ಸರ್ಕಾರಿ ಸಂಸ್ಥೆಗಳಲ್ಲಿ ಸಾಮಾನ್ಯವಾಗಿ 8 ಗಂಟೆ ಮತ್ತು ಇತರೆ ಖಾಸಗಿ ಸಂಸ್ಥೆಯಲ್ಲಿ 8 ಇಲ್ಲಾ 9 ಗಂಟೆ ಕೆಲಸ ಮಾಡುವ ಪದ್ಧತಿ ಇದೆ. ಸುಮಾರು ವರ್ಷಗಳಿಂದ ಇದೇ ಪದ್ಧತಿ ನಡೆದುಕೊಂಡು ಬಂದಿದೆ.ಆದರೆ ಕಳೆದ ವರ್ಷ ದೇಶದಲ್ಲಿ ನೂತನ ಕಾರ್ಮಿಕ ಸಂಹಿತೆ ಜಾರಿಯಾದರೆ ವಾರಕ್ಕೆ ನಾಲ್ಕು ದಿನಗಳ ಕೆಲಸ ಮತ್ತು ಕಚೇರಿ ಅವಧಿಯನ್ನು 8 ರಿಂದ 12 ಗಂಟೆಗೆ ಹೆಚ್ಚಳ ಮಾಡುವ ಹೊಸ ಆಯ್ಕೆಯನ್ನು ಕಾರ್ಮಿಕರಿಗೆ ವ್ಯವಸ್ಥೆಗೊಳಿಸುವ ಪ್ರಸ್ತಾಪವನ್ನು ಕೈಗೆತ್ತಿಕೊಂಡಿತ್ತು. ಆದರೆ ಈ ಪ್ರಸ್ತಾವನೆ ಬಗ್ಗೆ ಸದ್ಯ ಕೇಂದ್ರ ಸ್ಪಷ್ಠೀಕರಣ ನೀಡಿದ್ದು, ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಂಧಿಸಿದಂತೆ 8 ರಿಂದ 12 ಗಂಟೆಗೆ ಕೆಲಸದ ಅವಧಿ ಯನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದೆ.ಕೇಂದ್ರ ಸರಕಾರವು ತನ್ನ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ಕೆಲಸವನ್ನು 8 ರಿಂದ 12 ಗಂಟೆಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ರಾಜ್ಯ ಸಿಬ್ಬಂದಿ ಖಾತೆ ಸಚಿವ ಜಿತೇಂದ್ರ ಸಿಂಗ್ ಘೋಷಿಸಿದ್ದಾರೆ. ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ಈ ಕುರಿತು ಹೇಳಿದ್ದಾರೆ.
“ಸರ್ಕಾರವು ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಮಾನವ-ಗಂಟೆಗಳ ಕೆಲಸವನ್ನು ದಿನಕ್ಕೆ 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸುವ ಯಾವುದಾದರು ಪ್ರಕ್ರಿಯೆಯಲ್ಲಿದೆಯೇ” ಎಂಬ ಪ್ರಶ್ನೆಗೆ “ಅಂತಹ ಯಾವುದೇ ಪ್ರಸ್ತಾವನೆಯು ಸರ್ಕಾರದ ಪರಿಗಣನೆಯಲ್ಲಿಲ್ಲ” ಎಂದು ರಾಜ್ಯ ಸಿಬ್ಬಂದಿ ಖಾತೆ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.ಸಿಬ್ಬಂದಿ ಖಾತೆ ಸಚಿವರು ಈ ಬಗ್ಗೆ ಘೋಷಿಸುವ ಮೂಲಕ ನಾಲ್ಕು ದಿನಗಳ ಕೆಲಸ ಮತ್ತು ಕಚೇರಿ ಅವಧಿಯನ್ನು 8 ರಿಂದ 12ಗಂಟೆಗೆ ಹೆಚ್ಚಳ ಮಾಡುವ ವಿಷಯಕ್ಕೆ ತೆರೆ ಬಿದ್ದಿದೆ. ಮತ್ತು ಇದು ಕೇವಲ ಸರ್ಕಾರಿ ಸಂಸ್ಥೆಗಳಿಗೆ ಅನ್ವಯಿಸಿದ್ದು, ಖಾಸಗಿ ಕಂಪನಿಗಳ ಬಗ್ಗೆ ಕೇಂದ್ರ ಪ್ರಸ್ತಾಪ ಮಾಡಿಲ್ಲ.ಹೊಸ ಕಾರ್ಮಿಕ ಸಂಹಿತೆಯ ಪ್ರಕಾರ ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧ ಮತ್ತು ಔದ್ಯೋಗಿಕ ಸುರಕ್ಷತೆಗೆ ಸಂಬಂಧಿಸಿದಂತೆ 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಾಗಿ ಸಂಯೋಜಿಸುವ ಯೋಜನೆಯನ್ನು ಕೇಂದ್ರ ಹಾಕಿಕೊಂಡಿತ್ತು.ಸಂಘಟಿತ ವಲಯ, ಕೇಂದ್ರ, ರಾಜ್ಯ ಸರಕಾರಿ ಹಾಗೂ ಖಾಸಗಿ ವಲಯಕ್ಕೆ ಕಾರ್ಮಿಕ ಸಂಹಿತೆ ಅನ್ವಯವಾಗಲಿದೆ. ಇದರಿಂದಾಗಿ ಉದ್ಯೋಗ ಮತ್ತು ಕೆಲಸದ ಸ್ವರೂಪದಲ್ಲಿ ಬದಲಾವಣೆಯಾಗುವ ಬಗ್ಗೆ ಪ್ರಸ್ತಾಪ ಹಂಚಿಕೊಂಡಿತ್ತು. 2019ರಲ್ಲಿ ಕಾರ್ಮಿಕ ಸಂಹಿತೆ ಕೂಡ ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು.ಉದ್ಯೋಗಿಗಳ ವೇತನ, ಕೆಲಸದ ಸಮಯ, ವಾರದ ಕೆಲಸದ ದಿನಗಳಲ್ಲಿ ಬದಲಾವಣೆ ಆಗಲಿದೆ ಎಂದು ಕೇಂದ್ರ ಹೇಳಿತ್ತು. ಕಚೇರಿಗಳು ಮತ್ತು ಉದ್ಯೋಗಿಗಳು ವಾರಕ್ಕೆ 4, 5, 6 ದಿನಗಳ ಕೆಲಸದ ಪದ್ಧತಿಯಲ್ಲಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು.ಆದರೆ ವಾರದ 4 ದಿನಗಳಲ್ಲಿ ದಿನಕ್ಕೆ 12 ಗಂಟೆಗಳ ತನಕ ಕೆಲಸ ಮಾಡಬೇಕಾಗುತ್ತದೆ. ಏಕೆಂದರೆ ವಾರಕ್ಕೆ ಗರಿಷ್ಠ 48 ಗಂಟೆಗಳ ಕೆಲಸ ಅವಶ್ಯಕ ಎಂದು ಕಾರ್ಮಿಕ ಸಚಿವಾಲಯ ತಿಳಿಸಿತ್ತು.ಈ ಪ್ರಸ್ತಾವನೆ ಜಾರಿಯಾದರೆ ಉದ್ಯೋಗಿಗಳ ವೇತನ ಇಳಿಕೆಯಾಗಲಿದೆ. ಆದರೆ ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್-ಪಿಎಫ್) ಮೊತ್ತವನ್ನು ಕಂಪನಿಗಳು ಹೆಚ್ಚು ನೀಡಬೇಕಾಗುತ್ತದೆ ಎಂದು ಹೇಳಲಾಗಿತ್ತು. ಉದ್ಯೋಗಿಗಳ ವೇತನದಲ್ಲಿ ಭತ್ಯೆಯು ವೇತನದ ಶೇ. 50 ಭಾಗಕ್ಕೆ ಸೀಮಿತವಾಗಲಿದೆ. ಅಂದರೆ ಸಂಬಳದಲ್ಲಿ ಅರ್ಧ ಪಾಲು ತುಟ್ಟಿ ಭತ್ಯೆಯನ್ನು ಒಳಗೊಂಡಿರುವ (ಡಿಎ) ಮೂಲ ವೇತನವಾಗುತ್ತದೆ. ಪಿಎಫ್ಗೆ ಸಂದಾಯವಾಗುವ ಮೊತ್ತವು ಮೂಲ ವೇತನದ ಶೇಕಡಾವಾರು ಪಾಲನ್ನು ಅವಲಂಬಿಸಿರುತ್ತದೆ. ಈ ರೀತಿಯಾಗಿ ಕೇಂದ್ರ ತನ್ನ ಹೊಸ ನಿಯಮ ಜಾರಿ ಮಾಡಲು ಯೋಜನೆ ಹಾಕಿಕೊಂಡಿತ್ತು.ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋದವರು ರಾತ್ರಿ 10 ಗಂಟೆ ತನಕ ದುಡಿದ್ರೆ ನಿಜಕ್ಕೂ ಗುಣಮಟ್ಟದ ಕೆಲಸ ನಿರ್ವಹಿಸಲು ಸಾಧ್ಯವೇ? ಎಂಬ ಪ್ರಶ್ನೆಯನ್ನು ನೌಕರರು ಕೇಂದ್ರದ ಮುಂದಿಟ್ಟಿದ್ದರು. ಇದು ಸಾದ್ಯವಾಗದ ಕೆಲಸ, ಉದ್ಯೋಗಿಗಳ ಆರೋಗ್ಯದ ಕಥೆಯೇನಾಗಬೇಕು ಎಂಬ ವಿರೋಧಗಳು ಕೆಳಿ ಬಂದಿದ್ದವು.ಕೇಂದ್ರವು ಕಳೆದ ಡಿಸೆಂಬರ್ನಲ್ಲಿ ಈ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡಿದ್ದು, 2022ರಲ್ಲಿ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿತ್ತು. ಆದರೆ ಎಲ್ಲಾ ಅಂಶಗಳನ್ನು ಪರಿಗಣಿಸುವ ಮೂಲಕ ನೌಕರರ ಕೆಲಸದ ಸಮಯ ಮತ್ತು ದಿನಗಳಲ್ಲಿ ಬದಲಾವಣೆ ತರುವ ಯೋಜನೆಯನ್ನು ಕೈ ಬಿಟ್ಟಿದ್ದೇವೆ ಎಂದು ಸ್ಟಷ್ಟನೆ ನೀಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: