ಬಾಲಿವುಡ್ ಸ್ಟಾರ್ ನಟರೇ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಂತೆ ವಿಶ್ವಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ ನಟ ಪ್ರಭಾಸ್. ‘ಬಾಹುಬಲಿ’ ಮಾಡಿರುವ ಮ್ಯಾಜಿಕ್ ಅಂಥಹದ್ದು.
‘ಬಾಹುಬಲಿ’ ಸಿನಿಮಾ ವಿಶ್ವದ ಹಲವು ಭಾಷೆಗಳಿಗೆ ತರ್ಜುಮೆಗೊಂಡು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಹಾಗಾಗಿ ಹಲವು ರಾಷ್ಟ್ರಗಳಲ್ಲಿ ಪ್ರಭಾಸ್ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಪ್ರಭಾಸ್ ಜನಪ್ರಿಯತೆ ಹೆಚ್ಚಾಗಿರುವ ಬೆನ್ನಲ್ಲೆ ಅವರ ಬೇಡಿಕೆಯು ಹಲವು ಪಟ್ಟು ಹೆಚ್ಚಾಗಿದೆ. ಪ್ರಭಾಸ್ ಮೇಲೆ ಸಾವಿರಾರು ಕೋಟಿ ಹಣ ಹೂಡಲು ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಪ್ರಭಾಸ್ ನಟನೆಯ ಹೊಸ ಸಿನಿಮಾವೊಂದು ಹೊಸ ದಾಖಲೆಯನ್ನು ಬರೆಯುವತ್ತ ದಾಪುಗಾಲು ಹಾಕಿದೆ.
ಪ್ರಭಾಸ್ ನಟಿಸಿರುವ ‘ಆದಿಪುರುಷ್’ ಸಿನಿಮಾ ಭಾರತದ ಈವರೆಗೆ ಅತಿ ಹೆಚ್ಚು ಬಜೆಟ್ನ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಪೌರಾಣಿಕ ಕತೆಯನ್ನು ಹೊಂದಿರುವ ಕಾರಣ ಪೋಸ್ಟ್ ಪ್ರೊಡಕ್ಷನ್ಗೆ ತುಸು ಹೆಚ್ಚು ಸಮಯ ಹಾಗೂ ಸಂಪನ್ಮೂಲದ ಖರ್ಚಾಗಲಿದೆ.
ಸಿನಿಮಾಕ್ಕೆ ಭಾರಿ ಬಂಡವಾಳ ಹೂಡಲಾಗಿದೆ
ಈ ಸಿನಿಮಾವನ್ನು ಟಿ-ಸೀರೀಸ್ನ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದು, ಭಾರಿ ಬಂಡವಾಳವನ್ನು ಸಿನಿಮಾಕ್ಕೆ ಹೂಡಿದ್ದಾರೆ. ಅಂತೆಯೇ ಹೂಡಿರುವ ದೊಡ್ಡ ಬಂಡವಾಳವನ್ನು ವಾಪಸ್ ಪಡೆಯಲು ಸಹ ದೊಡ್ಡ ಯೋಜನೆಯನ್ನೇ ಹಾಕಿದ್ದಾರೆ. ಭಾರತದ ಇನ್ನಾವ ಸಿನಿಮಾಗಳೂ ಬಿಡುಗಡೆ ಆಗದಷ್ಟು ಹೆಚ್ಚು ಸಂಖ್ಯೆಯ ಸ್ಕ್ರೀನ್ಗಳಲ್ಲಿ ‘ಆದಿಪುರುಷ್’ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ.
ಹದಿನೇಳು ಭಾಷೆಗೆ ‘ಆದಿಪುರುಷ್’ ಸಿನಿಮಾ ಡಬ್?
‘ಆದಿಪುರುಷ್’ ಸಿನಿಮಾವನ್ನು ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಮಾತ್ರವೇ ಅಲ್ಲದೆ ಭಾರತದ ಇತರ ಭಾಷೆಗಳಾದ ಮರಾಠಿ, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಭಾಷೆಗಳಿಗೂ ಡಬ್ ಮಾಡಿ ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. ಇದರ ಜೊತೆಗೆ ವಿದೇಶಿ ಭಾಷೆಗಳಾದ ಇಂಗ್ಲೀಷ್, ಚೈನೀಸ್, ಜರ್ಮನಿ ಭಾಷೆಗಳಿಗೂ ‘ಆದಿಪುರುಷ್’ ಸಿನಿಮಾ ಡಬ್ ಆಗಲಿರುವುದು ವಿಶೇಷ.
20,000 ಸ್ಕ್ರೀನ್ಗಳಲ್ಲಿ ‘ಆದಿಪುರುಷ್’?
‘ಆದಿಪುರುಷ್’ ಸಿನಿಮಾವನ್ನು ಒಂದೇ ಬಾರಿಗೆ 20,000 ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಲು ಸಹ ನಿರ್ಮಾಪಕರು ಯೋಜಿಸಿದ್ದಾರೆ. ಸಿನಿಮಾಕ್ಕೆ ಸುಮಾರು 500 ಕೋಟಿ ಬಂಡವಾಳ ಹೂಡಿದ್ದು ಅಷ್ಟು ಹಣವನ್ನು ಅತಿ ಶೀಘ್ರದಲ್ಲಿ ಮರಳಿ ಪಡೆಯಬೇಕೆಂದರೆ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲೇ ಬೇಕಾದ ಒತ್ತಡ ಇದೆ. ಈಗಾಗಲೇ ಪ್ರಭಾಸ್ಗೆ ವಿದೇಶದಲ್ಲಿ ಅಭಿಮಾನಿ ಬಳಗವಿದ್ದು ಅದನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ಯೋಜನೆ ನಿರ್ಮಾಪಕರದ್ದು.
ರಾವಣನಾಗಿ ಸೈಫ್ ಅಲಿ ಖಾನ್
‘ಆದಿಪುರುಷ್’ ಸಿನಿಮಾವು ರಾಮಾಯಣದ ಕತೆಯನ್ನು ಹೊಂದಿದ್ದು ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದು, ಸೀತೆ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಸ್ಟಾರ್ ನಟ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ನಟಿಸಿದ್ದಾರೆ. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದಾರೆ.
ಪ್ರಸ್ತುತ ಪ್ರಭಾಸ್ ನಟನೆಯ ‘ರಾಧೆ-ಶ್ಯಾಮ್’ ಬಿಡುಗಡೆಗೆ ಸಿದ್ಧವಾಗಿದೆ. ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಸಲಾರ್’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ‘ಆದಿ ಪುರುಷ್’ ಬಿಡುಗಡೆ ಕಾಣಲಿದೆ. ಇದೀಗ ಪ್ರಭಾಸ್ ಹೊಸ ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದು, ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಸಹ ಇದ್ದಾರೆ. ಸಿನಿಮಾವನ್ನು ‘ಮಹಾನಟಿ’ ನಿರ್ದೇಶಿಸಿದ್ದ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ‘ಸ್ಪಿರಿಟ್’ ಹೆಸರಿನ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದು ಆ ಸಿನಿಮಾವನ್ನು ‘ಅರ್ಜುನ್ ರೆಡ್ಡಿ’ ನಿರ್ದೇಶಿಸಿದ್ದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada