ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬೆಳ್ಳಿಲೋಕೇಶ್ ಜೆಡಿಎಸ್ ಗೆ ರಾಜೀನಾಮೆ ನೀಡಿ, ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಬೆಳ್ಳಿಲೋಕೇಶ್ 8 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರು, ನಗರ ಜೆಡಿಎಸ್ ಅಭ್ಯರ್ಥಿ ವಿರುದ್ಧ ಬೇಸರಗೊಂಡು ಜೆಡಿಎಸ್ ತೊರೆಯುತ್ತಿರುವುದಾಗಿ ಘೋಷಿಸಿದ್ದ ಅವರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪ್ರಬಲ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಬೆಳ್ಳಿಲೋಕೇಶ್ಗಗೆ ಗಾಳ ಹಾಕಿದ್ದ ಬಿಜೆಪಿ ಪ್ರಯತ್ನ ಯಶಸ್ವಿ ಕಂಡಿದ್ದು, ಬೆಂಬಲಿಗರೊಂದಿಗೆ ತುಮಕೂರು ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಸಂಸದ ಜಿ.ಎಸ್.ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರವಿಹೆಬ್ಬಾಕ, ಶಾಸಕ ಜ್ಯೋತಿಗಣೇಶ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ತುಮಕೂರು ಜಿಲ್ಲೆ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಮಾತನಾಡಿ, ಸಂಘಟನಾತ್ಮಕ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಬೇರೆ ಪಕ್ಷಗಳ ಮುಖಂಡರು ಬಿಜೆಪಿ ಸೇರುವ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಗೆಲುವಿಗೆ ಕಾರಣವಾಗಲಿದ್ದು, ನಗರದಲ್ಲಿ ಆಗಿರುವ ಬದಲಾವಣೆಗೆ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅತ್ಯಧಿಕ ಮತಗಳಿಂದ ಜ್ಯೋತಿಗಣೇಶ್ ಗೆಲುವು ಸಾಧಿಸಲಿದ್ದಾರೆ ಎಂದರು.
ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿದ ಬೆಳ್ಳಿ ಲೋಕೇಶ್ ರಾಜಕಾರಣದಲ್ಲಿ ಪ್ರಜಾಪ್ರಭುತ್ವ ಕಾಪಾಡುತ್ತಿರುವ ಏಕೈಕ ಪಕ್ಷ ಬಿಜೆಪಿ ಮಾತ್ರ, ಮಾಜಿ ಶಾಸಕ ಸುರೇಶ್ ಗೌಡರು ನನಗೆ ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನಿಸಿದರು, ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದಕಾರಣಕ್ಕೆ ಶಾಸಕ ಜ್ಯೋತಿಗಣೇಶ್ ಮನೆಗೆ ಬಂದು ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದರು ಎಂದರು.
ರಾಜಕಾರಣದಲ್ಲಿ ವಿರೋಧಿಗಳಾದರೂ ಬಹುತೇಕರೊಂದಿಗೆ ಆತ್ಮೀಯತೆಯನ್ನು ಕಂಡುಕೊಂಡಿದ್ದೇನೆ, ಬಿಜೆಪಿಯಲ್ಲಿರುವ ಸ್ನೇಹಿತರು ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಒಡೆದ ಮನೆಯಾಗಿದೆ, ಬೇರೆ ಪಕ್ಷಗಳಿಂದ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ, ಬಿಜೆಪಿ 11 ಕ್ಷೇತ್ರಗಳಲ್ಲಿಯೂ ಗೆಲ್ಲುವ ವಾತಾವರಣವಿದೆ ಬಿಜೆಪಿಗೆ ದೊಡ್ಡ ಶಕ್ತಿ ಇದೆ ಎಂದು ಹೇಳಿದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪಕ್ಷಕ್ಕೆ ಸೇರ್ಪಡೆಯಾಗಿರುವವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇನೆ, ಸಕಾಲದಲ್ಲಿ ಪಕ್ಷ ಸೇರಿ ಶಕ್ತಿ ತುಂಬಿದ್ದೀರಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪಕ್ಷ ಕಟ್ಟಲು ಮುಂದಾಗೋಣ ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಆರ್.ದೇವರಾಜು, ಡಿಪೋ ನಾಗರಾಜು, ಕೇಸರಿ ಶ್ರೀನಿವಾಸ್, ಲೀಲಾವತಿ, ನಟರಾಜು, ಕುಬೇರ್ ಭೂಷಣ್, ಸದಾರಾಂ, ಅರುಣ್ ಗೌಡ, ಸೇರಿದಂತೆ ಇತರರು ಬಿಜೆಪಿ ಸೇರ್ಪಡೆಯಾದರು.
ಈ ವೇಳೆ ಟೂಡಾ ಮಾಜಿ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ,ನರಸಿಂಹಮೂರ್ತಿ, ಪಂಚೆ ರಾಮಚಂದ್ರಪ್ಪ, ಹನುಮಂತರಾಜು, ಸಂದೀಪ್ ಗೌಡ, ರುದ್ರೇಶ್, ಕೆಂಪರಾಜು, ಜಯಂತ್ ಗೌಡ, ಬಳ್ಳಗೆರೆ ವೆಂಕಟೇಶ್ ಸೇರಿದಂತೆ ಇತರರಿದ್ದರು.
https://play.google.com/store/apps/details?id=com.speed.newskannada