ಬೆಂಗಳೂರು, ಸೆಪ್ಟೆಂಬರ್ 08; ಜಿ 20 ಶೃಂಗಸಭೆಗೆ ರಾಷ್ಟ್ರ ರಾಜಧಾನಿಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಸೆಪ್ಟೆಂಬರ್ 9ರ ಶನಿವಾರ ಮತ್ತು ಸೆಪ್ಟೆಂಬರ್ 10ರ ಭಾನುವಾರ ದೆಹಲಿಯ ‘ಭಾರತ್ ಮಂಟಪ’ದಲ್ಲಿ ಶೃಂಗಸಭೆ ನಡೆಯುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 9ರ ಶನಿವಾರ ಜಿ 20 ಶೃಂಗಸಭೆಯ ಅತಿಥಿಗಳಿಗೆ ಔತಣ ಕೂಟ ಆಯೋಜನೆ ಮಾಡಿದ್ದಾರೆ.
ಕೇಂದ್ರ ಸಚಿವ ಸಂಪುಟದ ಎಲ್ಲಾ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.
ವಿರೋಧ ಪಕ್ಷಗಳ ನಾಯಕರು, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್. ಡಿ. ದೇವೇಗೌಡರನ್ನು ಸಹ ಔತಣ ಕೂಟಕ್ಕೆ ರಾಷ್ಟ್ರಪತಿಗಳ ಕಛೇರಿಯಿಂದ ಆಹ್ವಾನಿಸಲಾಗಿದೆ. ಆದರೆ ಎಚ್. ಡಿ. ದೇವೇಗೌಡರು ಔತಣ ಕೂಟಕ್ಕೆ ಗೈರಾಗುತ್ತಿದ್ದಾರೆ.
ದೇವೇಗೌಡರ ಟ್ವೀಟ್ ಶುಕ್ರವಾರ ಬೆಳಗ್ಗೆ ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಟ್ವೀಟ್ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
‘ನಾನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 9ರಂದು ಆಯೋಜಿಸಿರುವ ಜಿ 20 ಔತಣಕೂಟದಲ್ಲಿ ಅನಾರೋಗ್ಯದ ಕಾರಣ ಪಾಲ್ಗೊಳ್ಳುತ್ತಿಲ್ಲ. ಈ ಕುರಿತು ನಾನು ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ. ಜಿ 20 ಶೃಂಗ ಸಭೆ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ’ ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.