ಮೃತ ಶರೀರರದ ಜೊತೆ ಕಠೋರವಾಗಿ ವರ್ತಿಸಿ ಎಂದು ಯಾವ ಧರ್ಮವೂ ಹೇಳಿಲ್ಲ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಕಾರಣದಿಂದ 75 ವರ್ಷದ ಮಹಿಳೆ ಅಸುನೀಗಿದ್ದು, ಆಕೆಯ ಅಂತ್ಯ ಸಂಸ್ಕಾರಕ್ಕೆ ಮಂಗಳೂರಿನ ಪಚ್ಚನಾಡಿ, ಬೋಳೂರು, ನಂದಿಗುಡ್ಡೆ, ಬಳಿಕ ಮೂಡುಶೆಡ್ಡೆ ಸ್ಮಶಾನಗಳಲ್ಲಿ ಅವಕಾಶ ನಿರಾಕರಿಸಿ ಜನರು ಪ್ರತಿಭಟನೆ ನಡೆಸಿದ್ದರು. ಶಾಸಕ ಭರತ್ ಶೆಟ್ಟಿ ಕೂಡಾ ಇಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ನಿರಾಕರಿಸಿದ್ದರು. ನಂತರ ಬಂಟ್ವಾಳ ಬಿ.ಸಿ ರೋಡ್ ನ ಕೈಕುಂಜೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮಹಿಳೆಯ ಶವಸಂಸ್ಕಾರಕ್ಕಾಗಿ ನಡೆದ ಈ ಘಟನೆ ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ.ಶಾಸಕರೇ ಮುಂದೆ ನಿಂತು ಪ್ರತಿಭಟಿಸಿದ್ದು ಆಶ್ಚರ್ಯ ಆಗುತ್ತಿದೆ. ಶಾಸಕ ಸ್ಥಾನ ಶಾಶ್ವತವಲ್ಲ, ಮನುಷ್ಯತ್ವವಷ್ಟೇ ಮುಖ್ಯ. ಶಾಸಕರ ಮನುಷ್ಯತ್ವ ಇಲ್ಲದ ವರ್ತನೆಯನ್ನ ಖಂಡಿಸ್ತೇನೆ. ದ.ಕ ಜಿಲ್ಲಾಡಳಿತ ಕೋವಿಡ್ ಆಕ್ಷನ್ ಪ್ಲಾನ್ ನಲ್ಲಿ ಅಂತ್ಯ ಸಂಸ್ಕಾರದ ಬಗ್ಗೆಯೂ ಯೋಚಿಸಬೇಕು. ಜಿಲ್ಲಾಡಳಿತ ಈ ವಿಚಾರದಲ್ಲಿ ವಿಫಲವಾಗಿದೆ, ಇದು ರಾಜ್ಯದ ಬೇರೆ ಕಡೆ ಆಗಬಾರದು. ಆರೋಗ್ಯ ಸಚಿವರು, ಕಂದಾಯ ಸಚಿವರು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದರು.