ವಿದ್ಯಾರ್ಥಿನಿಯ ಮೈಮೇಲೆ ಕ್ರಿಕೆಟ್ ಬಾಲ್ ಎಸೆದಿದಕ್ಕೆ ವಿದ್ಯಾರ್ಧಿಯ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು: ನಗರದ ಪ್ರತಿಷ್ಠಿತ ರೇವಾ ಕಾಲೇಜಿನಲ್ಲಿ ನಡೆದಿದ್ದ ಗುಜರಾತ್ ಮೂಲದ ವಿದ್ಯಾರ್ಥಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಭರತೇಶ್ ಬಂಧಿತ ಆರೋಪಿಯಾಗಿದ್ದು, ಪ್ರಮುಖ ಆರೋಪಿಯಾಗಿರುವ ಅನಿಲ್ ಎಂಬಾತನಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.
ನಡೆದಿದ್ದೇನು?:ಏಪ್ರಿಲ್ 28ರ ರಾತ್ರಿ ಕಾಲೇಜು ಫೆಸ್ಟಿವಲ್ ಸಂದರ್ಭದಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಭಾಸ್ಕರ್ ಜೆಟ್ಟಿಯ ಸ್ನೇಹಿತ ಶರತ್ ಎಂಬಾತ ಕ್ರಿಕೆಟ್ ಬಾಲ್ ಎಸೆದಿದ್ದ. ಈ ವಿದ್ಯಾರ್ಥಿನಿ ಭರತೇಶ್ ಸ್ನೇಹಿತನ ಅತ್ತೆ ಮಗಳು. ಇದೇ ವಿಚಾರಕ್ಕೆ ಭರತೇಶ್ ಹಾಗು ಭಾಸ್ಕರ್ ಜೆಟ್ಟಿ ಸ್ನೇಹಿತರ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯು ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಗಲಾಟೆ ನಡೆದು ಭರತೇಶ್ ಗುಂಪಿನಲ್ಲಿದ್ದ ಅನಿಲ್ ಎಂಬಾತ ಭಾಸ್ಕರ್ ಜೆಟ್ಟಿಯ ಕೈ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದ. ಇದರಿಂದ ಭಾಸ್ಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಬಾಗಲೂರು ಠಾಣಾ ಪೊಲೀಸರು ಸದ್ಯ ಭರತೇಶ್ನನ್ನು ಬಂಧಿಸಿದ್ದು, ಅನಿಲ್ಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಘಟನೆ ನಂತರ ಆರೋಪಿಗಳಿಗಾಗಿ ಬಾಗಲೂರು ಠಾಣಾ ಪೊಲೀಸರು ಕಾಲೇಜು ಸಿಸಿಟಿವಿ ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ(22) ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೇ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದನು. ಘಟನೆ ನಡೆದ ತಕ್ಷಣವೇ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣದಲ್ಲಿ ಆರೋಪಿಗಳ ಗುರುತು ಪತ್ತೆಯಾಗಿರುವುದರಿಂದ ಓರ್ವನ ಬಂಧನವಾಗಿದೆ. ಉಳಿದ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ನಿನ್ನೆಯೇ ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದರು.
https://play.google.com/store/apps/details?id=com.speed.newskannada