ಸರ್ಕಾರ ಹೊರಡಿಸಿರುವ ಕೊರೋನಾ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಏ. 20ರವರೆಗೆ ಈ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕಾಗಿ ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿರುವ ಸರ್ಕಾರದ ಕ್ರಮಕ್ಕೆ ಚಿತ್ರರಂಗ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ, ಈ ಕ್ರಮವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಈ ಹಿನ್ನಲೆ ಮಾತನಾಡಿದ ಸಚಿವರು, ಸಿನಿಮಾ ಕ್ಷೇತ್ರಕ್ಕೆ ಯಾವುದೇ ವಿನಾಯತಿ ಇಲ್ಲ. ಎರಡನೇ ಅಲೆ ಹೊಸ್ತಿಲಲ್ಲಿ ನಾವಿದ್ದೇವೆ. ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ದಾರಿಯಿಲ್ಲ. ರಾಜ್ಯದಲ್ಲಿ ಪ್ರತಿನಿತ್ಯ 5 ಸಾವಿರ ಪ್ರಕರಣ ದಾಖಲಾಗುತ್ತಿದೆ. ಬೆಂಗಳೂರಲ್ಲಿ 3 ಸಾವಿರ ಕೇಸ್ ದಾಖಲಾಗಿದೆ. ಈಗ ಕ್ರಮಕೈಗೊಳ್ಳದಿದ್ರೆ ಹೆಚ್ಚುಕಡಿಮೆ ಆಗಲಿದೆ ಎಂದರು.ಇನ್ನು ಈ ಮಾರ್ಗಸೂಚಿಗಳನ್ನು ಎಲ್ಲರ ಜೊತೆ ಚರ್ಚಿಸಿಯೇ ನಿರ್ಧರಿಸಿದ್ದೇವೆ. ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿಲ್ಲ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕ್ಷೇತ್ರದ ಮೇಲೆ ನಿರ್ಬಂಧ ಹೇರಲು ಸರ್ಕಾರಕ್ಕೂ ಇಷ್ಟವಿಲ್ಲ. ಆದರೆ ಈಗ ಅನಿವಾರ್ಯವಾಗಿ ಮಾರ್ಗಸೂಚಿ ಪಾಲನೆ ಮಾಡಲೇಬೇಕು ಎಂದರುಚುನಾವಣಾ ಆಯೋಗದಿಂದಲೂ ಮಾರ್ಗಸೂಚಿ ಪ್ರಕಟವಾಗಲಿದೆ. ಧಾರ್ಮಿಕ ಕ್ಷೇತ್ರಗಳಿಗೂ ಕಠಿಣ ಕ್ರಮ ಜಾರಿ ಮಾಡಲಾಗುವುದು.ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ ಎಂದರು.ಕೊರೋನಾ ಲಸಿಕೆ ವಿತರಣೆ ಯಶಸ್ವಿಯಾಗಿ ನಡೆಯುತ್ತಿದ್ದು, ದಯವಿಟ್ಟು 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಿರಿ ಎಂದು ಇದೇ ವೇಳೆ ಮನವಿ ಮಾಡಿದರು. ಸೋಂಕು ನಿಯಂತ್ರಣಕ್ಕೆ ಜನರು ಗುಂಪು ಸೇರುವುದನ್ನು ಕಡಿಮೆ ಮಾಡಿ, ಮಾಸ್ಕ್ ಬಳಸುವಂತೆ ತಿಳಿಸಿದರು.
ಚಿತ್ರಮಂದಿರಗಳಲ್ಲಿ ನೂರರಷ್ಟು ಆಸನ ಭರ್ತಿಗೆ ನಟ ಪುನೀತ್ ರಾಜ್ಕುಮಾರ್ ಮನವಿಗೆ ಪ್ರತಿಕ್ರಿಯಿಸಿದ ಅವರು, ವಲಯವಾರು ಎಲ್ಲರ ಬಗ್ಗೆ ಗೌರವ, ಅಭಿಮಾನ ಇದೆ.ಶಾಲೆ, ಜಿಮ್, ಸ್ವಿಮ್ಮಿಂಗ್ ಪೂಲ್, ಮದುವೆ, ಅಪಾರ್ಟ್ಮೆಂಟ್ ಎಲ್ಲವೂ ತೆಗೆದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಸೋಂಕು ನಿಯಂತ್ರಣಕ್ಕೆ ಬಂದರೆ ಮತ್ತೆ, ಎಲ್ಲವಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು