ಬೆಂಗಳೂರು: ಇಸ್ಲಾಂನಲ್ಲಿ ಹಿಜಾಬ್ ಎಂದರೆ ಪರ್ದಾ ಎಂದರ್ಥ. ಹಿಜಾಬ್ ಹಾಕದಿದ್ರೆ ಬ್ಯೂಟಿ ಬೇರೆಯವರ ಕಣ್ಣಿಗೆ ಕಾಣಿಸ್ತದಲ್ಲ. ಅದಕ್ಕೇ ಅತ್ಯಾಚಾರ ಜಾಸ್ತಿಯಾಗ್ತಿರೋದು ಎಂದು ಭಾನುವಾರವಷ್ಟೇ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಇದೀಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಧಾರವಾಡದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಭಾರತದಲ್ಲಿ ರೇಪ್ ರೇಟ್ ಹೆಚ್ಚಾಗಿದೆ. ಹಿಜಾಬ್ ಹಾಕಿಕೊಂಡರೇ ಅತ್ಯಾಚಾರ ಕಡಿಮೆ ಆಗುತ್ತದೆ. ಹಿಜಾಬ್ ಹಾಕಿಕೊಳ್ಳೋದೇ ಅವರ ಬ್ಯೂಟಿ ಕಾಣಬಾರದು, ಮತ್ತೊಬ್ಬರ ಕಣ್ಣು ಬೀಳಬಾರದು ಎಂದು. ದೇಶದಲ್ಲಿ ಅತ್ಯಾಚಾರ ಪ್ರಮಾಣ ಏಕೆ ಹೆಚ್ಚಾಗಿದೆ ಏಕೆಂದರೆ ಹೆಣ್ಣು ಮಕ್ಕಳು ಪರದೆಯ ಹಿಂದೆ ಇಲ್ಲ. ಹೀಗಾಗಿ, ಮಹಿಳೆಯರು ತಮ್ಮ ಸೌಂದರ್ಯ ಮರೆಮಾಚಲು ಹಿಜಾಬ್ ಧರಿಸಬೇಕು ಎಂದು ಜಮೀರ್ ಹೇಳಿದದರು.ಅವರ ಈ ಮಾತು ಇದೀಗ ಭಾರಿ ವೈರಲ್ ಆಗುತ್ತಿದ್ದು, ಜಮೀರ್ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದರೆ ಯಾರೂ ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಇದೀಗ ಖುದ್ದು ಕಾಂಗ್ರೆಸ್ ಅವಮಾನಕ್ಕೆ ಈಡಾಗಿದೆ. ಜಮೀರ್ ಅವರ ಹೇಳಿಕೆ ಭಾರಿ ಟ್ರೋಲ್ ಆಗುತ್ತಿದ್ದಂತೆಯೇ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್, ‘ಈ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದು ಜಮೀರ್ ಅವರ ಸ್ವಂತದ ಹೇಳಿಕೆ’ ಎಂದು ಸ್ಪಷ್ಟನೆ ನೀಡಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಮೀರ್ ಹೇಳಿಕೆಯನ್ನ ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಹಿಜಾಬ್ ಬಗ್ಗೆ ಹೇಗೆ ಬೇಕೋ ಹಾಗೆ ಮಾತನಾಡಬಾರದು ಎಂದು ನಾನು ಸೂಚನೆ ಕೊಟ್ಟಿದ್ದೆ, ಆದರೂ ಮಾತಾಡಿದ್ದಾರೆ. ಈ ವಿಚಾರದಲ್ಲಿ ಪಕ್ಷದಿಂದ ಜಮೀರ್ ಅವರಿಗೆ ಸ್ಪಷ್ಟನೆ ಕೇಳ್ತೇವೆ. ಜಮೀರ್ ಹೇಳಿಕೆ ಗೆ ಅವರಿಂದ ಸ್ಪಷ್ಟನೆ ಕೇಳಿ ಅವರ ಹೇಳಿಕೆ ವಾಪಸ್ ಪಡೆಯುವಂತೆ ನಾನು ಸೂಚನೆ ನೀಡ್ತೇನೆ. ಅಲ್ಲದೇ ಜಮೀರ್ ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.ಇಷ್ಟಾಗುತ್ತಿದ್ದಂತೆಯೇ ಉಲ್ಟಾ ಹೊಡೆದ ಜಮೀರ್, ನಾನು ರೇಪ್ ವಿಷಯ ಮಾತನಾಡಲೇ ಇಲ್ಲ ಎಂದಿದ್ದಾರೆ. ‘ಹಿಜಾಬ್ ಹಾಕಿಕೊಳ್ಳುವುದು ಹೆಣ್ಣುಮಕ್ಕಳಿಗೆ ಸೇಫ್ಟಿ, ಹಿಜಾಬ್ ಹಾಕಿದರೆ ಅವರ ಬ್ಯೂಟಿ ಕಾಣಿಸುವುದಿಲ್ಲ, ಅವರಿಗೆ ರಕ್ಷಣೆ, ಸೇಫ್ಟಿ ಇರುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದೇನೆಯೇ ಹೊರತು ಹಿಜಾಬ್ ಧರಿಸದಿದ್ದರೆ ರೇಪ್ ಆಗುತ್ತದೆಂದು ಹೇಳಿಲ್ಲ’ ಎಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada