ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ್ ಇನ್ನಿಲ್ಲ. ತೀವ್ರ ರಕ್ತಸ್ರಾವ ಉಂಟಾಗಿ ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.
ಇವರ ಅಂತ್ಯಕ್ರಿಯೆಯು ಚಾಮರಾಜನಗರದ ಹೆಗ್ಗವಾಡಿಯಲ್ಲಿ ನಾಳೆ ನಡೆಯಲಿದೆ.
ಹಳೇ ಮೈಸೂರು ಭಾಗದ ಪ್ರಬಲ ದಲಿತ ನಾಯಕರಾಗಿದ್ದ ಧ್ರುವನಾರಾಯಣ್ ಚಾಮರಾಜನಗರದ ಹೆಗ್ಗವಾಡಿ ಗ್ರಾಮದಲ್ಲಿ 1961 ಜುಲೈ 31ರಂದು ಜನಿಸಿದ್ದರು. ಧ್ರುವನಾರಾಯಣ್ ಅವರ ಮೂಲ ಹೆಸರು ರಂಗಸ್ವಾಮಿ ಧ್ರುವನಾರಾಯಣ್. ಆದರೆ ಜನರಿಗೆ ಆರ್. ಧ್ರುವನಾರಾಯಣ್ ಎಂದೇ ಪರಿಚಿತರಾಗಿದ್ದರು.
ಧ್ರುವನಾರಾಯಣ್ ಪತ್ನಿ ವೀಣಾ, ಮಕ್ಕಳಾದ ದರ್ಶನ್, ಧೀರನ್ ಅವರನ್ನು ಅಗಲಿದ್ದಾರೆ. ದರ್ಶನ್, ವಕೀಲರಾಗಿದ್ದು, ಧೀರನ್, ಬಿಎಸ್ಸಿ ಮುಗಿಸಿ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಸದ್ಯ ಮೈಸೂರಿನಲ್ಲಿರುವ ನಿವಾಸಕ್ಕೆ ಧ್ರುವನಾರಾಯಣ್ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬರಲಾಗಿದೆ. ಮೈಸೂರಿನಲ್ಲಿರುವ ನಿವಾಸಕ್ಕೆ ಸಾವಿರಾರು ಅಭಿಮಾನಿಗಳು ದೌಡಾಯಿಸಿದ್ದು, ಕಣ್ಣೀರಿನಲ್ಲಿ ಮುಳುಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada