ಮುಂಬೈ, ಮಹಾರಾಷ್ಟ್ರ: 228 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿರುವ ಕಾಫಿ ಡೇ ಎಂಟರ್ಪ್ರೈಸಸ್ (Coffee Day Enterprises) ವಿರುದ್ಧ ಐಡಿಬಿಐ ಟ್ರಸ್ಟೀಶಿಪ್ (IDBI Trusteeship) ದಿವಾಳಿ ಪ್ರಕ್ರಿಯೆ ಆರಂಭಿಸುವ ಕುರಿತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ಬೆಂಗಳೂರು ಶಾಖೆಯಲ್ಲಿ ಅರ್ಜಿ ಸಲ್ಲಿಸಿದೆ.
ಈ ಮಾಹಿತಿಯನ್ನು ಶುಕ್ರವಾರ ಷೇರುಪೇಟೆಗೆ ತಿಳಿಸಲಾಗಿದೆ. ಕಾಫಿ ಡೇ ಎಂಟರ್ಪ್ರೈಸಸ್ ಕಾಫಿ ಡೇ ಗ್ರೂಪ್ನ (Coffee Day Group) ಮಾತೃ ಸಂಸ್ಥೆಯಾಗಿದೆ. ಕರ್ನಾಟಕದ ಮಾಜಿ ಸಿಎಂ ಎಸ್ ಎಂ ಕೃಷ್ಣ (Former CM S M Krishna) ಅವರು ಅಳಿಯ ಸಿದ್ಧಾರ್ಥ್ (V G Siddharth) ಅವರು ಈ ಕಾಫಿ ಡೇಯನ್ನು ಆರಂಭಿಸಿದ್ದರು.
ಈ ವಿಷಯದಲ್ಲಿ ಕಂಪನಿಯು ಸೂಕ್ತ ಕಾನೂನು ಸಲಹೆಯನ್ನು ಪಡೆಯುತ್ತಿದೆ ಮತ್ತು ತನ್ನ ಆಸಕ್ತಿಯನ್ನು ರಕ್ಷಿಸಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಾಫಿ ಡೇ ಎಂಟರ್ಪ್ರೈಸಸ್ ಷೇರು ಪೇಟೆಗೆ ನೀಡಲಾದ ಹೇಳಿಕೆಯಲ್ಲಿ ತಿಳಿಸಿದೆ.
ಐಡಿಬಿಐ ಟ್ರಸ್ಟಿಶಿಪ್, 2016ರ ಇನ್ಸೊಲ್ವೆನ್ಸಿ ಆಯಂಡ್ ಬ್ಯಾಂಕ್ರಪ್ಟ್ ಕೋಡ್ನ ಸೆಕ್ಷನ್ 7ರ ಅಡಿ ಅರ್ಜಿಯನ್ನು ಸಲ್ಲಿಸಿದೆ, ಇದು ಕಾರ್ಪೊರೇಟ್ ಸಾಲಗಾರನ ವಿರುದ್ಧ ದಿವಾಳಿತನವನ್ನು ಪ್ರಾರಂಭಿಸಲು ಸಾಲಗಾರನಿಗೆ ನೆರವು ಒದಗಿಸುತ್ತದೆ. ಈ ಮಧ್ಯೆ, ಇಂಡಸ್ಬ್ಯಾಂಕ್ ಕೂಡ ಕಾಫಿ ಡೇ ವಿರುದ್ಧ ದಿವಾಳಿತನ ಪ್ರಕ್ರಿಯೆ ಅರ್ಜಿ ಸಲ್ಲಿಸಿದೆ. ಕಂಪನಿಯು ಇಂಡಸ್ಬ್ಯಾಂಕ್ನಿಂದ 94 ಕೋಟಿ ರೂ. ಸಾಲವನ್ನು ಹಾಗೆಯೇ ಉಳಿಸಿಕೊಂಡಿದೆ. ಸುಸ್ತಿದಾರವಾಗಿದೆ.
ಇಂಡಸ್ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಎನ್ಸಿಎಲ್ಟಿ ಜುಲೈ 20ರಂದು ಸ್ವೀಕರಿಸಿತ್ತು. ಅಲ್ಲದೇ, ಕಂಪನಿಯ ವಿರುದ್ಧ ದಿವಾಳಿತನ ಪ್ರಕ್ರಿಯೆಗಳನ್ನು ಆರಂಭಿಸಲು ಆದೇಶಿಸಿತ್ತು. ಕಂಪನಿಯ ದಿನನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳಲು ಶೈಲೇಂದ್ರ ಅಜ್ಮೇರಾ ಅವರನ್ನು ಕಂಪನಿಯ ಮಧ್ಯಂತರ ರೆಸಲ್ಯೂಶನ್ ಅಧಿಕಾರಿಯಾ ನೇಮಿಸಲಾಯಿತು.
ಕಳೆದ ವಾರನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಅಥಾರಿಟಿ (NFRA) ಕಾಫಿ ಡೇ ಅಂಗಸಂಸ್ಥೆ ಟ್ಯಾಂಗ್ಲಿನ್ ಡೆವಲಪ್ಮೆಂಟ್ಸ್ ಲಿಮಿಟೆಡ್ (TDL)ನ ಲೆಕ್ಕಪರಿಶೋಧನೆಯಲ್ಲಿನ ಲೋಪಗಳಿಗಾಗಿ ಇಬ್ಬರು ಲೆಕ್ಕಪರಿಶೋಧಕರು ಸೇರಿದಂತೆ ಮೂರು ಘಟಕಗಳ ಮೇಲೆ ದಂಡವನ್ನು ವಿಧಿಸಿತು. ಸುಮಾರು 1 ಕೋಟಿ ರೂ. ದಂಡವನ್ನು ವಿಧಿಸಲಾಗಿತ್ತು.
The post Coffee Day: ಕಾಫಿ ಡೇ ವಿರುದ್ದ ದಿವಾಳಿ ಪ್ರಕ್ರಿಯೆ ಆರಂಭಿಸಲು ಅರ್ಜಿ ಸಲ್ಲಿಸಿದ ಐಡಿಬಿಐ ಟ್ರಸ್ಟಿಶಿಪ್!