ಬಹು ದಿನಗಳ ಕಾಯುವಿಕೆ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಚಿತ್ರರಂಗದ ಕಡೆಗೆ ತುಸು ಕನಿಕರದ ದೃಷ್ಟಿ ತೋರಿದೆ. ಚಿತ್ರಮಂದಿರಗಳ ಮೇಲೆ ಹೇರಲಾಗಿದ್ದ 50% ಆಕ್ಯುಪೆನ್ಸಿ ಆದೇಶವನ್ನು ಹಿಂಪಡೆದು, ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ.
ಇಂದು ಮುಖ್ಯಮಂತ್ರಿಗಳೊಟ್ಟಿಗೆ ನಡೆದ ಸಭೆಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಳೆ (ಜನವರಿ 05)ರಿಂದಲೇ ರಾಜ್ಯದಾದ್ಯಂತ ಚಿತ್ರಮಂದಿರಗಳು ತಮ್ಮ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದಾಗಿದೆ.
ಚಿತ್ರಮಂದಿರಗಳು ಮಾತ್ರವೇ ಅಲ್ಲದೆ ಜಿಮ್ ಹಾಗೂ ಈಜುಕೊಳಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನೂ ಸರ್ಕಾರ ಹಿಂಪಡೆದಿದ್ದು ಅವುಗಳೂ ಸಹ 100% ಆಕ್ಯುಪೆನ್ಸಿಯೊಟ್ಟಿಗೆ ನಾಳೆಯಿಂದಲೇ ಕಾರ್ಯ ನಿರ್ವಹಿಸಬಹುದಾಗಿದೆ.
ಡಿಸೆಂಬರ್ ಕೊನೆ ವಾರದಲ್ಲಿ ಒಮಿಕ್ರಾನ್ ವೈರಾಣು ಹರಡುವಿಕೆ ಹೆಚ್ಚಾದ ಬಳಿಕ ಕೆಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಯಿತು. ಕೋವಿಡ್ ಸ್ಥಿತಿಗತಿ, ಆಸ್ಪತ್ರೆ ದಾಖಲಾತಿ ಅವಲೋಕಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಜನವರಿ 15 ರಿಂದಲೇ ಈ ಮಾರ್ಗಸೂಚಿಯಲ್ಲಿ ಕೆಲ ರಿಯಾಯಿತಿಗಳನ್ನು ನೀಡಲು ಆರಂಭಿಸಲಾಗಿತ್ತು. ಚಿತ್ರಮಂದಿರ, ಜಿಮ್, ಯೋಗ ಕೇಂದ್ರ, ಸ್ವಿಮ್ಮಿಂಗ್ ಪೂಲ್ ನಲ್ಲಿ 50% ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ನಿಯಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು ಸಚಿವ ಸುಧಾಕರ್.
ಜನವರಿಯಲ್ಲಿ ಆಸ್ಪತ್ರೆಗಳಲ್ಲಿ 5-6% ಆಸ್ಪತ್ರೆ ದಾಖಲಾತಿ ಇತ್ತು. ಈಗ ಇದು 2% ಗೆ ಇಳಿಕೆಯಾಗಿದೆ ಎಂಬ ಅಂಶ ಗಮನಿಸಲಾಗಿದೆ. ಈ ನಿಯಮ ಹೇರಿದ್ದರಿಂದ ಚಿತ್ರಮಂದಿರಗಳ ಮಾಲೀಕರು, ನಿರ್ಮಾಪಕರು ಹಾಗೂ ಈ ಉದ್ಯಮದಲ್ಲಿರುವವರಿಗೆ ನಷ್ಟವಾಗಿದೆ. ಚಿತ್ರರಂಗದ ಅಭಿಮಾನಿಗಳು, ಉದ್ಯಮದಲ್ಲಿ ತೊಡಗಿಸಿಕೊಂಡವರ ನಿರೀಕ್ಷೆಯನ್ನು ಗಮನದಲ್ಲಿರಿಸಿ ಈ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಇದೇ ರೀತಿ ಜಿಮ್ ಮತ್ತು ಈಜುಕೊಳಗಳಲ್ಲೂ ಶೇ.100 ರಷ್ಟು ಬಳಕೆಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಮುನ್ನಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಚಿತ್ರ ವೀಕ್ಷಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವೀಕ್ಷಿಸುವಾಗ ಒಳಗೆ ಆಹಾರ ಸೇವಿಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗುವುದು. ಈ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಅಧಿಕಾರಿಗಳು ಯಾವುದೇ ವೇಳೆಯಲ್ಲಿ ಪರಿಶೀಲನೆ ಮಾಡುತ್ತಾರೆ. ಈ ನಿಯಮಗಳನ್ನು ಪಾಲಿಸದಿದ್ದರೆ ಚಿತ್ರಮಂದಿರಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ವ್ಯಕ್ತಿ ಈ ಸ್ಥಳಗಳಿಗೆ ಪ್ರವೇಶಿಸುವ ಮುನ್ನ ಕೋವಿಡ್ ನ ಎರಡೂ ಡೋಸ್ ಲಸಿಕೆ ಪಡೆದಿರಬೇಕು. ಅಂತಹವರಿಗೆ ಮಾತ್ರ ಅವಕಾಶ ನೀಡಬೇಕೆಂದು ಸೂಚಿಸಲಾಗುತ್ತದೆ. ಈ ಕುರಿತ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು ಎಂದರು.
ಜನವರಿ ಅಂತ್ಯದ ವೇಳೆಗೆ ಸಭೆ ನಡೆಸಿದ್ದ ಸರ್ಕಾರವು ಬಾರ್, ರೆಸ್ಟೊರೆಂಟ್, ಪಬ್ಗಳ ಮೇಲೆ ಹೇರಲಾಗಿದ್ದ 50% ಆಕ್ಯುಪೆನ್ಸಿ ನಿಯಮವನ್ನು ಹಿಂಡೆ ಪಡೆದಿದ್ದವು. ಆದರೆ ಚಿತ್ರಮಂದಿರಗಳ ಮೇಲೆ ಹೇರಲಾಗಿದ್ದ ನಿಯಮವನ್ನು ಹಿಂಪಡೆದಿರಲಿಲ್ಲ. ಇದು ಚಿತ್ರರಂಗದವರಲ್ಲಿ ಅಸಮಾಧಾನ ಮೂಡಿಸಿತ್ತು.
ಸ್ವತಃ ಶಿವರಾಜ್ ಕುಮಾರ್ ಮೈಸೂರಿನಲ್ಲಿ ಮಾತನಾಡಿ, ಖುದ್ದಾಗಿ ಸಿಎಂ ಅವರನ್ನು ಭೇಟಿಯಾಗಿ 100% ಆಕ್ಯುಪೆನ್ಸಿಗೆ ಅವಕಾಶ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದರು. ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರು ಸಿಎಂ ಅವರನ್ನು ಭೇಟಿ ಮಾಡಿ ಮನವಿ ನೀಡಿದ್ದರು. ಅಂತೆಯೇ ಇದೀಗ ಸರ್ಕಾರವು ಚಿತ್ರಮಂದಿರಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ತೆರೆದಿದೆ.
ಬಿಡುಗಡೆಗೆ ತಯಾರಾಗಿದ್ದ ಹಲವು ಸಿನಿಮಾಗಳು 50% ಆಕ್ಯುಪೆನ್ಸಿ ಆದೇಶ ಹೊರಡಿಸಿದ್ದರಿಂದಾಗಿ ಬಿಡುಗಡೆಯಿಂದ ಹಿಂದೆ ಸರಿದಿದ್ದವು. ಆದರೆ ಈಗ 100% ಆಕ್ಯುಪೆನ್ಸಿಗೆ ಅವಕಾಶ ನೀಡಿರುವ ಕಾರಣ ಸಾಲು-ಸಾಲು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada