ಕನ್ನಡಿಗರಾದ ಪ್ರೊ. ಎಂ. ಯಾಮುನಾಚಾರ್ಯ ನಮ್ಮ ನಾಡಿನ ಮಹಾನ್ ತತ್ತ್ವಶಾಸ್ತ್ರಜ್ಞರೂ ಮತ್ತು ಲೇಖಕರೂ ಆಗಿ ವಿಶ್ವಪ್ರಸಿದ್ಧರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.
ಪ್ರೊ. ಯಾಮುನಾಚಾರ್ಯರು 1899ರ ಸೆಪ್ಟೆಂಬರ್ 3ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ನಾರಣೈಯ್ಯಂಗಾರ್. ತಾಯಿ ಮಾಣಿಕ್ಯಮ್ಮ.
ಯಾಮುನಾಚಾರ್ಯರ ತಾತ ಅಲ್ಕೊಂಡವಿಲ್ಲಿ ಗೋವಿಂದಾಚಾರ್ಯ ಸ್ವಾಮಿಗಳು ಪೂರ್ವಾಶ್ರಮದಲ್ಲಿ ಮೈಸೂರು ಸರ್ಕಾರದ ಇಂಜಿನಿಯರ್ ಆಗಿದ್ದರು. ಅವರು ಅನುಭಾವಿಗಳು ಮತ್ತು ನಿಮ್ನವರ್ಗದವರ ಏಳಿಗೆಗಾಗಿ ತುಂಬಾ ಶ್ರಮಿಸಿ ನೂರಾರು ಆದಿದ್ರಾವಿಡ ಶಿಷ್ಯವರ್ಗವನ್ನು ಬೆಳೆಸಿದ್ದರು. ವೈಷ್ಣವ ಅನುಭಾವವನ್ನು ಕುರಿತು ಇಂಗ್ಲಿಷ್ನಲ್ಲಿ ಅವರು ಒಂದು ಪ್ರಮಾಣ ಗ್ರಂಥವನ್ನೂ ಬರೆದಿದ್ದಾರೆ. ತಮ್ಮ ತಾತಂದಿರ ಪ್ರಭಾವದಿಂದ ಯಾಮುನಾಚಾರ್ಯರಿಗೆ ಚಿಕ್ಕಂದಿನಲ್ಲಿಯೇ ತತ್ತ್ವಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಬೆಳೆಯಿತು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದ ಯಾಮುನಾಚಾರ್ಯರು, ಆ ಕಾಲೇಜಿನಲ್ಲಿ ಅನೇಕ ವರ್ಷಗಳ ಕಾಲ ತತ್ತ್ವಶಾಸ್ತ್ರದ ಅಧ್ಯಾಪಕರಾಗಿದ್ದರು. ಅನಂತರ ಹಾಸನದ ಇಂಟರ್ಮೀಡಿಯೆಟ್ ಕಾಲೇಜಿನ ಸೂಪರಿಂಟೆಂಡೆಂಟಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು (1956). ಮುಂದೆ ಮೈಸೂರಿನಲ್ಲಿ ಸ್ಥಾಪಿತವಾದ ಗಾಂಧೀ ವಿಚಾರ ಸಂಸ್ಥೆಯ ಅಧ್ಯಕ್ಷರಾಗಿ ಗಾಂಧೀ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ಕೆಲಸದಲ್ಲಿ ನಿರತರಾಗಿದ್ದ ಇವರು ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಾಲ್ಕುತಿಂಗಳ ಕಾಲ ಗಾಂಧೀತತ್ವ ಮತ್ತು ಭಾರತೀಯ ತತ್ವಗಳನ್ನು ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದರು. 1967-68ರಲ್ಲಿ ದೆಹಲಿಯ ಗಾಂಧೀ ಪೀಸ್ ಫೌಂಡೇಷನ್ ಅಧ್ಯಕ್ಷರಾಗಿಯೂ ಯಾಮುನಾಚಾರ್ಯರು ಕಾರ್ಯ ನಿರ್ವಹಿಸಿದರು. ಇಂಗ್ಲಿಷ್, ಕನ್ನಡ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯ ಗಳಿಸಿಕೊಂಡಿದ್ದ ಯಾಮುನಾಚಾರ್ಯರು ಜನಪ್ರಿಯ ಭಾಷಣಕಾರರೂ ಆಗಿದ್ದರು.
ಯಾಮುನಾಚಾರ್ಯರು ತತ್ತ್ವಶಾಸ್ತ್ರ, ಗಾಂಧೀಸಾಹಿತ್ಯ ಮುಂತಾದ ಅನೇಕ ವಿಷಯಗಳನ್ನು ಕುರಿತು ಅನೇಕ ಲೇಖನಗಳನ್ನೂ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ಪಾಶ್ಚಾತ್ಯ ರಾಜಕೀಯ ತತ್ತ್ವಗಳು, ನಮ್ಮ ಆಳ್ವಾರುಗಳು, ಆಧುನಿಕ ತರ್ಕಶಾಸ್ತ್ರ ಸಂಗ್ರಹ, ಮತಧರ್ಮ ತತ್ವಶಾಸ್ತ್ರ, ಆಚಾರ್ಯ ರಾಮಾನುಜರು ಮುಂತಾದ ಕೃತಿಗಳು ಇವುಗಳಲ್ಲಿ ಸೇರಿವೆ. ಮತಧರ್ಮದ ಪುನರುಜ್ಜೀವನ ಮತ್ತು ಮನಸ್ಸು ಎಂಬ ಎರಡು ಪುಸ್ತಕಗಳನ್ನು ಅವರು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: