ಪಠಾಣ್.. ಸದ್ಯ ಎಲ್ಲೆಡೆ ಸಿಕ್ಕಪಟ್ಟೆ ಸದ್ದು ಮಾಡುತ್ತಿರುವ ಚಿತ್ರ. ಕಳೆದ ಜನವರಿ 25ರಂದು ಬಿಡುಗಡೆಗೊಂಡ ಈ ಚಿತ್ರ ಮೊದಲ ದಿನವೇ ವಿಶ್ವದಾದ್ಯಂತ 106 ಕೋಟಿ ಗಳಿಕೆ ಮಾಡುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಬಿಡುಗಡೆಗೊಂಡ ಶಾರುಖ್ ಖಾನ್ ನಟನೆಯ ಚಿತ್ರವನ್ನು ವೀಕ್ಷಿಸಲು ಕಾದು ಕುಳಿತಿದ್ದ ಅಭಿಮಾನಿಗಳು ಹಾಗೂ ಸಿನಿ ರಸಿಕರು ಚಿತ್ರವನ್ನು ಮೆಚ್ಚಿಕೊಂಡರು.
ಚಿತ್ರ ಬಿಡುಗಡೆಗೂ ಮುನ್ನ ಎದುರಾಗಿದ್ದ ಬಾಯ್ಕಟ್ ಟ್ರೆಂಡ್ ಹಾಗೂ ಚಿತ್ರ ಬಿಡುಗಡೆಯಾದ ನಂತರ ಎದುರಾದ ನೆಗೆಟಿವ್ ವಿಮರ್ಶೆ ಹಾಗೂ ಅಪಪ್ರಚಾರಗಳಾವುವೂ ಸಹ ಚಿತ್ರದ ಆರ್ಭಟವನ್ನು ತಡೆಯಲಾಗಲಿಲ್ಲ. ಹೀಗೆ ಎದುರಾದ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ಎದುರಿಸಿ ದೇಶದಾದ್ಯಂತ ಅಬ್ಬರಿಸಿದ ಪಠಾಣ್ ಮೊದಲ ವಾರವೇ 634 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ವಿರೋಧಿಗಳಿಗೆ ತಿರುಗೇಟು ನೀಡಿತ್ತು.
ಇನ್ನು ರಾಜ್ಯದಲ್ಲಿಯೂ ಸಹ ಪಠಾಣ್ ಅಬ್ಬರ ಕಡಿಮೆ ಇಲ್ಲ. ಬಿಡುಗಡೆ ದಿನ ಕರ್ನಾಟಕದಲ್ಲಿ ಬರೋಬ್ಬರಿ 6.5 ಕೋಟಿ ರೂಪಾಯಿಗಳನ್ನು ಗಳಿಸಿದ ಪಠಾಣ್ ಇಂದಿಗೂ ಸಹ ಬೆಂಗಳೂರು ವಲಯದಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿರುವ ಚಿತ್ರ ಎನಿಸಿಕೊಂಡಿದೆ. ಹೀಗೆ ದೊಡ್ಡ ಗೆಲುವು ಸಾಧಿಸಿ ನೆಲಕಚ್ಚಿದ್ದ ಬಾಲಿವುಡ್ಗೆ ಜೀವ ತುಂಬಿರುವ ಈ ಚಿತ್ರದ ಗೆಲುವನ್ನು ಶಾರುಖ್ ಖಾನ್ ಅಭಿಮಾನಿಗಳು ಎಲ್ಲೆಡೆ ಆಚರಿಸುತ್ತಿದ್ದು, ಬೆಂಗಳೂರಿನ ಶಾರುಖ್ ಖಾನ್ ಅಭಿಮಾನಿಗಳು ಅರ್ಥಪೂರ್ಣವಾಗಿ ಪಠಾಣ್ ಗೆಲುವನ್ನು ಆಚರಿಸಿದ್ದರು. ಈ ಸಂಭ್ರಮಾಚರಣೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ನೆನಪಿನಲ್ಲಿ ಅನ್ನದಾನ ಮಾಡಿದ್ದ ಬೆಂಗಳೂರಿನ ಶಾರುಖ್ ಖಾನ್ ಫ್ಯಾನ್ಸ್ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಇದೇ ತಂಡ ಇದೀಗ ಯುವ ರಾಜ್ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಪಠಾಣ್ ಗೆಲುವನ್ನು ಯುವ ಜತೆ ಸಂಭ್ರಮಿಸಿದೆ.
ಇನ್ನು ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಪಠಾಣ್ ಚಿತ್ರ ಬಿಡುಗಡೆ ದಿನ ಅನ್ನದಾನ ಮಾಡಿದ್ದ ಬೆಂಗಳೂರು ಶಾರುಖ್ ಖಾನ್ ಅಭಿಮಾನಿಗಳು ಯುವ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಹಾಗೂ ಈ ಸಂದರ್ಭದ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಾವು ಪುನೀತ್ ರಾಜ್ಕುಮಾರ್ ಅವರನ್ನು ಮಿಸ್ ಮಾಡಿಕೊಳ್ತಿದ್ದೇವೆ, ನಮ್ಮ ತಂಡ ಲೆಜೆಂಡರಿ ರಾಜ್ಕುಮಾರ್ ಅವರ ಮೊಮ್ಮಗ ಯುವ ರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಸ್ಮರಣಿಕೆಯನ್ನು ನೀಡಿದೆವು” ಎಂದು ಬರೆದುಕೊಂಡು ಈ ಟ್ವೀಟ್ ಅನ್ನು ಮಾಡಿದ್ದಾರೆ.
ಅಪ್ಪು ಹೆಸರಲ್ಲಿ ಮಾಡಿದ ಅನ್ನದಾನದ ಕುರಿತು ಯುವ ಮೆಚ್ಚುಗೆ
ಹೀಗೆ ಮನೆಗೆ ಭೇಟಿ ನೀಡಿದ ಶಾರುಖ್ ಖಾನ್ ಅಭಿಮಾನಿಗಳು ಯುವ ರಾಜ್ಕುಮಾರ್ ಅವರಿಗೆ ತಮ್ಮನ್ನು ತಾವು ಪರಿಚಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಅಪ್ಪು ಹೆಸರಿನಲ್ಲಿ ಮಾಡಿದ್ದ ಅನ್ನದಾನದ ವಿಡಿಯೊವನ್ನು ನೋಡಿದ್ದೇನೆ ಎಂದ ಯುವ ರಾಜ್ಕುಮಾರ್ ಶಾರುಖ್ ಖಾನ್ ಫ್ಯಾನ್ಸ್ ಮಾಡಿದ ಒಳ್ಳೆಯ ಕೆಲಸವನ್ನು ಹೊಗಳಿದರು. ಆ ದಿನದಂದು ಕೇವಲ ಅನ್ನದಾನ ಮಾತ್ರವಲ್ಲದೇ ಪುನೀತ್ ರಾಜ್ಕುಮಾರ್ ಅವರ ಕಟ್ಔಟ್ ಅನ್ನು ಚಿತ್ರಮಂದಿರದ ಮುಂದೆ ನಿಲ್ಲಿಸಿದ್ದ ಶಾರುಖ್ ಖಾನ್ ಅಭಿಮಾನಿಗಳು ತಮ್ಮ ವಸ್ತ್ರದ ಮೇಲೆ ವಿ ಮಿಸ್ ಯು ಅಪ್ಪು ಎಂಬ ಬ್ಯಾಡ್ಜ್ ಧರಿಸಿ ಗೌರವ ಸಲ್ಲಿಸಿದ್ದರು.
ಪಠಾಣ್ ನೋಡಿದ್ರಾ ಯುವ?
ಇನ್ನು ಇದೇ ವಿಡಿಯೊದಲ್ಲಿ ಶಾರುಖ್ ಖಾನ್ ಅಭಿಮಾನಿಗಳು ಪಠಾಣ್ ಚಿತ್ರ ನೋಡಿದ್ರಾ ಎಂದು ಯುವ ರಾಜ್ಕುಮಾರ್ ಅವರನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಯುವ ರಾಜ್ಕುಮಾರ್ ಕಳೆದೆರಡು ದಿನಗಳಿಂದ ಸತತವಾಗಿ ಪ್ರಯಾಣ ಮಾಡ್ತಾ ಇದ್ದು, ಈ ವಾರ ಖಂಡಿತ ಬಿಡುವು ಮಾಡಿಕೊಂಡು ನೋಡುತ್ತೇನೆ ಎಂದಿದ್ದಾರೆ. ಹೀಗೆ ಸಿನಿಮಾ ಬಿಡುಗಡೆ ಮಾಡುವ ಮುನ್ನವೇ ಬೇಡಿಕೆ ಹುಟ್ಟಿಸಿರುವ ಯುವ ರಾಜ್ಕುಮಾರ್ ರಾಜ್ವಂಶದ ಪರಂಪರೆಯನ್ನು ಮುಂದುವರಿಸುವ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಪ್ರತಿಷ್ಠಿತ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಲಿರುವ ಚಿತ್ರದ ಮೂಲಕ ಯುವ ರಾಜ್ಕುಮಾರ್ ಇಂಡಸ್ಟ್ರಿಗೆ ಕಾಲಿಡಲಿದ್ದು, ಈ ಚಿತ್ರಕ್ಕೆ ಸಂತೋಷ್ ಆನಂದ್ರಾಮ್ ನಿರ್ದೇಶನವಿರಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada