ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕರ್ನಾಟಕವನ್ನು ಎಟಿಎಂ ಅಂದುಕೊಂಡಿವೆ. ಅವರು ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಎರಡು ಪ್ರತ್ಯೇಕ ಪಕ್ಷಗಳಂತೆ ನಟಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
ಚನ್ನಪಟ್ಟಣ (ರಾಮನಗರ): ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಾರಣ.
ಇವರ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾಗುವ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಈ ಎರಡೂ ಪಕ್ಷಗಳು ಕರ್ನಾಟಕವನ್ನು ಎಟಿಎಂನಂತೆ ನೋಡಿವೆ. ರಾಜಕೀಯ ಅಸ್ಥಿರತೆಯ ಲಾಭವನ್ನೂ ಇವರು ಪಡೆಯುತ್ತಿದ್ದಾರೆ. ಪ್ರತ್ಯೇಕ ಪಕ್ಷಗಳಂತೆ ನಟಿಸುತ್ತಾರೆ. ಆದರೆ ಎರಡೂ ಪಕ್ಷಗಳ ನಾಯಕರು ಹೃದಯದಲ್ಲಿ ಒಂದಾಗಿದ್ದಾರೆ. ದೆಹಲಿಯಲ್ಲೂ ಒಟ್ಟಿಗಿದ್ದಾರೆ. ಸಂಸತ್ತಿನಲ್ಲಿ ಪರಸ್ಪರ ಸಹಾಯ ಮಾಡುತ್ತಾರೆ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಕರ್ನಾಟಕ ಬಹಳ ವರ್ಷಗಳಿಂದ ಅಸ್ಥಿರ ಸರ್ಕಾರದ ನಾಟಕವನ್ನು ಕಂಡಿದೆ. ಅಸ್ಥಿರ ಸರ್ಕಾರಗಳು ಅಧಿಕಾರಕ್ಕೆ ಬಂದ್ರೆ ಲೂಟಿ ಮಾಡಲು ಅವಕಾಶ ನೀಡಿದಂತೆ. ಇಂಥ ಸರ್ಕಾರದಲ್ಲಿ ಯಾವಾಗಲೂ ಕಂಡು ಬರುವುದು ಲೂಟಿ ಮಾತ್ರ. ಅಲ್ಲಿ ಅಭಿವೃದ್ಧಿ ಕಾಣುವುದಿಲ್ಲ ಎಂದರು.
224 ಸದಸ್ಯಬಲದ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 15ರಿಂದ 20 ಸ್ಥಾನಗಳನ್ನು ಪಡೆದರೆ ತಾವೇ ಕಿಂಗ್ಮೇಕರ್ ಎಂದು ಜೆಡಿಎಸ್ ಬಹಿರಂಗವಾಗಿ ಘೋಷಿಸಿದೆ. ಈ ಸ್ವಾರ್ಥ ವಿಧಾನ ಒಂದು ಕುಟುಂಬಕ್ಕೆ ಪ್ರಯೋಜನ ತರಬಹುದು. ಆದರೆ ಇದು ಕರ್ನಾಟಕದ ಲಕ್ಷಾಂತರ ಕುಟುಂಬಗಳಿಗೆ ನಷ್ಟ ಉಂಟುಮಾಡುತ್ತದೆ ಎಂದು ಜೆಡಿಎಸ್ ಪಕ್ಷವನ್ನು ಟೀಕಿಸಿದರು.
https://play.google.com/store/apps/details?id=com.speed.newskannada