ಕಳೆದ ವರ್ಷ ತೆರೆಕಂಡು ಇಡೀ ಭಾರತ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ, ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಂತೆ ಮಾಡಿದ ಕಾಂತಾರ ಚಿತ್ರದ ಎರಡನೇ ಭಾಗ ಬರಲಿದೆಯಾ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು. ಚಿತ್ರ ಬರಲಿದೆ ಎಂಬ ಸುದ್ದಿಗಳು ಹರಿದಾಡಿತ್ತು.
ಹೀಗೆ ಅಧಿಕೃತ ಘೋಷಣೆ ಇಲ್ಲದಿದ್ದರೂ ಸಹ ಕಾಂತಾರ 2 ಬಗ್ಗೆ ನಿರೀಕ್ಷೆ ಹುಟ್ಟಿಕೊಂಡುಬಿಟ್ಟಿದೆ.
ಪ್ರತಿ ಬಾರಿಯೂ ಭಿನ್ನ ವಿಭಿನ್ನ ಕಥೆ ಮಾಡುವ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರದಲ್ಲಿ ಯಾವ ರೀತಿಯ ಚಿತ್ರಕಥೆ ಮಾಡಬಹುದು ಎಂಬ ಕುತೂಹಲ ಸಿನಿ ರಸಿಕರಲ್ಲಿ ಮೂಡಿತ್ತು. ಇನ್ನು ಹೊರಗಡೆ ಕಾಂತಾರ 2 ಬರಲಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ನಟ ದಿಗಂತ್ ರಿಷಬ್ ಶೆಟ್ಟಿ ಕಾಂತಾರ 2 ಕಥೆ ರಚಿಸುವಲ್ಲಿ ನಿರತರಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ದಿಗಂತ್ ನೀಡಿದ್ದ ಈ ಹೇಳಿಕೆ ಕಾಂತಾರ ಎರಡನೇ ಭಾಗ ಬರುವುದನ್ನು ಬಹುತೇಕ ಖಚಿತಪಡಿಸಿತು.
ಹೀಗೆ ಕಾಂತಾರ 2 ಕುರಿತ ಚರ್ಚೆ ಜೋರಾಗಿರುವಾಗಲೇ ಚಿತ್ರತಂಡ ಕಾಂತಾರ 2 ಚಿತ್ರ ಮಾಡಲು ದೈವದ ಅನುಮತಿಯನ್ನೂ ಕೇಳಿತ್ತು. ಬಳಿಕ ನಿನ್ನೆಯಷ್ಟೇ ( ಜನವರಿ 20 ) ದೈವದ ಹರಕೆಯನ್ನು ತೀರಿಸಿ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ 2 ಚಿತ್ರದ ಬಗ್ಗೆ ಡೆಡ್ಲೈನ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿ ಚಿತ್ರದ ಚಿತ್ರೀಕರಣ ಯಾವಾಗ ಆರಂಭಗೊಳ್ಳಲಿದೆ ಹಾಗೂ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಯುಟ್ಯೂಬ್ ಸಂದರ್ಶನವೊಂದರಲ್ಲಿ ದಿಗಂತ್ ಹೇಳಿದಂತೆ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರಕ್ಕಾಗಿ ಕಥೆ ಬರೆಯಲು ಆರಂಭಿಸಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ವಿಜಯ್ ಕಿರಗಂದೂರು ಸಹ ಮಾತನಾಡಿದ್ದು “ರಿಷಬ್ ಶೆಟ್ಟಿ ಸದ್ಯ ಚಿತ್ರದ ಕತೆ ಬರೆಯುತ್ತಿದ್ದು, ತನ್ನ ಸಹ ಬರಹಗಾರರ ಜತೆ ಕರ್ನಾಟಕ ಕರಾವಳಿ ಕಾಡಿನ ಒಳಗೆ ಹೋಗಿ ಚಿತ್ರಕ್ಕಾಗಿ ಸಂಶೋಧನೆಗೆ ಇಳಿದಿದ್ದಾರೆ” ಎಂದು ಹೇಳಿಕೆ ನೀಡಿದರು.
ಕಾಂತಾರ 2 ಶೂಟಿಂಗ್ ಯಾವಾಗ ಆರಂಭ, ಬಿಡುಗಡೆ ಯಾವಾಗ?
ಇನ್ನೂ ಮುಂದುವರಿದು ಮಾತನಾಡಿದ ವಿಜಯ್ ಕಿರಗಂದೂರು “ಮಳೆಗಾಲದಲ್ಲಿ ಕೆಲ ಭಾಗವನ್ನು ಚಿತ್ರೀಕರಿಸಬೇಕಾಗಿರುವ ಕಾರಣ ರಿಷಬ್ ಶೆಟ್ಟಿ ಜೂನ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ. ಇನ್ನು ಚಿತ್ರವನ್ನು 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆ ಮಾಡುವುದು ನಮ್ಮ ಗುರಿ” ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂತಾರ 2 ಮುಂದಿನ ವರ್ಷದ ಬೇಸಿಗೆಯಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ.
ಮುಂದುವರಿದ ಕಥೆ ಅಲ್ಲ
ಇಷ್ಟೇ ಅಲ್ಲದೇ ಕಾಂತಾರ 2 ಚಿತ್ರ ಕಾಂತಾರ ಚಿತ್ರದ ಮುಂದುವರಿದ ಭಾಗವಲ್ಲ ಎಂಬುದೂ ಸಹ ಖಚಿತವಾಗಿದೆ. ಈ ಬಾರಿ ಕಾಂತಾರ ಚಿತ್ರದಲ್ಲಿ ತೋರಿಸಲಾಗಿದ್ದ ಕಥೆಗೂ ಹಿಂದೆ ನಡೆದಿದ್ದೇನು ಎಂಬುದನ್ನು ತೆರೆಮೇಲೆ ತರಲಿದ್ದು, ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿರಲಿದೆ. ಕಾಂತಾರ ಚಿತ್ರದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನೂ ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡುಬೆಟ್ಟು ಶಿವನ ತಂದೆಯ ಕಾಲಘಟ್ಟದ ಕಥೆಯನ್ನು ಸಿನಿ ರಸಿಕರು ನಿರೀಕ್ಷಿಸಬಹುದು.
https://play.google.com/store/apps/details?id=com.speed.newskannad