ಬೆಂಗಳೂರು: ಯುಗಾದಿ ಹಬ್ಬದಂದೇ ಮೊದಲ ಪಟ್ಟಿ ಬಿಡುಗಡೆ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಕೆಪಿಸಿಸಿ ಅಧ್ಯಕ್ಷರು ನಿರಾಸೆ ಮೂಡಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, “ಇವತ್ತು ಮೊದಲ ಪಟ್ಟಿ ಬಿಡುಗಡೆ ಮಾಡಬೇಕಿತ್ತು.
ಅದ್ರೆ ಇನ್ನೂ ಎರಡು ಮೂರು ದಿನಗಳಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತವೆ. ಮಲ್ಲಿಕಾರ್ಜುನ ಖರ್ಗೆ ಅವರು ಹಬ್ಬಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಎರಡು ಮೂರು ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇವೆ” ಎಂದರು.
“ಕಳೆದ ಮೂರು ವರ್ಷಗಳಿಂದ ಜನ ಸಾಕಷ್ಟು ಸಂಕಷ್ಟ ಅನುಭವಿಸ್ತಾ ಇದ್ದಾರೆ. ಈ ಯುಗಾದಿ ಸಂದರ್ಭದಲ್ಲಿ ಈ ಕೆಟ್ಟ ಆಡಳಿತ ತೊಲಗಲಿ. ಈ ರೀತಿ ನೀವೂ ಹಾರೈಸಿ. ಕಾಂಗ್ರೆಸ್ ಸರ್ಕಾರ ಜನಪರವಾಗಿದೆ. ಹಲವಾರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೀವಿ. ಬಿಜೆಪಿಯವರ ತರಹ ನಾವು ಸುಳ್ಳು ಆಶ್ವಾಸನೆ ಕೊಡಲ್ಲ. ಪ್ರತಿಯೊಬ್ಬರ ಅಕೌಂಟ್ಗೆ ಹದಿನೈದು ಲಕ್ಷ ಕೊಡ್ತೀವಿ ಅಂದ್ರು. ಉದ್ಯೋಗ ಸೃಷ್ಟಿ ಭರವಸೆ ನೀಡಿದ್ರು. ಏನಾದ್ರೂ ಮಾಡಿದ್ರಾ.? ಆದ್ರೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಲು ಏನು ಮಾಡಬೇಕು ಎಂಬ ಬಗ್ಗೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಭರವಸೆಗಳನ್ನು ನಾವು ಈಡೇರಿಸಿಯೇ ತೀರುತ್ತೇವೆ” ಎಂದು ಹೇಳಿದರು.
‘ಪಟ್ಟಿ ಸಿದ್ಧವಾಗಿದೆ’: ರಾಜ್ಯ ಕಾಂಗ್ರೆಸ್ ನಾಯಕರು ಸರಿಸುಮಾರು 90 ರಿಂದ 120 ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಹಾಗೂ ಹಾಲಿ ಶಾಸಕರನ್ನು ಒಳಗೊಂಡ ಒಬ್ಬರ ಹೆಸರು ಸೂಚಿತವಾದ, ವಿವಾದಕ್ಕೆ ಒಳಗಾಗದು ಎಂಬಂತಹ ಕ್ಷೇತ್ರಗಳ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್ಗೆ ಕಳುಹಿಸಿದ್ದಾರೆ. ವಾರದ ಹಿಂದೆ ದಿಲ್ಲಿಗೆ ತೆರಳಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಅಲ್ಲಿ ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದು, ನಂತರ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಿ ಮೊದಲ ಪಟ್ಟಿ ಅಂತಿಮಗೊಳಿಸುವಂತೆ ಮನವಿ ಮಾಡಿದ್ದಾರೆ.
ಆಕಾಂಕ್ಷಿಗಳ ನಿರೀಕ್ಷೆ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯ ಹೊಂದಿ ನಾಲ್ಕಾರು ತಿಂಗಳ ಹಿಂದೆಯೇ ಪಕ್ಷಕ್ಕೆ ಅರ್ಜಿ ಸಲ್ಲಿಸಿ, ಪ್ರಚಾರದ ಸಿದ್ಧತೆಯಲ್ಲಿರುವ ಹಲವು ಆಕಾಂಕ್ಷಿಗಳಿಗೆ ಇಂದು ಸಾಕಷ್ಟು ಕಾತುರದ ದಿನವಾಗಿತ್ತು. ಹಾಲಿ ಶಾಸಕರಿಗೆ ಮತ್ತೆ ಗೆದ್ದು ವಿಧಾನಸಭೆ ಪ್ರವೇಶಿಸುವ ತವಕ ಇದ್ದರೆ, ಕೆಲ ಮಾಜಿ ಶಾಸಕರು, ಸಚಿವರಿಗೆ ಕೆಲ ವರ್ಷಗಳ ಬಳಿಕ ಮತ್ತೆ ವಿಧಾನಸೌಧದ ಮೆಟ್ಟಿಲೇರುವ ಯೋಗ ಕೂಡಿಬರಲಿದೆ ಎಂಬ ನಿರೀಕ್ಷೆ ಮೂಡಿತ್ತು.ಇನ್ನು ಹೊಸಬರು ಕೆಲವರು ಕೆಲವರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಎಲ್ಲಾ ಆಕಾಂಕ್ಷಿಗಳ ಆಸೆ ಈಡೇರುವುದು ಅಸಾಧ್ಯ ಅನ್ನುವುದು ಎಲ್ಲರಿಗೂ ಗೊತ್ತು. ಆದರೆ ಯಾರಿಗೆ ಪಕ್ಷದ ಹೈಕಮಾಂಡ್ ಸಿಹಿ ನೀಡಲಿದೆ, ಯಾರಿಗೆ ಕಹಿ ನೀಡಲಿದೆ ಎನ್ನುವುದು ಯುಗಾದಿ ಹಬ್ಬದ ದಿನವಾದ ಇಂದು ನಿರ್ಧಾರವಾಗಬೇಕಿತ್ತು. ಆದರೆ ಇದೀಗ ಈ ನಿರೀಕ್ಷೆ ಇನ್ನೆರಡು ದಿನ ಮುಂದೆ ಹೋಗಿದೆ. ಸಂಕ್ರಾಂತಿಗೆ ಬರಬೇಕಿದ್ದ ಕಾಂಗ್ರೆಸ್ ಮೊದಲ ಪಟ್ಟಿ ಯುಗಾದಿಗೂ ಇಲ್ಲ ಅನ್ನುವಂತಾಗಿದೆ.
https://play.google.com/store/apps/details?id=com.speed.newskannada