-ಖುಷಿಯಾಗಿ ಅರ್ಜುನ್ ಸರ್ಜಾ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅರ್ಜುನ್ ಸರ್ಜಾ ಮಾತಿನಂತೆ ಜ್ಯೂನಿಯರ್ ಚಿರುನನ್ನೆ ಅವರೆ ಲಾಂಚ್ ಮಾಡಿದರೂ ಅಚ್ಚರಿಯಿಲ್ಲ.
ಇನ್ನು ಜ್ಯೂನಿಯರ್ ಚಿರಂಜೀವಿ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿರುವ ತಾತ ಸುಂದರ್ ರಾಜ್ ‘ಈ ಮಗು ಸರ್ಜಾ ಕುಟುಂಬದ ಕುಡಿ. ಚಿರು ಅನುಪಸ್ಥಿತಿಯಲ್ಲಿಯೇ ಮಗುವನ್ನ ನೋಡಿಕೊಳ್ಳುವುದು ತಾಯಿಯ ಕರ್ತವ್ಯ. ಈ ಸ್ಥಿತಿಯಲ್ಲಿ ಮಗಳನ್ನ ಆರೈಕೆ ಮಾಡೋದು ನಮ್ಮ ಕರ್ತವ್ಯ. ಹಾಗಾಗಿ ಜೂನಿಯರ್ ಚಿರು ನಮ್ಮ ಮನೆಯಲ್ಲಿಯೇ ಬೆಳೆಯಲಿದ್ದಾನೆ. ಮಗು ಇಲ್ಲಿಯೂ ಇರುತ್ತೆ, ಅಲ್ಲಿಯೂ ಇರಬೇಕು. ಎರಡೂ ಕುಟುಂಬಗಳ ಆರೈಕೆಯಲ್ಲಿ ಮಗು ಬೆಳೆಯಲಿದೆ. ಎನ್ನುವ ಮಾಹಿತಿಯನ್ನು ಸುಂದರ್ ರಾಜ್ ನೀಡಿದರು.