ಚಿತ್ರದುರ್ಗ, ಸೆಪ್ಟೆಂಬರ್, 15: ಭೂ ಕಬಳಿಕೆ ಹಾಗೂ ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಯಾವ ನೋಟಿಸ್ ಕೊಟ್ಟಿಲ್ಲ, ಬಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ನೋಟಿಸ್ ಬಂದಿಲ್ಲ.
ನೋಟಿಸ್ ಬಂದರೆ ನಾನು ತೆಗೆದುಕೊಂಡು, ನ್ಯಾಯಕ್ಕೆ ತಲೆ ಬಾಗುವೆ ಎಂದರು.
ರಾಜ್ಯದಲ್ಲಿ ವಿರೋಧ ಪಕ್ಷಗಳು ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯ ಮಾಡಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ರಾಜಕೀಯ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದರೆ ಯಶಸ್ವಿ ಆಗುತ್ತಾರಾ ಎಂದು ವಿರೋಧ ಪಕ್ಷಗಳ ಆರೋಪಕ್ಕೆ ಟಾಂಗ್ ನೀಡಿದರು. ಸತ್ಯ ಯಾವತ್ತಿದ್ದರೂ ಗೆಲ್ಲಬೇಕು. ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಅಷ್ಟೇ, ನಾನು ಬಿಜೆಪಿ, ಜೆಡಿಎಸ್ ರಾಜಕೀಯ ಮುಖಂಡರ ಜೊತೆ ಮಾತನಾಡಿದೆ. ಅವರು ನನಗೆ ವೈಯಕ್ತಿಕ ಗೆಳೆಯರು ಎಂದರು.
ಸ್ವಲ್ಪ ದಾಖಲೆ ನೋಡಿ ನನ್ನ ಬಗ್ಗೆ ರಿಯಾಕ್ಟ್ ಮಾಡಿ ಎಂದೇ, ಅದಕ್ಕೆ ಅವರು ಈ ಪ್ರಕರಣದಲ್ಲಿ ಸುಧಾಕರ್ ಅವರದ್ದು ಏನು ತಪ್ಪು ಇಲ್ಲ ಅಂತ ಗೊತ್ತು, ಆದರೂ ನಾವು ರಾಜಕಾರಣ ಮಾಡುತ್ತೇವೆ ಅಂತಾ ನನಗೆ ಹೇಳುತ್ತಾರೆ ಎಂದರು. ನಮ್ಮ ಪ್ರಜಾಪ್ರಭುತ್ವ ತುಂಬಾ ಸ್ಟ್ರಾಂಗ್ ಇದೆ. ಎಷ್ಟೊ ಜನ ಅಪರಾಧಿಗಳು ತಪ್ಪಿಸಿಕೊಳ್ಳಲಿ. ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಜೀವನದಲ್ಲಿ ನಾನು ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದೇನೆ ಎಂದರು.
ಭೂ ಕಬಳಿಕೆ, ದೌರ್ಜನ್ಯ ಆರೋಪ: ಸಚಿವ ಡಿ.ಸುಧಾಕರ್ ರಾಜೀನಾಮೆಗೆ ಪೂರ್ಣಿಮಾ ಶ್ರೀನಿವಾಸ್ ಆಗ್ರಹ
63 ವರ್ಷ ಜಿಲ್ಲೆಯಲ್ಲಿ, ರಾಜ್ಯದಲ್ಲಿ ನಾನು ಏನು ಅಂತಾ ಜನರು ನೋಡಿದ್ದಾರೆ. ಒಬ್ಬ ಅಲ್ಪಸಂಖ್ಯಾತನಾಗಿ ಈ ಜಿಲ್ಲೆ ಜನ ನನ್ನ 4 ಬಾರಿ ಗೆಲ್ಲಿಸಿದ್ದಾರೆ. ಇದಕ್ಕೆ ಕಾರಣ ನನ್ನ ಪ್ರಾಮಾಣಿಕತೆ, ವಿಶ್ವಾಸ ನೋಡಿ ತಾನೇ ಗೆಲ್ಲಿಸಿದ್ದಾರೆ. ಜನಾಂಗ ಇಲ್ಲದವನಿಗೆ ಹೀಗೆ ಜನ ನಂಬಿಕೆ ಇಟ್ಟು ಗೆಲ್ಲಿಸುತ್ತಾರಾ? ಇದರಲ್ಲಿ ಕುತಂತ್ರ ರಾಜಕೀಯ ತುಂಬಾ ಅಡಗಿದೆ ಎಂದರು.
2008ರಲ್ಲಿ ಮಂತ್ರಿ ಆದ ಒಂದು ತಿಂಗಳೊಳಗೆ ನನ್ನ ಮೇಲೆ ಸಿಬಿಐ ಕೇಸ್ ಹಾಕಿದ್ದರು. ಆವಾಗ ಬಿಜೆಪಿಯವರು ಕೈ ಬಿಟ್ಟಿದ್ದಾರಾ? ಆಗ ಅವರ ಜೊತೆ ಮೂರು ವರ್ಷ ಕಂಪ್ಲೀಟ್ ಇದ್ದೆ. ಈಗ ರಾಜಕೀಯ ಮಾಡುತ್ತಿದ್ದಾರೆ ಮಾಡಲಿ. ಈಗಾಗಲೇ ನಾನು ಸಿಎಂ, ಡಿಸಿಎಂ, ಗೃಹ ಸಚಿವರ ಜೊತೆ ಮಾತಾಡಿದ್ದೇನೆ. ನಾನು ಪಾರದರ್ಶಕವಾಗಿ ಇದ್ದೇನೆ, ನಾನ್ಯಾಕೆ ಭಯಪಡಲಿ ಎಂದರು.