ಅದು ದೇವರ ಬಳಿ ಶಾಸ್ತ್ರ ಕೇಳಿ, ಜೋತಿಷಿಗಳ ಬಳಿ ಜಾತಕ ನೋಡ್ಸಿ ಮದುವೆಯಾದ ಜೋಡಿ. ಆದರೇ ಅದೇ ದೇವರು ಗಂಡ ಹೆಂಡತಿ ದೂರ ಆದರೆ ಮಾತ್ರ ಇಬ್ಬರಿಗೂ ಒಳಿತು ಎಂದು ಮಗದೊಮ್ಮೆ ಶಾಸ್ತ್ರ ಹೇಳಿತ್ತಂತೆ. ಹಾಗಾಗಿ, ಆ ಪತಿ-ಪತ್ನಿ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ರು..ಆದರೆ ಬುದ್ದಿ ಹೇಳಿದ ನ್ಯಾಯಾದೀಶರು ಈ ಜೋಡಿಯನ್ನು ಮತ್ತೇ ಒಂದು ಮಾಡಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ನ್ಯಾಯಾಲಯ ಬಲು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ದೇವರ ಶಾಸ್ತ್ರದ ಮಾತು ಕೇಳಿ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದ ಪತಿ ಪತ್ನಿಯರನ್ನು ಕೋರ್ಟ್ ಮತ್ತೇ ಒಂದುಗೂಡಿಸಿದೆ. ಹೌದು, ಚಿಕ್ಕನಾಯಕನಹಳ್ಳಿ ತಾಲೂಕಿನ ಅರಳಕಟ್ಟಾ ಗ್ರಾಮದ ಮಂಜುನಾಥ ಹಾಗೂ ಮರೇನಾಡು ಗ್ರಾಮದ ಪಾರ್ವತಮ್ಮ ಕಳೆದ ಮೂರು ವರ್ಷದ ಹಿಂದೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಗಂಡು ಮಗು ಜನಿಸಿತ್ತು. ಜನಿಸಿದ ಮಗು ಎರಡು ತಿಂಗಳಲ್ಲಿ ಅನಾರೋಗ್ಯದಿಂದ ಸಾವನಪ್ಪಿತ್ತು. ಆಗ ಪಾರ್ವತಮ್ಮ ಕುಟುಂಬದವರು ಮರೇನಾಡು ಗ್ರಾಮದೇವರಲ್ಲಿ ಶಾಸ್ತ್ರ ಕೇಳಿದ್ದಾರೆ ಎನ್ನಲಾಗಿದೆ. ಮನೆಯವರ ಮೇಲೆ ದೇವರು ಆಹ್ವಾನ ಆಗಿ ಗಂಡ ಹೆಂಡತಿ ದೂರ ಆದರೆ ಮಾತ್ರ ಇಬ್ಬರಿಗೂ ಮುಂದೆ ಒಳ್ಳೆದಾಗುತ್ತದೆ ಎಂದು ಶಾಸ್ತ್ರ ಹೇಳಿತ್ತಂತೆ. ಹಾಗಾಗಿ ಪಾರ್ವತಮ್ಮಳನ್ನು ಗಂಡನ ಮನೆಗೆ ಕಳುಹಿಸಲು ಪಾರ್ವತಮ್ಮ ತಂದೆ ತಾಯಿ ಒಪ್ಪಿರಲಿಲ್ಲ. ಅಲ್ಲದೇ ಪಾರ್ವತಮ್ಮ ಕಡೆಯಿಂದಲೇ ಚಿಕ್ಕನಾಯಕನಹಳ್ಳಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿಸಿದ್ದಾರೆ.
ಕಳೆದ ಐದು ತಿಂಗಳ ಹಿಂದೆ ಕೋರ್ಟ್ನಲ್ಲಿ ವಿಚ್ಚೇದನಕ್ಕಾಗಿ ಅರ್ಜಿಹಾಕಲಾಗಿತ್ತು. ನಿನ್ನೆಯ ವೇಳೆಗೆ ನಾಲ್ಕನೇ ಹಿಯರಿಂಗ್ ನಡೆದಿತ್ತು. ವಿಚ್ಚೇದನ ಬಯಸಿದ ಪತಿ ಪತ್ನಿ ಇಬ್ಬರೂ ನ್ಯಾಯಾದೀಶರ ಮುಂದೆ ಹಾಜರಾಗಿದ್ದರು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾದೀಶರಾದ ವೆಂಕಟೇಶಪ್ಪ ವಿಚ್ಚೇದನಕ್ಕೆ ಕಾರಣ ಕೇಳಿದ್ದಾರೆ. ದೇವರು ಹೇಳಿದಂತೆ ನಾವು ದೂರ ಆಗಲು ಬಯಸಿದ್ದೇವೆ ಎಂದು ಈ ಜೋಡಿ ಕಾರಣ ಹೇಳಿಕೊಂಡಿದ್ದಾರೆ. ಈ ಮೂಢ ನಂಬಿಕೆಯ ಕಾರಣ ಕೇಳಿ ದಂಗಾದ ನ್ಯಾಯಾದೀಶರು ಇಬ್ಬರ ಮನವೊಲಿಸಿ ಮತ್ತೇ ಒಂದಾಗಿಸಿದ್ದಾರೆ. ಕೋರ್ಟ್ ಹಾಲ್ ನಲ್ಲೇ ಇಬ್ಬರೂ ಪರಸ್ಪರ ಹಾರಬದಲಾಯಿಸಿ ಮತ್ತೇ ಒಂದಾಗಿದ್ದಾರೆ.
ಮೂಢ ನಂಬಿಕೆ ಮರೆತ ಈ ಜೋಡಿ ಮತ್ತೇ ಹಾಡಿತು ಕೋಗಿಲೆ ಎಂಬಂತೆ ನನಗೆ ನೀನು.ನಿನಗೆ ನಾನು ಎನ್ನುವಂತೆ ಮತ್ತೆ ಒಟ್ಟಾಗಿ ಹೆಜ್ಜೆಹಾಕಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada