ಚಿತ್ರದುರ್ಗ, ಜನವರಿ, 26: ಅನಾಥ ವೃದ್ಧರು, ಮಕ್ಕಳು ಹಾಗೂ ನಿರ್ಗತಿರನ್ನು ಕೈ ಹಿಡಿದು ನಡೆಸುವ ವೃದ್ಧಾಶ್ರಮಗಳನ್ನು ಎಂದಿಗೂ ಮರೆಯಬಾರದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಚಿತ್ರದುರ್ಗದಲ್ಲಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಭೀಮನಬಂಡೆ ಬಳಿ ಇರುವ ಶುಭೋದಯ ವೃದ್ಧಾಶ್ರಮದಲ್ಲಿ ದಿವಂಗತ ಎನ್ ಎಲ್.
ಚಂದ್ರಯ್ಯ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಿದ್ದ ಶ್ರೀ ಅನ್ನಪೂರ್ಣೇಶ್ವರಿ ರೋಟರಿ ಭೋಜನ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ತಂದೆ -ತಾಯಿಗೆ ಗೌರವ ಕೊಡಬೇಕು. ಈ ಆಶ್ರಮದಲ್ಲಿರುವವರನ್ನು ನಾವ್ಯಾರೂ ವೃದ್ಧರು ಎಂದು ಕರೆಯಬಾರದು. ಅವರು ನಮ್ಮ ತಂದೆ -ತಾಯಿಯ ಸಮಾನರು. ಸುಮಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ವೃದ್ಧಾಶ್ರಮಕ್ಕೆ ಹಾಗೂ ಇಲ್ಲಿನ ರೋಟರಿ ಸಂಸ್ಥೆಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಲು ಸದಾ ಕೈ ಜೋಡಿಸಲಾಗುತ್ತದೆ ಎಂದು ತಿಳಿಸಿದರು.
ಪೂರ್ಣಿಮಾನನ್ನು ಗೆಲ್ಲಿಸಿ
ವಿಧಾನಸಭಾ ಚುನಾವಣೆಗೆ ಸುಮಾರು 90 ದಿನಗಳು ಮಾತ್ರ ಬಾಕಿ ಇದೆ. ಹಾಗಾಗಿ ಈ ಚುನಾವಣೆ ಕ್ಷೇತ್ರದ ಅಭಿವೃದ್ಧಿಗೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ ಎಂದು ಸಚಿವರು ಮನವಿ ಮಾಡಿದರು. ವಿಧಾನಸಭಾ ಚುನಾವಣೆ ಎಂಬ ಪರೀಕ್ಷೆಗೆ 90 ದಿನ ಇದೆ. ಮತದಾರರಾದ ನೀವುಗಳು ನಮಗೆ ಹೆಚ್ಚು ಅಂಕಗಳನ್ನು ಕೊಡುವ ಮೂಲಕ ಚುನಾವಣೆ ಎಂಬ ಪರೀಕ್ಷೆಯಲ್ಲಿ ಪಾಸು ಮಾಡಬೇಕು. ಪೂರ್ಣಿಮಾ ಅವರು ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ತಂದೆಯ ಕಾಲದಿಂದಲೂ ಅವರ ಕುಟುಂಬದ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ. ನಾನು ಸಚಿವರಾದ ಮೇಲೆ ನನ್ನ ಇಲಾಖೆಯಿಂದ ಹಿರಿಯೂರಿಗೆ ಒಳಚರಂಡಿಗೆ 208 ಕೋಟಿ ಅನುದಾನ ನೀಡಲಾಗಿದೆ. ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಅತಿ ಶೀಘ್ರದಲ್ಲೇ ಕೆಲಸ ಪ್ರಾರಂಭ ಮಾಡಲಾಗುತ್ತದೆ ಎಂದರು.
ಬಚ್ಚಿಟ್ಟ ಹಣ ವ್ಯರ್ಥವಾಗುತ್ತದೆ
ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಮನುಷ್ಯ ಹುಟ್ಟು ಮತ್ತು ಸಾವಿನ ಮಧ್ಯೆ ಹೇಗೆ ಬದುಕು ನಿರ್ವಹಿಸಬೇಕು ಎಂಬುದು ಭಗವಂತ ನಿರ್ಧರಿಸುತ್ತಾನೆ. ಬಚ್ಚಿಟ್ಟ ಹಣ ವ್ಯರ್ಥವಾಗುತ್ತದೆ. ಹಾಗಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕು ಎಂಬುದು ಭಗವಂತನ ಆಶಯವಾಗಿದೆ. ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಒಬ್ಬ ತಾಯಿ ಮಕ್ಕಳನ್ನು ಒಂದೇ ರೀತಿಯಲ್ಲಿ ಪಾಲನೆ ಮಾಡುತ್ತಾಳೆ. ನಾವು ನಡೆದಂತೆ ಮಕ್ಕಳು ನಡೆಯುತ್ತಾರೆ. ನಾವು ಮಕ್ಕಳಲ್ಲಿ ಸಂಸ್ಕಾರ ಬೆಳಸಬೇಕು. ಹಾಗೆಯೇ ಹಿರಿಯೂರು ನಗರಕ್ಕೆ 28 ಕೋಟಿ ರೂಪಾಯಿ ಯುಜಿಡಿ ಕಾಮಗಾರಿಗೆ ಅನುದಾನ ಸಿಕ್ಕಿದೆ. ಕೇಂದ್ರ ಸರ್ಕಾರದ ಅಮೃತ ಯೋಜನೆ ಅಡಿಯಲ್ಲಿ ಮನೆ ಮನೆಗೆ ನೀರು ವಿತರಿಸಲು ಸರ್ಕಾರ 38 ಕೋಟಿ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕುಂತಲಾ ಚಂದ್ರಯ್ಯ, ಎಂಎಸ್ ರಾಘವೇಂದ್ರ, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಎ. ರಾಘವೇಂದ್ರ, ಚಂದ್ರಕೀರ್ತಿ ಗುಜ್ಜಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada