ಕೊರೋನಾ ವಿರುದ್ಧದ ಹೋರಾಟದಲ್ಲಿ ನಾಗರೀಕರು ಭಾಗಿಯಾಗಿದ್ದು, ಇದರಲ್ಲಿ ಜಯಗಳಿಸುವ ವಿಶ್ವಾಸ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಾಕ್ ಡೌನ್ ಬಳಿಕ ಎರಡನೇ ‘ಮನ್ ಕಿ ಬಾತ್’ ನಲ್ಲಿ ಮಾತನಾಡಿದ ಅವರು, ಜನ ಹೋರಾಟದ ಸಿಪಾಯಿಗಳಾಗಿದ್ದಾರೆ. ಕೋರೋನಾ ವಿರುದ್ಧದ ಹೋರಾಟ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ. ಜನರು ಮೇಣದಬತ್ತಿ, ದೀಪ ಬೆಳಗುವ ಮೂಲಕ ಮತ್ತು ಚಪ್ಪಾಳೆ ತಟ್ಟುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದು ಜನರೇ ನೇತೃತ್ವ ವಹಿಸಿರುವ ಹೋರಾಟವಾಗಿದೆ. ಲಾಕ್ ಡೌನ್ ನಿಯಮ ಪಾಲನೆ ಮಾಡಲಾಗುತ್ತಿದೆ. ಬಡವರಿಂದ ಹಿಡಿದು ಪ್ರತಿಯೊಬ್ಬರು ಹೋರಾಟ ನಡೆಸುತ್ತಿದ್ದು, ಸಾಮಾನ್ಯ ಜನರ ಹೋರಾಟ ಇದಾಗಿದೆ. ಇಡೀ ದೇಶದ ಜನರ ಚಿತ್ತ ಒಂದೇ ಕಡೆ ಇದೆ. 130 ಕೋಟಿ ದೇಶದ ಜನತೆಗೆ ನಮಿಸುತ್ತೇನೆ. ಸರ್ಕಾರ ಡಿಜಿಟಲ್ ಪ್ಲಾಟ್ ಫಾರಂ ಸಿದ್ಧಪಡಿಸಿದೆ. ಭಾರತ ಒಂದು ಉದ್ದೇಶವನ್ನು ಇಟ್ಟುಕೊಂಡಿದೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಗಲ್ಲಿಗಲ್ಲಿಗಳಲ್ಲಿ ಬಡವರಿಗೆ ಸಹಾಯ ಮಾಡಲಾಗುತ್ತದೆ. ರೈತರು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ತಮ್ಮ ಬೆಳೆಯನ್ನು ದಾನ ಮಾಡುತ್ತಿದ್ದಾರೆ. ಹಳ್ಳಿ ನಗರಗಳಲ್ಲಿ ನಿಯಮಗಳನ್ನು ಪಾಲಿಸಲಾಗುತ್ತಿದೆ. ಭಾರತ ಸರಿಯಾದ ದಾರಿಯಲ್ಲಿ ಹೋರಾಟ ನಡೆಸುತ್ತಿದೆ. ಒಬ್ಬರ ಸಹಾಯಕ್ಕೆ ಮತ್ತೊಬ್ಬರು ಮುಂದೆ ಬರುತ್ತಿದ್ದಾರೆ. ಬಡವರಿಗೆ ಆಹಾರ, ಕಿಟ್, ಮಾಸ್ಕ್ ತಯಾರಿಸಿಕೊಡುತ್ತಿದ್ದಾರೆ. ದೇಶದ ಜನ ತಾವು ಏನು ಎನ್ನುವುದನ್ನು ತೋರಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.