ಭಾರತ ಟೆಸ್ಟ್ ತಂಡದ ಉಪನಾಯಕ ಕೆಎಲ್ ರಾಹುಲ್ ತಮ್ಮ ಕಳಪೆ ಪ್ರದರ್ಶನಕ್ಕಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಭಾರತ ತಂಡದ ಮಾಜಿ ಆಟಗಾರ, ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಕೆಎಲ್ ರಾಹುಲ್ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ 20 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಅಲ್ಲದೆ ಕಳೆದ ಕೆಲವು ತಿಂಗಳಿಂದ ರಾಹುಲ್ ಎಲ್ಲಾ ಮಾದರಿ ಕ್ರಿಕೆಟ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.
ಹಲವು ಬಾರಿ ಅವಕಾಶ ನೀಡಿದರೂ ಮತ್ತೆ ಮತ್ತೆ ವಿಫಲವಾಗುತ್ತಿರುವುದಕ್ಕೆ ಸಾಕಷ್ಟು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಟೆಸ್ಟ್ ಪಂದ್ಯದ ಆರಂಭಕ್ಕೆ ಮುನ್ನ ಕಪಿಲ್ ದೇವ್ ಕೂಡ ಕೆಎಲ್ ರಾಹುಲ್ ಬದಲಿಗೆ ಶುಭಮನ್ ಗಿಲ್ಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದರು.
ವೆಂಕಟೇಶ್ ಪ್ರಸಾದ್ ಕೂಡ ಕೆಎಲ್ ರಾಹುಲ್ಗೆ ಪದೇ ಪದೇ ಅವಕಾಶ ನೀಡುತ್ತಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು. ಕೆಎಲ್ ರಾಹುಲ್ಗೆ ಪ್ರತಿಭೆ ನೋಡಿ ಅವಕಾಶ ನೀಡುತ್ತಿಲ್ಲ, ಅವರ ಮೇಲೆ ವಿಶೇಷ ಒಲವಿನಿಂದ ಅವಕಾಶ ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವೆಂಕಟೇಶ್ ಪ್ರಸಾದ್ ಸರಣಿ ಟ್ವೀಟ್ಕೆಎಲ್ ರಾಹುಲ್ ಕುರಿತಂತೆ ವೆಂಕಟೇಶ್ ಪ್ರಸಾದ್ ಸರಣಿ ಟ್ವೀಟ್ ಮಾಡಿದ್ದಾರೆ. “ಕೆಎಲ್ ರಾಹುಲ್ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಗೌರವವಿದೆ. ಆದರೆ ಅದಕ್ಕೆ ತಕ್ಕಂತೆ ಅವರು ಪ್ರದರ್ಶನ ನೀಡುತ್ತಿಲ್ಲ. 46 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 34 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 8 ವರ್ಷಗಳಿಂದ ಆಡುತ್ತಿರುವ ಕೆಎಲ್ ರಾಹುಲ್ ತಮ್ಮ ಸಾಮರ್ಥ್ಯಕ್ಕೆ ರನ್ ಗಳಿಸಿಲ್ಲ.” ಎಂದು ಹೇಳಿದರು.
“ಅನೇಕ ಪ್ರತಿಭಾವಂತ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಸರ್ಫರಾಜ್ ಖಾನ್ ಕೂಡ ಪ್ರಥಮದರ್ಜೆ ಪಂದ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಕೆಎಲ್ ರಾಹುಲ್ಗಿಂತ ಇವರಿಬ್ಬರು ಅವಕಾಶಕ್ಕೆ ಅರ್ಹರಾಗಿದ್ದಾರೆ. ಕೆಲವಿಗೆ ಯಶಸ್ವಿಯಾಗುವವರೆಗೆ ಸತತವಾಗಿ ಅವಕಾಶಗಳನ್ನು ನೀಡಲಾಗುತ್ತದೆ. ಆದರೆ, ಕೆಲವರಿಗೆ ಅವಕಾಶವೇ ಸಿಗುತ್ತಿಲ್ಲ” ಎಂದು ಹೇಳಿದ್ದಾರೆ.
ಅಶ್ವಿನ್ ಅಥವಾ ಪೂಜಾರರನ್ನು ಉಪನಾಯಕ ಮಾಡಲಿ
ಕೆಎಲ್ ರಾಹುಲ್ ತಂಡದ ಉಪನಾಯಕರಾಗಿದ್ದಾರೆ. ಅಶ್ವಿನ್ ಉತ್ತಮವಾದ ಚಾಕಚಕ್ಯತೆ ಹೊಂದಿದ್ದಾರೆ. ಅವರು ಟೆಸ್ಟ್ ತಂಡದ ಉಪನಾಯಕನಾಗಬಹುದು. ಅವರು ಇಲ್ಲವಾದರೆ ಪೂಜಾರಾ ಅಥವಾ ರವೀಂದ್ರ ಜಡೇಜಾ ಕೂಡ ಉಪನಾಯಕನಾಗುವ ಅರ್ಹತೆ ಹೊಂದಿದ್ದಾರೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದರು.
ಮಯಾಂಕ್ ಅಗರ್ವಾಲ್ ಮತ್ತು ಹನುಮ ವಿಹಾರಿ ಕೆಎಲ್ ರಾಹುಲ್ಗಿಂತ ಉತ್ತಮ ಪ್ರತಿಭಾವಂತರು ಎಂದು ವೆಂಕಟೇಶ್ ಪ್ರಸಾದ್ ಹೇಳಿದರು.
ರಾಹುಲ್ಗೆ ವಿಶೇಷ ಒತ್ತು ನೀಡಲಾಗುತ್ತಿದೆ
ಕೆಎಲ್ ರಾಹುಲ್ ಅವರ ಆಯ್ಕೆ ಅವರ ಪ್ರದರ್ಶನವನ್ನು ಆಧರಿಸಿಲ್ಲ, ವಿಶೇಷ ಒಲವಿನ ಆಧಾರದಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ. 8 ವರ್ಷಗಳಿಂದ ಆಡುತ್ತಿರುವ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಪದೇ ಪದೇ ವಿಫಲವಾಗುತ್ತಿದ್ದಾರೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಐಪಿಎಲ್ ತಂಡದ ನಾಯಕರಾಗಿರುವುದರಿಂದ ಅವರಿಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ಹೆಸರನ್ನು ನೋಡಿ ಆಟಗಾರನಿಗೆ ಮಣೆ ಹಾಕಲಾಗುತ್ತಿದೆ ಎಂದು ಹೇಳಿದರು.
ನಾಗ್ಪುರ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ವಿಫಲವಾದರು ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ, ದೆಹಲಿ ಟೆಸ್ಟ್ನಲ್ಲಿ ಅವರು ರನ್ ಗಳಿಸುವಲ್ಲಿ ವಿಫಲವಾದರೆ ಕೆಎಲ್ ರಾಹುಲ್ ಭಾರತ ತಂಡದಲ್ಲಿ ಉಳಿಯುವುದು ಕಷ್ಟವಾಗಲಿದೆ. ಕಳೆದ 8 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಕೆಎಲ್ ರಾಹುಲ್ ಗಳಿಸಿರುವುದು ಕೇವಲ 137 ರನ್ ಮಾತ್ರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada