ಲಕ್ಷ್ಮೇಶ್ವರ: ತಾಲೂಕಿನ ಸಮೀಪದ ಗೋವಾನಾಳ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆಯನ್ನು ಗ್ರಾಮದ ಪ್ರಗತಿಪರ ರೈತರು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಆಚರಣೆ ಮಾಡಿದರು.
ರೈತ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಪಿ ಬಳಿಗಾರ ರೈತರನ್ನು ಉದ್ದೇಶಿಸಿ ಮಾತನಾಡಿ, ರೈತರು ಈ ನಾಡಿನ ಬೆನ್ನೆಲುಬು. ರೈತ ಬೆಳೆದರೆ ದೇಶದ ಸರ್ವಜನ ಸಮುದಾಯಕ್ಕೆ ಅನ್ನ ದೊರೆಯುತ್ತದೆ. ರೈತ ಬೆಳೆಯದಿದ್ದರೆ ಎಲ್ಲರೂ ಅನ್ನಕ್ಕಾಗಿ ಕಷ್ಟ ಪಡಬೇಕಾಗುತ್ತದೆ. ಈ ಮಣ್ಣಿನ ಮಗ ರೈತ , ರೈತರನ್ನು ಬೆಂಬಿಡದೆ ಕಾಡುತ್ತಿರುವ ಅಕಾಲಿಕ ಮಳೆಯಿಂದ ಬೆಳೆ ಹಾನಿ ಅತಿವೃಷ್ಟಿ ಬೆಳೆಯನ್ನು ನಾಶ ಮಾಡುತ್ತಿದ್ದು, ಮುಂಗಾರಿನ ಮಳೆಗೆ ಹೆಸರು ಬೆಳೆ ಹಳದಿ ನಂಜಾಣು ರೋಗದಿಂದ ಹೆಸರು ಬೆಳೆ ಹಾಳಾಗಿ ರೈತ ಕೈ ಸುಟ್ಟು ಕೊಳ್ಳುತ್ತಿದ್ದಾನೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರನ್ನು ಕಂಗಾಲಾಗಿಸಿದೆ. ಮುಂಗಾರಿನ ಬೆಳೆಗಳು ಅಲ್ಪ ಸ್ವಲ್ಪ ರೈತನ ಕೈ ಸೇರಿದರು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗುತ್ತಿಲ್ಲ ಇದು ಕೂಡ ಒಂದು ಕಡೆ ರೈತನನ್ನು ಸಮಸ್ಯೆಯ ಸುಳಿಗೆ ಸಿಲುಕಿಸುತ್ತಿದೆ. ಸರಕಾರ ಎಲ್ಲ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರವನ್ನು ನೀಡಬೇಕಾಗಿದೆ. ರೈತರಿಗೆ ನಿಗದಿತ ಸಮಯಕ್ಕೆ ಬೆಂಬಲ ಬೆಲೆ ಸಿಗುತ್ತಿಲ್ಲ ಯಾಕೆಂದರೆ ದಲ್ಲಾಲಿಗಳು ರೈತರ ಬೆಳೆಯನ್ನು ಖರೀದಿಸಿದ ನಂತರದಲ್ಲಿ ಬೆಂಬಲ ಬೆಲೆ ಕೇಂದ್ರಗಳು ತೆರೆದುಕೊಳ್ಳುತ್ತವೆ. ಇದು ಕೂಡ ಒಂದು ಕಡೆ ರೈತನನ್ನು ನೋವಿನ ಮಡುವಿಗೆ ಸಿಲುಕಿಸುತ್ತಿದೆ. ಇದನ್ನೆಲ್ಲವನ್ನು ಮನಗಂಡು ಸರ್ಕಾರ ರೈತರಿಗೆ ಸೂಕ್ತ ಸಮಯದಲ್ಲಿ ಸೂಕ್ತ ವೇಳೆಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತಾಯಿಸಿದರು.
ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರೈತರಿಂದ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಿತು. ಬೆಳೆ ವಿಮೆ ಪರಿಹಾರ, ಬೆಳೆ ಹಾನಿ ಪರಿಹಾರ, ನಿಗದಿತ ವೇಳೆಗೆ ಬೆಂಬಲ ಬೆಲೆ ಘೋಷಣೆ, ರೈತರ ಆತ್ಮಹತ್ಯೆ ಒಳಗಾಗದಂತೆ ತಡೆಗಟ್ಟಲು ಸೂಕ್ತ ಪರಿಹಾರ ಕಂಡುಕೊಳ್ಳುವುದು, ರೈತರಿಗೆ ಸಿಗಬೇಕಾದ ಸರಕಾರದ ಅನೇಕ ಯೋಜನೆಗಳ ಸುಲಭವಾಗಿ ರೈತರಿಗೆ ಸಿಗುವಂತಾಗಲು ಕ್ರಮ ಕೈಗೊಳ್ಳುವುದು ಸೇರಿದಂತೆ ಹತ್ತು ಹಲವಾರು ವಿಷಯಗಳನ್ನು ಸುಧೀರ್ಘವಾಗಿ ಚರ್ಚಿಸುವುದರ ಜೊತೆಗೆ ಗ್ರಾಮ ಮಟ್ಟದಲ್ಲಿ ರೈತ ಸಂಘಟನೆಯನ್ನು ಗಟ್ಟಿಗೊಳಿಸಿಕೊಂಡು ಹೋರಾಟ ಮಾಡುವುದರ ಜೊತೆಗೆ ಈ ಎಲ್ಲಾ ವಿಷಯಗಳ ಕುರಿತು ಸರಕಾರಕ್ಕೆ ಗಮನಹರಿಸುವುದು ಅಗತ್ಯವಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: