ವಿಜಯನಗರ, ಜನವರಿ 30: ಹಂಪಿ ಉತ್ಸವದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮದ ವೇಳೆ ಬಹುಭಾಷಾ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆದ ಇಬ್ಬರು ಕಿಡಿಗೇಡಿಗಳನ್ನು ವಿಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಂಪಿ ಉತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಭಾನುವಾರ ತಡರಾತ್ರಿ ಗಾಯಕ ವಿಜಯ್ ಪ್ರಕಾಶ್ ಹಾಗೂ ಬಹುಭಾಷಾ ಗಾಯಕ ಕೈಲಾಶ್ ಖೇರ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾತ್ರಿ 1:30ರ ಗಂಟೆ ಸುಮಾರಿಗೆ ಗಾಯಕ ಕೈಲಾಶ್ ಖೇರ್ ಅವರು ಹಂಪಿ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ವೇಳೆ ಅವರ ಮೇಲೆ ಪ್ರೇಕ್ಷಕರ ಗ್ಯಾಲರಿಯಿಂದ ಯಾರೋ ನೀರು ತುಂಬಿದ ಬಾಟಲಿಯನ್ನು ವೇದಿಕೆಗೆ ಎಸೆದಿದ್ದಾರೆ.
ಕನ್ನಡ ಹಾಡು ಹಾಡಿಲ್ಲ ಎನ್ನುವ ಕಾರಣಕ್ಕೆ ಕಿಡಿಗೇಡಿಗಳು ಗಾಯಕ ಕೈಲಾಶ್ ಖೇರ್ ಮೇಲೆ ನೀರಿನ ಬಾಟಲಿ ಎಸೆದಿದ್ದಾರೆ ಎನ್ನಲಾಗಿದೆ. ಬಾಟಲಿ, ಕೈಲಾಶ್ ಖೇರ್ ಅವರಿಂದ ಸ್ವಲ್ಪ ದೂರದಲ್ಲೇ ಬಿದ್ದಿದೆ. ಈ ಘಟನೆ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನೂರಾರು ಜನರ ನಡುವೆ ಘಟನೆಗೆ ಕಾರಣರಾದ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಕಿಡಿಗೇಡಿಗಳು ಪೊಲೀಸರ ವಶದಲ್ಲಿದ್ದು, ಯಾಕಾಗಿ ಈ ಕೃತ್ಯ ಎಸೆಗಿದ್ದಾರೆ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಈವರೆಗೂ ಲಭ್ಯವಾಗಿಲ್ಲ.
ಬೃಹತ್ ವೇದಿಕೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಿಡಿಗೇಡಿಗಳು ತಮ್ಮೆಡೆಗೆ ಬಾಟಲಿ ಎಸೆದರೂ ಸಹ ಗಾಯಕ ಕೈಲಾಶ್ ಖೇರ್ ತಮ್ಮ ಗಾಯನ ಮುಂದುವರೆಸಿದ್ದರು. ತಡರಾತ್ರಿ 2:30ರ ವರೆಗೆ ಕೈಲಾಶ್ ಖೇರ್ ಹಾಗೂ ತಂಡ ಹಂಪಿ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕೈಲಾಶ್ ಖೇರ್ ಅವರ ಹಾಡಿನ ಮೋಡಿಗೆ ವಿಜಯನಗರ ಜಿಲ್ಲೆಯ ಜನರು ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದಾರೆ.
ಅದ್ಧೂರಿಯಾಗಿ ಸಂಪನ್ನಗೊಂಡ ಹಂಪಿ ಉತ್ಸವ-2023
ಇನ್ನು ವಿಜಯನಗರ ಜಿಲ್ಲೆ ಘೋಷಣೆಯಾದ ನಂತರ ಮೊದಲ ಬಾರಿಗೆ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಕಳೆದ ಮೂರು ದಿನಗಳಿಂದ ಆಯೋಜಿಸಲಾಗಿದ್ದ ಹಂಪಿ ಉತ್ಸವ-2023ಕ್ಕೆ ಭಾನುವಾರ ತೆರೆಬಿದ್ದಿದೆ. ವಿಜಯನಗರದ ಗತವೈಭವನ್ನು ಮರಕಳಿಸುವ ನಿಟ್ಟಿನಲ್ಲಿ ಹಂಪಿ ಉತ್ಸವ ಅದ್ಧೂರಿಯಾಗಿ, ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯಶಸ್ವಿಗೊಳಿಸಲಾಯಿತು.
ಜನವರಿ 27 ರಿಂದ 29 ರವರೆಗೆ ಮೂರು ದಿನಗಳಿಂದ ಹಂಪಿ ಉತ್ಸವದ ಮುಖ್ಯ ವೇದಿಕೆಯಾದ ಗಾಯತ್ರಿ ಪೀಠ ವೇದಿಕೆ, ಎದುರು ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ ಹಾಗೂ ಸಾಸಿವೆಕಾಳು ಗಣಪ ವೇದಿಕೆ ಸೇರಿದಂತೆ ಒಟ್ಟು ನಾಲ್ಕು ವೇದಿಕೆಗಳಲ್ಲಿ ಏಕಕಾಲಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡಿದೆ.
ಹಂಪಿ ಉತ್ಸವದಲ್ಲಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ವಿದೇಶಿ ಪ್ರವಾಸಿಗರೂ ಸಂಭ್ರಮಿಸಿದ್ದಾರೆ. ವಿಜಯನಗರ ವಸಂತ ವೈಭವ, ಸಾಹಸ ಕ್ರೀಡಗಳು, ಜಲ ಕ್ರೀಡೆಗಳು, ವಿಜಯ ನಗರ ಸಾಮ್ರಾಜ್ಯದ ಕುರಿತು ಧ್ವನಿ ಮತ್ತು ಬೆಳಕು ಪ್ರದರ್ಶನ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿ ಜೊತೆಗೆ ಸಾಂಸ್ಕಂತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನೂ ಆಸ್ವಾದಿಸಿದರು.
ಉತ್ಸವದ ಕೊನೆಯ ದಿನ ಗಾಯಕ ವಿಜಯ್ ಪ್ರಕಾಶ್ ಮತ್ತು ಬಾಲಿವುಡ್ ಗಾಯಕ ಕೈಲಾಶ್ ಖೇರ್ ಮತ್ತು ತಂಡ ಕನ್ನಡ, ಹಿಂದಿ, ಚಿತ್ರಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
https://play.google.com/store/apps/details?id=com.speed.newskannada