ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಉತ್ಪನ್ನಗಳ ಸಾಗಾಣಿಕೆಗೆ ಎದುರಾದ ಸಮಸ್ಯೆಗಳಿಗೆ ಪರಿಹಾರವೆಂಬಂತೆ ವಿತರಣೆ ಮಾಡಿದ ‘ಗ್ರೀನ್ ಪಾಸ್’ ಉಪಯೋಗದಿಂದ ಪ್ರೇರೇಪಿತರಾಗಿರುವ ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಈಗ ರೈತರಿಗೆ ಶಾಶ್ವತ ಗುರುತಿನ ಚೀಟಿ ವಿತರಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಗುರುತಿನ ಚೀಟಿಯಲ್ಲಿ ರೈತನ ಹೆಸರು, ರೈತ ಹೊಂದಿರುವ ಭೂಮಿಯ ವಿಸ್ತೀರ್ಣ, ಬ್ಯಾಂಕ್ ಖಾತೆ ವಿವರ, ಆಧಾರ್ ಸಂಖ್ಯೆ ಮತ್ತು ಇತರ ಸಮಗ್ರ ವಿವರಗಳನ್ನು ಒಳಪಟ್ಟ ಐಡಿ ಕಾರ್ಡ್ ವಿತರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಟೀಲ್ ಅವರು ಹೇಳಿದ್ದಾರೆ. ರೈತನ ಹೆಸರಿನ ಈ ಗುರುತಿನ ಚೀಟಿಯಲ್ಲಿ ಚಿಪ್ ಒಳಪಟ್ಟಿದ್ದು, ಸ್ವೈಪ್ ಮಾಡಿದರೆ ರೈತನ ಎಲ್ಲ ವಿವರ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ಈ ಕಾರ್ಡ್ಗಳ ವಿತರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು. ಹಾಗೆಯೇ ರೈತರಿಗೆ ವಿತರಿಸುವ ಈ ಕಾರ್ಡ್ನಲ್ಲಿ ಫಲಾನುಭವಿ ರೈತರುಗಳು ಸರಕಾರದ ಯಾವೆಲ್ಲ ಯೋಜನೆ, ಸವಲತ್ತುಗಳಿಗೆ ಅರ್ಹ ಎಂಬುದೂ ಸ್ಪಷ್ಟಗೊಳ್ಳಲಿದೆ. ಬೆಳೆ ಪರಿಹಾರ ವಿತರಿಸಲು ರೈತರ ಖಾತೆ ವಿವರಗಳಿಗಾಗಿ ತಡಕಾಡುವಂತಹ ಸ್ಥಿತಿ ಮುಂದುವರಿಯಬಾರದೆಂಬ ನಿಟ್ಟಿನಲ್ಲಿ ಈ ಪ್ರಯತ್ನ ನಡೆಯಲಿದೆ, ಎಂದು ಹೇಳಿದರು. ಲಾಕ್ ಡೌನ್ ಅವಧಿಯಲ್ಲಿ ಎಲ್ಲಾ ಉದ್ಯೋಗಿಗಳಿಗೂ ಪಾಸ್ ಇರುವಾಗ ರೈತರಿಗೆ ಮಾತ್ರ ಈ ಪಾಸ್ ಏಕಿಲ್ಲವೆಂಬ ಪ್ರಶ್ನೆ ಕಾಡಿದಾಗ ಇದರ ಬಗ್ಗೆ ಚಿಂತನೆ ಹೊಳೆಯಿತು ಮತ್ತು ರೈತರಿಗೆ ಗ್ರೀನ್ ಪಾಸ್ ವಿತರಣೆಗೆ ಸುಗಮ ದಾರಿ ಸಾಧ್ಯವಾಯಿತು, ಈ ಪರಿಣಾಮದಿಂದಲೇ ರೈತರಿಗೆ ಶಾಶ್ವತ ಐಡಿ ಕಾರ್ಡ್ ನೀಡುವ ಕಾರ್ಯ ಕೈಗೊಂಡಿದ್ದೇನೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.