ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ನಾಗೇನಹಳ್ಳಿ ಗ್ರಾಮ ಸೀಲ್ ಡೌನ್ ಮಾಡಲಾಗಿದೆ. ಈಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಅವರು ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಅವರು ಬೇಲೂರು ವಿಧಾನಸಭಾ ಕ್ಷೇತ್ರದ ನಾನಾಕಡೆ ಸೀಲ್ ಡೌನ್ ಆದ ಊರಿನ ಜನರಿಗೆ ಪಡಿತರ ಕಿಟ್ ನೀಡುವ ಮೂಲಕ ಧೈರ್ಯ ತುಂಬುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರೊಂದಿಗೆ ಇಂದು ಅರಸೀಕೆರೆ ತಾಲ್ಲೂಕಿನ ಹೋಬಳಿಯ ನಾಗೇನಹಳ್ಳಿ ಗ್ರಾಮದಲ್ಲಿ ಕಿಟ್ ವಿತರಣೆ ಮಾಡಿದ್ದೇವೆ ಎಂದರು. ಹಾಗೆಯೇ ಬಹಳ ದಿನಗಳಿಂದ ಚರಂಡಿ ನೀರು ನಿಂತು ಬಹಳ ತೊಂದರೆಯಾಗುತ್ತಿದೆ ಎಂದು ಓರ್ವ ಮಹಿಳೆ ಕೇಳಿಕೊಂಡರು. ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಬಗೆಹರಿಸುವಂತೆ ಸೂಚಿಸಿದರು.