ಇಳಕಲ್: ಸ್ವಯಂ ಘೋಷಿತ ತೆರಿಗೆ ಪದ್ಧತಿ (ಎಸ್ಎಎಸ್) ಅನುಸಾರ 2020-2021ನೇ ಸಾಲಿನ ಆರ್ಥಿಕ ವರ್ಷಕ್ಕೆ ತೆರಿಗೆ ದರ ಹೆಚ್ಚಳದ ಕ್ರಮವನ್ನು ಕೈಬಿಡಬೇಕು. ಈ ವರ್ಷದ ಆಸ್ತಿ ತೆರಿಗೆ ಪಾವತಿಸಲು ಮೇ 31ರವರೆಗೆ ನೀಡಿರುವ ಶೇ. 5ರ ರಿಯಾಯ್ತಿ ಅವಧಿಯನ್ನು ಡಿಸೆಂಬರ್ 31ರವರೆಗೂ ವಿಸ್ತರಿಸಬೇಕೆಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಸಮಗ್ರ ವಿವರದ ಪತ್ರ ಬರೆದಿರುವ ಅವರು, ಕೊರೊನಾದಿಂದ ಜನ ಜೀವನ ದುಸ್ತರವಾಗಿದೆ. ಕೇಂದ್ರ-ರಾಜ್ಯ ಸರಕಾರ, ಹಣಕಾಸು ಸಂಸ್ಥೆಗಳಿಗೆ ಪಾವತಿ ಮಾಡಬೇಕಾದ ಎಲ್ಲ ರೀತಿಯ ಕಂತುಗಳ ಪಾವತಿ ಅವಧಿಯನ್ನು ಈಗಾಗಲೇ 3 ತಿಂಗಳು ಕಾಲ ಮುಂದೂಡಿವೆ. ಎಸ್ಎಎಸ್ ಪದ್ಧತಿ ಅನುಸಾರ ಏಪ್ರೀಲ್ 30ರೊಳಗೆ ತೆರಿಗೆ ಪಾವತಿಸುವ ಆಸ್ತಿದಾರರಿಗೆ ಶೇ. 5ರ ರಿಯಾಯಿತಿಯನ್ನು ಮೇ 31ರವರೆಗೆ ವಿಸ್ತರಿಸಿ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ. ಇದು 1ನೆ ಹಂತದ ಲಾಕ್ ಡೌನ್ ಗಮನಿಸಿ ಪ್ರಕಟವಾದ ನಿರ್ಧಾರವಾಗಿತ್ತು. ಇದೀಗ ಲಾಕ್ ಡೌನ್ ಮೇ 18ರವರೆಗೂ ಮುಂದುವರಿದಿದೆ. ಕೊರೊನಾ ಭೀಕರತೆ ದಿನೆ ದಿನೇ ಹೆಚ್ಚಾಗುತ್ತಿದ್ದು, ಮುಂದೇನೆಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಇದರಿಂದ ಎಲ್ಲ ವರ್ಗಗಳ ಜನತೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಈ ಹಂತದಲ್ಲಿ ಸರಕಾರ ತೆರಿಗೆದಾರರಿಗೆ ಸೂಕ್ತ ರಿಯಾಯ್ತಿ ಕೊಡಲೇಬೇಕಾಗಿದೆ. ಮತ್ತೊಂದು ಪ್ರಮುಖ ವಿಚಾರವೆಂದರೆ 2005-06ರಿಂದ ಜಾರಿಯಾಗಿರುವ ಎಸ್ಎಎಸ್ ಅನುಸಾರ ಕನಿಷ್ಟ ಶೇ. 15ರಷ್ಟು ತೆರಿಗೆ ದರ ಹೆಚ್ಚಳವನ್ನು ಪ್ರತಿ 3ವರ್ಷಕ್ಕೊಮ್ಮೆ ಮಾಡಲಾಗುತ್ತಿದೆ. 2020-21ನೆ ಆರ್ಥಿಕ ವರ್ಷದಲ್ಲಿ ತೆರಿಗೆ ಹೆಚ್ಚಳದ ಸರದಿ ಬಂದಿದೆ. ಅದರಂತೆ ಸ್ಥಳೀಯ ಸಂಸ್ಥೆಗಳು ಈಗಾಗಲೇ ಮನಸೋ ಇಚ್ಛೆ ತೆರಿಗೆಯನ್ನು ಹೆಚ್ಚಿಸಿವೆ. ಇದು ರಾಜ್ಯದಲ್ಲಿನ ತೆರಿಗೆದಾರರಿಗೆ ಮತ್ತಷ್ಟು ಹೊರೆಯಾಗಿದೆ. ಅದಕ್ಕಾಗಿ ತಾವು ಈ ವಿಷಯದಲ್ಲಿ ತಕ್ಷಣವೇ ಮಧ್ಯ ಪ್ರವೇಶಿಸಿ ತೆರಿಗೆ ಹೆಚ್ಚಳದ ಕ್ರಮವನ್ನು ಕೈಬಿಡಬೇಕು ಹಾಗೂ ಸದರಿ ವರ್ಷದ ಆಸ್ತಿ ತೆರಿಗೆ ಪಾವತಿಗಾಗಿ ಮೇ 31ರವರೆಗೆ ನೀಡಿರುವ ಶೇ. 5ರ ರಿಯಾಯ್ತಿ ಅವಧಿಯನ್ನು 2020ರ ಡಿಸೆಂಬರ್ 31ರವರೆಗೂ ವಿಸ್ತರಿಸುವಂತೆ ಪೌರಾಡಳಿತ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಹೊಂಗಲ್ ಅವರು ಕೇಳಿಕೊಂಡಿದ್ದಾರೆ.