ತೆಲಂಗಾಣ: ತವರಿನ ಆಸ್ತಿಗಾಗಿ ಮಹಿಳೆಯೊಬ್ಬಳು ತನ್ನ ತಂಗಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.36 ವರ್ಷದ ವರಲಕ್ಷ್ಮಿ ಮೃತ ಮಹಿಳೆ. ವಾಡಿಯಾರಾಮ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ವರಲಕ್ಷ್ಮಿ ಪತಿಯಿಂದ ದೂರವಾಗಿದ್ದಳು.ವರಲಕ್ಷ್ಮಿಗೆ ರಾಜೇಶ್ವರಿ ಎಂಬ ಸಹೋದರಿಯಿದ್ದು, ಆಕೆ ಕೂಡ ವಿಚ್ಛೇದಿತಳು.ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದ್ದು, ಪಾಲಕರ ಬಳಿ 5 ಎಕರೆ ಜಮೀನಿತ್ತು. ಈ ಜಮೀನಿಗಾಗಿ ಅಕ್ಕ-ತಂಗಿ ನಡುವೆ ಕಲಹ ಆರಂಭವಾಗಿದೆ. ರಾಜೇಶ್ವರಿ ತನ್ನ ಸಹೋದರಿ ವರಲಕ್ಷ್ಮಿ ಮನೆಗೆ ಬಂದು ಆಸ್ತಿ ವಿಚಾರವಾಗಿ ಮಾತನಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.ಜಗಳ ವಿಕೋಪಕ್ಕೆ ತಿರುಗಿದ್ದು, ವರಲಕ್ಷ್ಮಿಗೆ ಪೆಟ್ರೋಲ್ ಸುರಿದು ರಾಜೇಶ್ವರಿ ಬೆಂಕಿ ಹಚ್ಚಿದ್ದಾಳೆ. ಈ ವೇಳೆ ರಾಜೇಶ್ವರಿಗೂ ಬೆಂಕಿ ತಗುಲಿದೆ. ತೀವ್ರವಾದ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿ ತಲುಪಿದ್ದ ವರಲಕ್ಷ್ಮಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಇತ್ತ ರಾಜೇಶ್ವರಿ ಕೂಡ ಶೇ.80ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada