ಹಿಜಾಬ್ ಧರಿಸಲು ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಪಿಎಫ್ಐ ವತಿಯಿಂದ ಕರ್ನಾಟಕ ಬಂದ್ಗೆ ಕರೆ ನೀಡಿದೆ.ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಂದ್ಗೆ ಬೆಂಬಲ ನೀಡಲಾಗಿದೆ.ಬೆಂಗಳೂರಿನ ಶಿವಾಜಿನಗರದಲ್ಲಿ ಅಂಗಡಿಗಳನ್ನು ಬಂದ್ ಮಾಡಿ ವ್ಯಾಪಾರಿಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಹಲವು ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿ ಹಿಜಾಬ್ ವಿಚಾರದಲ್ಲಿ ಕರೆ ನೀಡಿರುವ ಬಂದ್ ಬೆಂಬಲಿಸಿದ್ದಾರೆ.ಶಿವಾಜಿನಗರದ ಸ್ಟಿಫನ್ ಸ್ಕ್ವೇರ್ ಮರ್ಚೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಅಲಿಜಾನ್ ಮಾತನಾಡಿ, “ನ್ಯಾಯಾಲಯದ ತೀರ್ಪು ಷರಿಯತ್ ಕಾನೂನಿಗೆ ವಿರುದ್ಧವಾಗಿದೆ” ಎಂದು ಹೇಳಿದರು.ಶಿವಾಜಿನಗರದಲ್ಲಿ ಮುಂಜಾನೆಯೇ ಅಂಗಡಿಗಳು ಬಾಗಿಲು ತೆರೆಯಲಿದ್ದು, ಜನರು ಕಿಕ್ಕಿರಿದು ಸೇರಿರುತ್ತಿದ್ದರು. ಆದರೆ ಇಂದು ಕೇವಲ ಟೀ ಅಂಗಡಿಗಳು ಮಾತ್ರ ತೆರೆದಿದ್ದವು. ಹೂವು, ಹಣ್ಣು, ಮಟನ್ ಶಾಪ್ಗಳು ಬಾಗಿಲು ಮುಚ್ಚಿದ್ದವು.ಬಂದ್ ಕರೆ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. 25 ಕೆಎಸ್ಆರ್ಪಿ, 35 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಹೊಯ್ಸಳ ವಾಹನಗಳ ಗಸ್ತು ಹೆಚ್ಚಿಸಲಾಗಿದೆ.
ಹೈಕೋರ್ಟ್ ತೀರ್ಪು ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಮಂಗಳವಾರ ಅಂತಿಮ ತೀರ್ಪು ಪ್ರಕಟಿಸಿತ್ತು.ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ನೇತೃತ್ವದ ತ್ರಿ ಸದಸ್ಯ ಪೀಠ, ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ತೀರ್ಪು ಕೊಟ್ಟಿತ್ತು.
ರಾಮನಗರದಲ್ಲಿ ಪ್ರತಿಭಟನೆ ರಾಮನಗರದಲ್ಲಿಯೂ ಕರ್ನಾಟಕ ಬಂದ್ ಕರೆ ಬೆಂಬಲಿಸಲಾಗಿದೆ. ಚನ್ನಪಟ್ಟಣದ ರೇಷ್ಮೆ ಮಾರುಕಟ್ಟೆಯಲ್ಲಿ ಮುಸ್ಲಿಂ ರೀಲರ್ಸ್ಗಳು ರೈತರ ರೇಷ್ಮೆಗೂಡು ಖರೀದಿಗೆ ಮುಂದಾಗಲಿಲ್ಲ.
ರೀಲರ್ಗಳು ಬಾರದ ಹಿನ್ನಲೆ ರಸ್ತೆಗೆ ಇಳಿದ ರೈತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರೇಷ್ಮೆ ಹರಾಜು ಆಗದ ಹಿನ್ನಲೆಯಲ್ಲಿ ರೈತರು ರೇಷ್ಮೆ ಗೂಡು ಮನೆಗೆ ವಾಪಸ್ ತೆಗೆದುಕೊಂಡು ಹೋದರು. ಬದಲಿ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ರೈತರಿಗೆ ಮನವಿ ಮಾಡಿದರು.
ಮುಸ್ಲಿಂ ಬಡಾವಣೆಗಳಲ್ಲಿ ಬಂದ್ ಕೋಲಾರ ಜಿಲ್ಲೆಯಲ್ಲಿಯೂ ಮುಸ್ಲಿಂ ಬಡಾವಣೆಗಳಲ್ಲಿ ಅಂಗಡಿಗಳನ್ನು ಮುಚ್ಚಿ ಕರ್ನಾಟಕ ಬಂದ್ಗೆ ಬೆಂಬಲ ನೀಡಲಾಗಿದೆ. ರಹಮತ್ ನಗರ, ಶಾಹಿನ್ ಶಾ ನಗರ ಮುಂತಾದ ಕಡೆ ಹಾಲು, ಔಷಧ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳು ಬಂದ್ ಆಗಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಆದ್ದರಿಂದ ಕೆಲವು ಕಡೆ ಮುಸ್ಲಿಂ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿ, ಕರ್ನಾಟಕ ಬಂದ್ಗೆ ಬೆಂಬಲ ನೀಡಿದ್ದಾರೆ.