ಅಗರ್ತಲ, ಮಾರ್ಚ್ 02: ಫೆಬ್ರವರಿ 16 ರಂದು ನಡೆದ ತ್ರಿಪುರಾ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗ ಗುರುವಾರ ಪ್ರಕಟಿಸಲಿದ್ದು, ಇಂದು ಮತ ಏಣಿಕೆ ನಡೆಯಲಿದೆ. ಈ ಹಿನ್ನೆಲೆ ತ್ರಿಪುರಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತ್ರಿಪುರಾ ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರು ನೋಡಿಕೊಳ್ಳುತ್ತಿದ್ದು ಧ್ವಜ ಮೆರವಣಿಗೆ ಮತ್ತು ಪ್ರದೇಶದ ಪ್ರಾಬಲ್ಯ ಗಸ್ತು ನಡೆಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಫಲಿತಾಂಶ ಪ್ರಕಟವಾದ ನಂತರ ಯಾವುದೇ ಹಿಂಸಾಚಾರದ ಘಟನೆಗಳನ್ನು ತಡೆಯಲು ತ್ರಿಪುರಾದ ಎಲ್ಲಾ 60 ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ನೂರಾರು ಶಾಂತಿ ಸಭೆಗಳನ್ನು ನಡೆಸಿದ್ದಾರೆ.
ತ್ರಿಪುರಾ ಮುಖ್ಯ ಕಾರ್ಯದರ್ಶಿ ಜೆಕೆ ಸಿನ್ಹಾ, ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ರಂಜನ್, ತ್ರಿಪುರಾ ಮುಖ್ಯ ಚುನಾವಣಾಧಿಕಾರಿ ಗಿಟ್ಟೆ ಕಿರಣ್ಕುಮಾರ್ ದಿನಕರರಾವ್ ಅವರು ಎಂಟು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಫೆಬ್ರವರಿ 16 ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಅಧಿಕಾರಿಗಳು ಒತ್ತು ನೀಡಿದ್ದಾರೆ.
ಮುಖ್ಯ ಚುನಾವಣಾಧಿಕಾರಿಗಳು, ಎಲ್ಲಾ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಲ್ಲಾ 23 ಉಪವಿಭಾಗಗಳ ಉಪವಿಭಾಗಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಎಲ್ಲಾ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳ ಮುಖಂಡರು, ಪ್ರಭಾವಿ ವ್ಯಕ್ತಿಗಳು ಮತ್ತು ಹಿರಿಯ ನಾಗರಿಕರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿ, ಮನವಿ ಮಾಡಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಧಿಕಾರಿಗಳು ತ್ರಿಪುರಾದ 856 ಕಿಮೀ ಉದ್ದದ ಭಾರತ – ಬಾಂಗ್ಲಾದೇಶ ಗಡಿ ಮತ್ತು ಅಸ್ಸಾಂ ಮತ್ತು ಮಿಜೋರಾಂನ ಅಂತಾರಾಜ್ಯ ಗಡಿಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವುಗಳ ಜೊತೆಗೆ ಇತರ ಭದ್ರತಾ ಕ್ರಮಗಳಲ್ಲಿ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಮೊಬೈಲ್ ಗಸ್ತು ತಿರುಗುವುದು, ವಾಹನಗಳ ತಪಾಸಣೆ, ಹೋಟೆಲ್ಗಳು ಮತ್ತು ಸಿಸಿಟಿವಿ ಮಾನಿಟರಿಂಗ್ ಮಾಡಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada