ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಾಗೂ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ನಡುವೆ ವೈ ಮನಸ್ಸು ಇನ್ನೂ ಕಮ್ಮಿಯಾಗಿಲ್ಲ. ದಿನದಿಂದ ದಿನಕ್ಕೆ ಒಂದಲ್ಲ ಒಂದು ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಹೊಸಪೇಟೆಯಲ್ಲಿ ‘ಕ್ರಾಂತಿ’ ಸಾಂಗ್ ರಿಲೀಸ್ ವೇಳೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಮತ್ತಷ್ಟು ತಾರಕಕ್ಕೇರಿದೆ.
ಇಬ್ಬರ ಅಭಿಮಾನಿಗಳೂ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರು ಎರೆಚಿಕೊಳ್ಳುತ್ತಿದ್ದಾರೆ. ಎರಡು-ಮೂರು ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ದರ್ಶನ್ ಫ್ಯಾನ್ ಥಳಿಸಿದ್ದಾರೆಂದು ಅಪ್ಪು ಅಭಿಮಾನಿಯೊಬ್ಬರು ದೂರು ದಾಖಲಿಸಿದ್ದಾರೆ.
ಶನಿವಾರ (ಫೆಬ್ರವರಿ 25) ರಾತ್ರಿ ದರ್ಶನ್ ಫ್ಯಾನ್ ಪುನೀತ್ ಫ್ಯಾನ್ ಮೇಲೆ ಹಲ್ಲೆ ಮಾಡಿದ್ದಾಗಿ ದೂರು ದಾಖಲಿಸಲಾಗಿದೆ. ಮೈಸೂರಿನ ಉದ್ಯಮಿ ಹಾಗೂ ಅಪ್ಪು ಅಭಿಮಾನಿ ಆಗಿರುವಯಶವಂತ್ ಕುಮಾರ್ ಪತ್ನಿಯ ಬರ್ತ್ಡೇ ಆಚರಿಸಲು ಸೋಶಿಯಲ್ ರೆಸಾರ್ಟ್ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಡಿಜೆ ಆಪರೇಟರ್ಗೆ ಪುನೀತ್ ರಾಜ್ಕುಮಾರ್ ಸಾಂಗ್ ಅನ್ನು ಪ್ಲೇ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ವೇಳೆ ಅಪ್ಪು ಹಾಡು ಕೇಳಿದ್ದಕ್ಕೆ ಸ್ಥಳದಲ್ಲೇ ಇದ್ದ ದರ್ಶನ್ ಅಭಿಮಾನಿ ಏಕಾಏಕಿ ಹಲ್ಲೆ ಮಾಡಿದ್ದರು ಅಂತ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಅಖಾಡಕ್ಕಿಳಿದಿದ್ದಾರೆ. ಫೇಸ್ಬುಕ್ನಲ್ಲಿರುವ ತೂಗುದೀಪ ಡಿ ಟೀಮ್ ಫ್ಯಾನ್ ಪೇಜ್ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದೆ. ಹೊಸಪೇಟೆಯಲ್ಲಿ ‘ಕ್ರಾಂತಿ’ ಸಿನಿಮಾದ ಗೊಂಬೆ ಗೊಂಬೆ ಹಾಡು ಬಿಡುಗಡೆ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ ಪ್ರಕರಣವನ್ನು ಮತ್ತೆ ಎಳೆದು ತರಲಾಗಿದೆ. ಅಂದು ತಪ್ಪು ಎಂದು ಹೇಳದವರು ಇಂದು, ಪುನೀತ್ ರಾಜ್ ಕುಮಾರ್ ಅವರ ಹಾಡನ್ನು ಹಾಕಲಿಲ್ಲ. ಗಲಾಟೆ ಮಾಡಿದ್ರು. ಹಲ್ಲೆ ಮಾಡಿದ್ರು ಅಂತ ಕೇಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನೆ ಮಾಡಿದ್ದಾರೆ.
“ಹೊಸಪೇಟೆಯಲ್ಲಿ ‘ಕ್ರಾಂತಿ’ ಚಿತ್ರದ ಹಾಡು ಬಿಡುಗಡೆ ಮಾಡಲು ಅವಕಾಶ ಕೊಡದೆ, ಡಿ ಬಾಸ್ ಅವರ ಚಿತ್ರದ ಯಾವುದೇ ಹಾಡುಗಳನ್ನು ಹಾಕಬಾರದು ಎಂದು ಬೆದರಿಕೆ ಹಾಕಿ ಪುನೀತ್ ರಾಜ್ ಕುಮಾರ್ ಅವರ ಹಾಡುಗಳನ್ನು ಮಾತ್ರ ಹಾಕಿಸಿ ಕುಣಿದು ಕುಪ್ಪಳಿಸಿ, ಕ್ರಾಂತಿ ಚಿತ್ರದ ಗೊಂಬೆ ಗೊಂಬೆ ಹಾಡನ್ನು ಸಹ ಬಿಡುಗಡೆ ಮಾಡಲು ಬಿಡದಾಗ, ಅದನ್ನು ತಪ್ಪು ಎಂದು ಹೇಳದ ಕೆಲವು ಚೈಲ್ಡ್ ಚಪಾತಿಗಳು ಇಂದು ದರ್ಶನ್ ಅವರು ಇದ್ದ ಕಡೆ ಪುನೀತ್ ರಾಜ್ ಕುಮಾರ್ ಅವರ ಹಾಡನ್ನು ಹಾಕಲಿಲ್ಲ ಗಲಾಟೆ ಮಾಡಿದ್ರು, ಹಲ್ಲೆ ಮಾಡಿದ್ರು ಅಂತ ಕೇಳುವುದು ಎಷ್ಟರ ಮಟ್ಟಿಗೆ ಸರಿ. ಡಿ ಬಾಸ್ ಅವರು ಅಂದು ಅ ಜಾಗದಲ್ಲಿ ಬಹುಶ: ಇಲ್ಲದೆ ಇದ್ದಿದರೆ ಅ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರ ಹಾಡನ್ನು ಹಾಕಿ ಅಂತ ಹೇಳುತ್ತಿರಲಿಲ್ಲ. ಕೆಣಕುವ ಕಾರಣದಿಂದಲೇ ಹಾಡು ಹಾಕಿ ಅಂತ ಹೇಳಿ, ಹಾಕದೆ ಇದ್ದಿದ್ದಕ್ಕೆ ಕ್ಯಾತೆ ತೆಗೆದು ಗಲಾಟೆ ಶೃಷ್ಟಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಏನೇ ಇರಲಿ ಕಾರಣಗಳನ್ನು ಇಟ್ಟುಕೊಂಡು ಕಡ್ಡಿ ಅಲ್ಲಾಡಿಸುವ ಜನರ ಬಗ್ಗೆ ನಾವ್ಯಾಕೆ ಮಾತನಾಡಬೇಕು? ಮೂರ್ಖರ ಬಗ್ಗೆ ಮಾತನಾಡದೆ ಮೂಖರಂತಿರೋಣ.” ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಫೆಬ್ರವರಿ 25ರಂದು ನಡೆದ ಪ್ರಕರಣದ ಬಳಿಕ ಮೈಸೂರಿನ ಉದ್ಯಮಿ ಹಾಗೂ ಅಪ್ಪು ಅಭಿಮಾನಿ ಯಶವಂತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. “ಪುನೀತ್ ರಾಜ್ಕುಮಾರ್ ಹಾಗೂ ಅಣ್ಣಾವ್ರ ಹಾಡನ್ನು ಕೇಳಿದ್ದೇ ತಪ್ಪಾಯಿತಾ? ಅದಕ್ಕೆ ತಮ್ಮ ದರ್ಶನ್ ಅಭಿಮಾನಿ ಕೈ ಮಾಡಿದ್ದಾರೆ. ಕೆಟ್ಟಪದಗಳಿಂದ ನಿಂದಿಸಿದ್ದಾರೆಂದು” ಯಶವಂತ್ ಆರೋಪಿಸಿದ್ದರು. ಇಷ್ಟೇ ಅಲ್ಲದೆ ಈ ಜಗಳ ನಡೆಯುವ ವೇಳೆ ದರ್ಶನ್ ಕೂಡ ಅಲ್ಲಿಯೇ ಇದ್ದರು ಎಂದು ಆರೋಪ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada