ನಟ ಶಿವರಾಜ್ ಕುಮಾರ್ ಕನ್ನಡ ಚಿತ್ರೋದ್ಯಮದ ಹಿರಿಯ ಮತ್ತು ಬಹಳ ಬ್ಯುಸಿ ನಟ. ಜೊತೆಗೆ ಹೊಸ ತಲೆಮಾರಿನ ಎಲ್ಲ ನಟರೊಟ್ಟಿಗೆ ಬಹಳ ಆಪ್ತ ಬಂಧವನ್ನು ಶಿವಣ್ಣ ಹೊಂದಿದ್ದಾರೆ.
ಯಾರದ್ದೇ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮವಿರಲಿ, ಸಕ್ಸಸ್ ಮೀಟ್, ಟ್ರೇಲರ್ ಲಾಂಚ್ಗಳಿರಲಿ ಶಿವರಾಜ್ ಕುಮಾರ್ ಅವರನ್ನು ಕರೆಯುತ್ತಾರೆ.
ಶಿವರಾಜ್ ಕುಮಾರ್ ಸಹ ಬಹಳ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನಸಾರೆ ಯಶಸ್ಸಾಗಲೆಂದು ಹಾರೈಸುತ್ತಾರೆ.
ದುನಿಯಾ ವಿಜಯ್ ಮೊದಲ ಬಾರಿಗೆ ನಟಿಸಿ, ನಿರ್ದೇಶನ ಮಾಡಿರುವ ‘ಸಲಗ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಭಾಗವಹಿಸಿದ್ದರು. ನಿನ್ನೆ ನಡೆದ ಸಕ್ಸಸ್ ಮೀಟ್ನಲ್ಲಿಯೂ ಭಾಗವಹಿಸಿದ್ದರು. ಈ ಸಮಯದಲ್ಲಿ ದುನಿಯಾ ವಿಜಯ್ ಬಗ್ಗೆ ಮಾತನಾಡುತ್ತಾ. ಒಂದು ಪಾತ್ರವನ್ನು ಮಾಡಬೇಡವೆಂದು ದುನಿಯಾ ವಿಜಯ್ ಹೇಳಿದ್ದ ಹಳೆಯ ವಿಷಯವನ್ನು ನೆನಪಿಸಿಕೊಂಡರು.
ದುನಿಯಾ ಸಿನಿಮಾ ನೆನೆದ ಶಿವಣ್ಣ
‘ದುನಿಯಾ ಸಿನಿಮಾದ ಮುಹೂರ್ತಕ್ಕೆ ಕರೆಯಲು ಸೂರಿ ಬಂದಿದ್ದರು. ಆದರೆ ಆಗ ನಾನು ಬೇಸರದಲ್ಲಿದ್ದೆ. ಆ ಟೈಮು ಸರಿಯಿರಲಿಲ್ಲ (ರಾಜ್ಕುಮಾರ್ ಆಗಷ್ಟೆ ನಿಧನ ಹೊಂದಿದ್ದರು) ನಾನು ಮುಹೂರ್ತಕ್ಕೆ ಹೋಗಲಾಗಲಿಲ್ಲ. ನಂತರ ಸಿನಿಮಾ 50 ದಿನ ಪೂರೈಸಿದಾಗ ನಾನು ‘ದುನಿಯಾ’ ಸಿನಿಮಾ ನೋಡಿದೆ. ಅದೊಂದು ಅದ್ಭುತ ಸಿನಿಮಾ. ಅದೇ ಸಮಯದಲ್ಲಿ ‘ಮುಂಗಾರು ಮಳೆ’ ಸಿನಿಮಾ ಧೂಳೆಬ್ಬಿಸಿತ್ತು. ಆ ಸಿನಿಮಾದಲ್ಲಿ ವಿಜಿಯ ನಟನೆ, ಸೂರಿಯ ನಿರ್ದೇಶನ ಇರಬಹುದು ಎಲ್ಲ ಚೆನ್ನಾಗಿತ್ತು. ಆ ಸಿನಿಮಾದ ಮೂಲಕ ಮತ್ತೊಬ್ಬ ಸ್ಟಾರ್ ಹುಟ್ಟಿಕೊಂಡ ಅದುವೇ ಲೂಸ್ ಮಾದ. ಒಟ್ಟಾರೆ ಅದೊಂದು ಅದ್ಭುತ ಸಿನಿಮಾ” ಎಂದು ಹಳೆಯ ನೆನಪಿಗೆ ಜಾರಿದರು ಶಿವಣ್ಣ.
ಎಲ್ಲರೂ ನನಗೆ ಆಪ್ತ ಗೆಳೆಯರು: ಶಿವಣ್ಣ
ವಿಜಿ ನನಗೆ ಬಹಳ ವರ್ಷಗಳ ಪರಿಚಯ. ನನ್ನ ಎಲ್ಲ ವಿಷಯಕ್ಕೂ ವಿಜಿ ಬಂದಿದ್ದಾರೆ. ನಮ್ಮಿಬ್ಬರ ಬಂಧದ ಬಗ್ಗೆ ನಮಗೆ ಮಾತ್ರ ಗೊತ್ತು. ಅದರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ. ವಿಜಿ ನನಗೆ ಒಳ್ಳೆಯ ಗೆಳೆಯ, ಒಳ್ಳೆಯ ವೆಲ್ ವಿಶರ್. ಗೌರವದಿಂದ ಮಾತನಾಡಿಸುತ್ತಾರೆ. ಎಲ್ಲರೊಂದಿಗೆ ಗೌರವ ದಿಂದ ಇದ್ದಾರೆ. ಶ್ರೀನಗರ ಕಿಟ್ಟಿ ಆಗಲಿ. ಗಣೇಶ್ ಆಗಲಿ ಎಲ್ಲರೂ ನನಗೆ ಆಪ್ತರೆ. ಅವರ ಗ್ರೂಪ್ ಎಲ್ಲ ನನ್ನನ್ನು ಅವರ ವಯಸ್ಸಿನವನೇನೋ ಎಂಬಂತೆ ಟ್ರೀಟ್ ಮಾಡುತ್ತಿದ್ದಾರೆ ಅದಕ್ಕೆ ಧನ್ಯವಾದ. ನನ್ನ ಸುತ್ತಲೂ ಇರುವವರು ಪಾಸಿಟಿವ್ ಆಗಿದ್ದಾಗ ನಾನು ಪಾಸಿಟಿವ್ ಆಗಿರುತ್ತೇನೆ ಅದರ ಮೂಲಕ ಆರೋಗ್ಯ ವೃದ್ಧಿಸುತ್ತದೆ” ಎಂದರು ಶಿವಣ್ಣ.
ಆ ಸಿನಿಮಾದಲ್ಲಿ ನಟಿಸಬೇಡ ಎಂದಿದ್ದೆ: ಶಿವಣ್ಣ ಹಳೆ ನೆನಪು
”ಸಲಗ’ ಒಂದು ರೀತಿಯ ನಮ್ಮ ಸಿನಿಮಾ ಇದ್ದಂತೆ. ಶ್ರೀಕಾಂತ್, ದುನಿಯಾ ವಿಜಯ್ ನನಗೆ ಬಹಳ ಹಳಬರು. ದುನಿಯಾ ವಿಜಯ್ ನಮ್ಮ ‘ರಿಶಿ’ ಸಿನಿಮಾದಲ್ಲಿ ನಟಿಸಿದರು, ‘ರಾಕ್ಷಸ’ದಲ್ಲಿ ನಟಿಸಿದ್ದರು, ‘ಜೋಗಿ’ನಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದರು. ‘ಜೋಗಿ’ ಸಿನಿಮಾಕ್ಕೆ ಅವರು ಬಂದಾಗ ನಾನು ಬೇಡ ಅಂದೆ. ಇದು ಸಣ್ಣ ಪಾತ್ರ ನೀನು ಮಾಡಬೇಡ ಎಂದಿದ್ದೆ. ಆದರೆ ವಿಜಿ ಕೇಳಲಿಲ್ಲ. ಪಾತ್ರ ಸಣ್ಣದಾದರೂ ಪರ್ವಾಗಿಲ್ಲ ಅಣ್ಣ ನಾನು ಮಾಡುತ್ತೇನೆ ಎಂದು ಹೇಳಿದರು. ಅಂತೆಯೇ ಸಣ್ಣ ಪಾತ್ರದಲ್ಲಿ ನಟಿಸಿದರು” ಎಂದು ಎರಡು ದಶಕದ ಹಿಂದಿನ ಘಟನೆಗಳನ್ನು ಶಿವಣ್ಣ ನೆನಪು ಮಾಡಿಕೊಂಡರು.
‘ರಂಗ ಎಸ್ಎಸ್ಎಲ್ಸಿ’ ಸಿನಿಮಾದಲ್ಲಿ ನಟಿಸಿದ್ದರು
‘ರಂಗ ಎಸ್ಎಸ್ಎಲ್ಸಿ’ ಸಿನಿಮಾ ಮೂಲಕ ದುನಿಯಾ ವಿಜಯ್ ನಟನೆ ಆರಂಭಿಸಿದರು. ನಂತರ 2005ರಲ್ಲಿ ಶಿವರಾಜ್ ಕುಮಾರ್ ನಟನೆಯ ‘ಜೋಗಿ’, ‘ರಿಶಿ’, ‘ರಾಕ್ಷಸ’ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ವಿಜಯ್ ರಾಘವೇಂದ್ರ ನಟನೆಯ ಶ್ರೀ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದರು. ‘ಮೆಂಟಲ್ ಮಂಜ’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿ ಬಳಿಕ 2007 ರಲ್ಲಿ ಬಿಡುಗಡೆ ಆದ ‘ದುನಿಯಾ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada