ಆಯುಧಪೂಜೆ- ವಿಜಯದಶಮಿ ಹಬ್ಬಕ್ಕೆ ಸಿದ್ಧತೆಗಳು ನಡೆದಿದೆ. ಬೂದುಕುಂಬಳ ಹೊರತಾಗಿ ಹೂ ಹಣ್ಣು, ಬಾಳೆಕಂದು ಸೇರಿದಂತೆ ಮಿಕ್ಕೆಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದ್ದು, ಹಬ್ಬಕ್ಕೆ ಸ್ವಾಗತ ನಡೆದಿದೆ.
ನಗರದ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ.
ಬೂದು ಕುಂಬಳಕಾಯಿ ಕೆ.ಜಿ.ಗೆ 10ರಿಂದ 15 ರೂ. ಇದೆ. ಆದರೆ, ಹೂವಿನ ಬೆಲೆಗಳು ಗಗನಕ್ಕೇರಿವೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿ.ಗೆ 400ರಿಂದ 500 ರೂ.ಗಳ ವರೆಗಿದ್ದರೆ, ಕನಕಾಂಬರ 1,200 ರೂ. ಸೆವಂತಿಗೆ, ಬಟನ್ಸ್, ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿ.ಗೆ 150 ರೂ. ದಾಟಿವೆ. ಬಾಳೆ ಹಣ್ಣು ಕೆ.ಜಿ.ಗೆ 20ರಿಂದ 60 ರೂ. ಸೇರಿದಂತೆ ಇತರ ಹಣ್ಣುಗಳ ಬೆಲೆಯೂ ಕೆ.ಜಿ.ಗೆ 20ರಿಂದ 30 ರೂ. ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದ್ದು, ಆಯುಧ ಪೂಜೆಗಾಗಿ ಮಗ್ಗಗಳ ಯಂತ್ರಗಳು, ವಾಹನಗಳು ಮೊದಲಾದವುಗಳನ್ನು ಶುದ್ಧ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.