ಬೆಂಗಳೂರು,ಅ.8- ಕಸ್ತೂರಿನಗರದಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಆಯುಷಾ ಬೇಗ್ ಅವರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಿರ್ಜಾ ಅಕ್ಸರ್ ಅಲಿ ಬೇಗ್ ಎಂಬುವರನ್ನು ಪೊಲೀಸರು ವಿಚಾರಣೆಗೆ ಕರೆತಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
2012ರಲ್ಲಿ ಬೆನಗಾನಹಳ್ಳಿ ವಾರ್ಡ್ನ ಡಾಕ್ಟರ್ ಲೇಔಟ್ 2ನೇ ಅಡ್ಡರಸ್ತೆಯಲ್ಲಿನ 40-60 ಸುತ್ತಳತೆಯ ನಿವೇಶನದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಲಾಗಿತ್ತು. ಈ ಅಪಾರ್ಟ್ಮೆಂಟ್ನಲ್ಲಿ 8 ಮನೆಗಳಿದ್ದು, ಮೂರು ಕುಟುಂಬಗಳಷ್ಟೇ ವಾಸವಾಗಿದ್ದವು. ಉಳಿದ ಐದು ಮನೆಗಳು ಖಾಲಿ ಇದುದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದವರಿಗೆ ಅಲುಗಾಡಿದ ಅನುಭವವಾಗಿದೆ. ತಕ್ಷಣ ಮೂರು ಕುಟುಂಬಗಳು ಹೊರಗೆ ಬಂದ ಕೆಲವೇ ನಿಮಿಷಗಳಲ್ಲಿ ಕಟ್ಟಡ ಕುಸಿದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬೆಸ್ಕಾಂ ಸಿಬ್ಬಂದಿ ಆಗಮಿಸಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಹಾಗೂ ಅಡುಗೆ ಸಿಲಿಂಡರ್ಗಳ ಸಂಪರ್ಕವನ್ನು ಕಡಿತಗೊಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದಲ್ಲಿ ಸಿಲುಕಿಕೊಂಡಿದ್ದ ಶ್ವಾನವನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಬಿಬಿಎಂಪಿ ಅಧಿಕಾರಿಯೊಬ್ಬರು ರಾಮಮೂರ್ತಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ಕಟ್ಟಡ ಕುಸಿತ ಪ್ರಕರಣಗಳು ನಡೆಯುತ್ತಲೇ ಇರುವುದರಿಂದ ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣದಲ್ಲಿ ಸಹಾಯಕ ಎಂಜಿನಿಯರ್ ಒಬ್ಬರನ್ನು ಅಮಾನತು ಮಾಡಿದೆ.
ನಿವಾಸಿಗಳ ಪರದಾಟ:
ಈ ಅಪಾರ್ಟ್ಮೆಂಟ್ನ ಮೂರು ಮನೆಗಳಲ್ಲಿ ವಾಸವಾಗಿದ್ದ ನಿವಾಸಿಗಳು ಪ್ರಾಣ ರಕ್ಷಣೆಗಾಗಿ ಹೊರಗೆ ಓಡಿಬಂದಿದ್ದಾರೆ ಹೊರತು ಬೆಲೆ ಬಾಳುವ ಅಗತ್ಯ ವಸ್ತಗಳು ತರಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಾವು ಇಷ್ಟು ವರ್ಷ ದುಡಿದು ಸಂಪಾದಿಸಿದ ವಸ್ತುಗಳು ಹಾಳಾಗಿವೆ. ನಾವು ಬೇರೆ ಮನೆ ಮಾಡಬೇಕಾದರೂ ತಮ್ಮ ಬಳಿ ಹಣವಿಲ್ಲ.ನಮ್ಮ ಸಂಕಷ್ಟವನ್ನು ಕೇಳುವವರು ಯಾರು, ನಾವು ಮಾಡದ ತಪ್ಪಿಗೆ ಬೀದಿಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.