ಸೋಷಿಯಲ್ ಮೀಡಿಯಾದಲ್ಲಿ ಡಿಎಂಕೆ ನಾಯಕನ ಹೇಳಿಕೆಗೆ ವಿರೋಧ
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿರೋ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಉದಯನಿಧಿ ಹೇಳಿಕೆಗೆ ಹಿಂದು ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾದ ಮೇಲೂ ಉದಯನಿಧಿ ಮಾರನ್ ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ. ಸನಾತನ ಧರ್ಮದಿಂದ ಸಾಮಾಜಿಕ ಅನ್ಯಾಯ ಆಗುತ್ತಿದೆ. ಈ ವಿಚಾರವನ್ನು ನಾನು ಇಂದು, ನಾಳೆಯೂ ಹೇಳುತ್ತೇನೆ ಎಂದಿದ್ದಾರೆ.
ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ನಿರ್ಮೂಲನಾ ಸಮ್ಮೇಳನ ಎನ್ನುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದರು. ನೀವು ಈ ಕಾರ್ಯಕ್ರಮವನ್ನು ಸನಾತನ ವಿರೋಧಿ ಸಮ್ಮೇಳನ ಎನ್ನುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನವೆಂದು ಆಯೋಜಿಸಿದ್ದೀರಿ. ಇದು ಬಹಳ ಇಷ್ಟವಾಯಿತು. ಇದೇ ವೇಳೆ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಹೋಲಿಸಿದ್ದರು. ಸದ್ಯ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು, ಸಚಿವರ ವಿರುದ್ಧ ಸಖತ್ ಗರಂ ಆಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಸನಾತನ ಧರ್ಮದ ವಿರುದ್ಧ ಮಾತನಾಡಿದ್ದಕ್ಕೆ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.