ಅತ್ತ ಟಿಕೆಟ್ ಫೈನಲ್ ಮಾಡಲು ಕಸರತ್ತು ನಡೆಯುತ್ತಿದೆ. ಇತ್ತ ದಕ್ಷಿಣ ಉತ್ತರ ಧ್ರುವದಲ್ಲಿ ಮತ್ತೊಂದು ಯಾತ್ರೆಗೆ ಕೈಪಡೆಗೆ ಸಿದ್ಧತೆ ನಡೆಸ್ತಿದೆ. ಇಂದಿನಿಂದ ಸಿದ್ದು-ಡಿಕೆಶಿ ಪ್ರತ್ಯೇಕ ಪ್ರಜಾಧ್ವನಿ ಯಾತ್ರೆಯಲ್ಲಿ ಕಹಳೆ ಮೊಳಗಿಸಲಿದ್ದಾರೆ. ಉತ್ತರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಯಾತ್ರೆ ಕೈಗೊಂಡ್ರೆ,, ದಕ್ಷಿಣದಿಂದ ಕೆಪಿಸಿಸಿ ಸಾರಥಿ ಡಿ.ಕೆ.ಶಿವಕುಮಾರ್ ದಂಡಯಾತ್ರೆಗೆ ಹೊರಡಲಿದ್ದಾರೆ.
ಈ ಬಾರಿ ಗದ್ದುಗೆ ಹಿಡಿಯಲೇಬೇಕು ಅಂತ ಕಾಂಗ್ರೆಸ್ ಶಪಥ ತೊಟ್ಟಿದೆ. ಕಳೆದ ಒಂದು ವರ್ಷಗಳಿಂದ ಸಾಲು ಸಾಲು ಯಾತ್ರೆಗೆ ಪುರಾತನ ಪಾರ್ಟಿ ಚಾಲನೆ ಕೊಟ್ಟಿತ್ತು. ಪ್ರಜಾಧ್ವನಿ ಪಾರ್ಟ್-1 ಬಳಿಕ ಪಾರ್ಟ್-2 ಯಾತ್ರೆ ಹೊರಡು ಸಜ್ಜಾಗಿದೆ. ಪ್ರತ್ಯೇಕ ಬಸ್ ಯಾತ್ರೆ ಮೂಲಕ ಕಾಂಗ್ರೆಸ್ನ ಜೋಡೆತ್ತುಗಳು ಬಲ ಪ್ರದರ್ಶನಕ್ಕೆ ಸಿದ್ಧತೆ ನಡೆಸಿವೆ. ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ಬಸ್ ರೂಟ್ ಚೇಂಜ್ ಮಾಡ್ತಿದ್ದಾರೆ.
ಬಸವಕಲ್ಯಾಣದಿಂದ ಯಾತ್ರೆ ಆರಂಭಿಸಲಿರುವ ಸಿದ್ದು!
ಪ್ರಜಾಧ್ವನಿ ಯಾತ್ರೆ ಜನವರಿ 11ರಿಂದ ಬೆಳಗಾವಿಯಿಂದ ಹೊರಟ ಕೈಪಡೆ 20 ಜಿಲ್ಲೆಗಳಲ್ಲಿ ಸಂಚರಿಸಿ ಕಳೆದ ವಾರ ಯಾತ್ರೆಗೆ ಅಂತ್ಯ ಹಾಡಿದೆ. ಈ ಬೆನ್ನಲ್ಲೆ ಪ್ರಜಾಧ್ವನಿ ಯಾತ್ರೆ 2.Oಗೆ ಮತ್ತೆ ರಣಕಹಳೆ ಮೊಳಗಿಸ್ತಿದೆ. ಮೊದಲ ಭಾಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿಯಾಗಿ ಅಬ್ಬರಿಸಿದ್ರೆ, ಈಗ ಒಂಟಿಯಾಗಿ ಮತಬೇಟೆ ಆಡಲಿದ್ದಾರೆ.
ಇವತ್ತು ಬಸವಣ್ಣ ಕರ್ಮಭೂಮಿ ಬಸವ ಕಲ್ಯಾಣದಿಂದ ಯಾತ್ರೆ ಆರಂಭಿಸುವ ಸಿದ್ದರಾಮಯ್ಯ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ 112 ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲಿದ್ದಾರೆ. ಇತ್ತ ಕೆಪಿಸಿಸಿ ಸಾರಥಿ ಡಿ.ಕೆ.ಶಿವಕುಮಾರ್ ಹಳೇ ಮೈಸೂರು, ಮಧ್ಯ ಕರ್ನಾಟಕ ಜತೆಗೆ ಕರಾವಳಿ ಭಾಗದ 112 ಕ್ಷೇತ್ರಗಳಲ್ಲಿ ಯಾತ್ರೆ ಮಾಡಲಿದ್ದಾರೆ. ಸಿದ್ದು ಯಾತ್ರೆ ಸಮನ್ವಯ ಸಮಿತಿಗೆ ಮಾಜಿ ಸಚಿವ ರಾಯರೆಡ್ಡಿ ಅಧ್ಯಕ್ಷರಾಗಿದ್ರೆ, ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಸಂಚಾಲಕರಾಗಿದ್ದಾರೆ.
ಕಾಂಗ್ರೆಸ್ ನಾಯಕರಿಂದ ಮತ್ತೊಂದು ಸುತ್ತಿನ ಬಸ್ ಯಾತ್ರೆ
ಇಂದಿನಿಂದ ಕಾಂಗ್ರೆಸ್ ನಾಯಕರಿಂದ ಮತ್ತೊಂದು ಸುತ್ತಿನ ಬಸ್ ಯಾತ್ರೆ ಆರಂಭ ಆಗ್ತಿದೆ. ಬಸವಕಲ್ಯಾಣ ಕ್ಷೇತ್ರದ ಅನುಭವ ಮಂಟಪದಿಂದ ಸಿದ್ದರಾಮಯ್ಯ ಬಸ್ ಯಾತ್ರೆ ಹೊರಟ್ರೆ, ಇತ್ತ ಕೋಲಾರದ ಮುಳಬಾಗಿಲು ಕ್ಷೇತ್ರದಲ್ಲಿರುವ ಕುರುಡುಮಲೆ ದೇವಸ್ಥಾನದಿಂದ ಶಿವಕುಮಾರ್ ಸಂಚಾರ ಶುರುವಾಗಲಿದೆ. ಮೊದಲಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಬಸ್ ಯಾತ್ರೆ ಮುಗಿಸಲಿರುವ ಸಿದ್ದರಾಮಯ್ಯ ನಂತರ ದಕ್ಷಿಣ ಕರ್ನಾಟಕದಲ್ಲೂ ಬಸ್ ಯಾತ್ರೆ ಆರಂಭಿಸಲಿದ್ದಾರೆ. ಇನ್ನು, ದಕ್ಷಿಣ ಕರ್ನಾಟಕದಲ್ಲಿ ಬಸ್ ಯಾತ್ರೆ ಮುಗಿಸಿ ಡಿಕೆಶಿ, ನಂತರ ಉತ್ತರ ಕರ್ನಾಟಕದತ್ತ ತಮ್ಮ ಬಸ್ ರೂಟ್ ಚೇಂಜ್ ಮಾಡಲಿದ್ದಾರೆ. ಒಟ್ಟು 6 ದಿನಗಳಲ್ಲಿ 12 ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲಿದ್ದು, ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಆದ್ರೆ, ಸಿದ್ದರಾಮಯ್ಯ 11 ದಿನಗಳ ಕಾಲ ಬಸ್ ಯಾತ್ರೆ ನಡೆಸಿ 21 ಕ್ಷೇತ್ರಗಳನ್ನ ಸಂಪರ್ಕ ಮಾಡಲಿದ್ದಾರೆ.
ಪ್ರಜಾಧ್ವನಿ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಹೊಡೆದಾಟ
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಬಸವಕಲ್ಯಾಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಿತ್ತಾಟ ನಡೆದಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆಯಲ್ಲಿ ಎಐಸಿಸಿ ಸದಸ್ಯ ಆನಂದ ದೇವಪ್ಪಾ ಮೇಲೆ ಹಲ್ಲೆ ಆಗಿದೆ. ಚಿಕಿತ್ಸೆಗಾಗಿ ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿ ವಿಜಯಸಿಂಗ್ ಬೆಂಬಲಿಗರಿಂದ ಈ ಹಲ್ಲೆ ಆಗಿದೆ ಅಂತ ಹೇಳಲಾಗ್ತಿದೆ.
ಸಿದ್ದರಾಮಯ್ಯ ಯಾತ್ರೆಗೂ ಮುನ್ನವೇ ಘಟನೆ ನಡೆದಿರೋದು ಮುಜುಗರ ತರಿಸಿದೆ. ಇತ್ತ, ಪ್ರತ್ಯೇಕ ಬಸ್ ಯಾತ್ರೆ ಮೂಲಕ ಸಿದ್ದು-ಡಿಕೆಶಿ ಬಲ ಪ್ರದರ್ಶನಕ್ಕೆ ಮುಂದಾದಂತೆ ಕಾಣಿಸ್ತಿದೆ. ಕೆಲವೇ ದಿನಗಳಲ್ಲಿ ಮೊದಲ ಪಟ್ಟಿಯ ಟಿಕೆಟ್ ಘೋಷಣೆ ಸಾಧ್ಯತೆಯಿದ್ದು, ತಮ್ಮ ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಸಿದ್ದು-ಡಿಕೆಶಿ ಪಣ ತೊಟ್ಟಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada