ಸ್ವಪಕ್ಷೀಯ ನಾಯಕರನ್ನು ಹಿಗ್ಗಾಮುಗ್ಗಾ ಟೀಕೆ ಮಾಡುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕಮಾಂಡ್ನ ಸೂಚನೆ ಮೇರೆಗೆ ಇನ್ನು ಮುಂದೆ ಯಾವುದೇ ಟೀಕೆ-ಟಿಪ್ಪಣಿ ಮಾಡದೆ ಮೌನವಾಗಿರಲು ನಿರ್ಧರಿಸಿದ್ದಾರೆ.
ಶಾಸಕ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಆಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿದ್ದು, ಹೈಕಮಾಂಡ್ ಕೇವಲ ಖಡಕ್ ಎಚ್ಚರಿಕೆ ನೀಡಿದೆ. ಯಾವುದೇ ಶಿಸ್ತುಕ್ರಮ ಜರುಗಿಸುವ ಧೈರ್ಯ ತೋರಿಲ್ಲ. ಚುನಾವಣಾ ಸಂದರ್ಭದಲ್ಲಿ ಯತ್ನಾಳ್ ವಿರುದ್ಧ ಕ್ರಮಕೈಗೊಂಡರೆ ಲಿಂಗಾಯತ ಪಂಚಮಸಾಲಿ ಸಮುದಾಯ ತಿರುಗಿ ಬೀಳಬಹುದು ಎಂದು ಹೈಕಮಾಂಡ್ ಯತ್ನಾಳ್ ವಿರುದ್ಧ ಶಿಸ್ತುಕ್ರಮದ ಧೈರ್ಯ ತೋರಿಲ್ಲ ಎನ್ನಲಾಗಿದೆ.
ಲಿಂಗಾಯತ ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಯತ್ನಾಳ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ನಿರಾಣಿ ಸೇರಿದಂತೆ ಹಲವು ನಾಯಕರುಗಳ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದರು. ಯತ್ನಾಳ್ ಅವರ ಟೀಕೆಗಳು ಬಿಜೆಪಿ ನಾಯಕರಲ್ಲಿ ಇರಿಸು-ಮುರಿಸು ತರಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ಗೂ ದೂರು ನೀಡಲಾಗಿತ್ತು. ಹೈಕಮಾಂಡ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿ ದೆಹಲಿಗೆ ಬರುವಂತೆ ಸೂಚಿಸಿತ್ತು. ಹೈಕಮಾಂಡ್ನ ಸೂಚನೆಯಂತೆ ೨ ದಿನಗಳ ಹಿಂದೆ ಗುಟ್ಟಾಗಿ ದೆಹಲಿಗೆ ಹೋಗಿ ಬಂದಿರುವ ಯತ್ನಾಳ್ಗೆ ಹೈಕಮಾಂಡ್ ಖಡಕ್ ವಾರ್ನಿಂಗ್ ನೀಡಿ, ಚುನಾವಣಾ ಸಂದರ್ಭ ಶಿಸ್ತು ಮೀರದಂತೆ ಸೂಚನೆ ನೀಡಿದೆ. ಹಾಗಾಗಿ, ಯತ್ನಾಳ್ ಇನ್ನು ಮುಂದೆ ಯಾರ ವಿರುದ್ಧವೂ ಟೀಕೆ-ಟಿಪ್ಪಣಿ ಮಾಡದಿರುವ ನಿಲುವಿಗೆ ಬಂದಿದ್ದಾರೆ.
https://play.google.com/store/apps/details?id=com.speed.newskannada