ಮುಂಬೈ: ನಿಸರ್ಗ ಚಂಡಮಾರುತಕ್ಕೆ ಮುಂಬೈ ನಲುಗುತ್ತಿದೆ. ಕಳೆದ 6ಗಂಟೆಗಳಲ್ಲಿ ಸೈಕ್ಲೋನ್ 13 ಕಿ.ಮೀ.ವೇಗದಲ್ಲಿ ಚಲಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಚಂಡಮಾರುತ ಅಲಿಬಗ್ನಿಂದ 140 ಕಿ.ಮೀ ದೂರ ಹಾಗೂ ಮುಂಬೈನಿಂದ 190 ಕಿಲೋಮೀಟರ್ ದೂರದಲ್ಲಿದ್ದು, ಮಧ್ಯಾಹ್ನ 1-3ಗಂಟೆ ಹೊತ್ತಲ್ಲಿ 110ರಿಂದ-120 ಕಿ.ಮೀ. ವೇಗ ಹೆಚ್ಚಿಸಿಕೊಳ್ಳಲಿದೆ. ಹಾಗೇ ಭೂಕುಸಿತದಂತಹ ಅನಾಹುತ ಸೃಷ್ಟಿಸಬಹುದು ಎಂದು ಮುಂಬೈ ಹವಾಮಾನ ಇಲಾಖೆ ಮುಖ್ಯಸ್ಥ ಕೆ.ಎಸ್. ಹೊಸಾಲಿಕರ್ ತಿಳಿಸಿದ್ದಾರೆ. ಚಂಡಮಾರುತದ ಪ್ರಭಾವದಿಂದ ಮುಂಬೈನ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಇಂದು ಬೆಳಗ್ಗೆ 10.14ರ ಹೊತ್ತಿಗೆ ಸುಮಾರು 4.26 ಮೀಟರ್ ಎತ್ತರದ ಅಲೆ ಅಪ್ಪಳಿಸಿದೆ. ನಿಸರ್ಗ ಮಹಾರಾಷ್ಟ್ರದ ಉತ್ತರ ಕರಾವಳಿಯನ್ನು ತಲುಪಿದ ಬೆನ್ನಲ್ಲೇ ಮುಂಬೈನಲ್ಲಿ ವಿಪರೀತ ಮಳೆಯಾಗುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಎಲ್ಲ ರೀತಿಯ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ಮುಂಬೈನಿಂದ ಹೊರಡಬೇಕಿದ್ದ ಮತ್ತು ನಗರಕ್ಕೆ ತಲುಪಬೇಕಿದ್ದ ಎಲ್ಲ ವಿಶೇಷ ರೈಲುಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.
ಹಾಗೆಯೇ ಚಂಡಮಾರುತ ವಿಮಾನ ಸಂಚಾರದ ಮೇಲೆಯೂ ಪ್ರಭಾವ ಬೀರಿದೆ. ಸದ್ಯ ಮುಂಬೈ ಏರ್ಪೋರ್ಟ್ನಿಂದ 50 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇಂದು ಕೇವಲ 19 ವಿಮಾನಗಳು ಹಾರಾಡಲಿವೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ವಿಮಾನ ಸಂಚಾರ ಮಾಡಲಿದೆ ಎಂದು ಮುಂಬೈ ಏರ್ಪೋರ್ಟ್ ಆಡಳಿತ ತಿಳಿಸಿದೆ. ಮಹಾರಾಷ್ಟ್ರ, ರತ್ನಗಿರಿ, ಗೋವಾ, ಪಣಜಿಯಲ್ಲಿ ಚಂಡಮಾರುತದ ಪ್ರಭಾವದಿಂದ ಭರ್ಜರಿ ಗಾಳಿ, ಮಳೆಯಾಗುತ್ತಿದ್ದು ಜನರು ಮನೆಯಿಂದ ಹೊರಗೆ ಬರಬೇಡಿ ಎಂದು ಸರ್ಕಾರಗಳು ಸೂಚನೆ ನೀಡಿವೆ. ಗ್ರೇಟರ್ ಮುಂಬೈನಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಕರಾವಳಿ ಪ್ರದೇಶ ಸೇರಿ, ಸೈಕ್ಲೋನ್ನಿಂದ ಹಾನಿಗೆ ಒಳಗಾಗಬಹುದಾದ ಎಲ್ಲ ಪ್ರದೇಶಗಳಲ್ಲಿ ಎನ್ಡಿಆರ್ಎಫ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಜನರ ಸ್ಥಳಾಂತರ ಕಾರ್ಯ, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.