ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕನ್ನಡತಿ’ ಕೂಡ ಒಂದು. ‘ಕನ್ನಡತಿ’ ಧಾರಾವಾಹಿಯ ಕಥೆ ಇದೀಗ ವೇಗವಾಗಿ ಸಾಗುತ್ತಿದ್ದು, ಭುವನೇಶ್ವರಿ ಪಾತ್ರ ಬಲಗೊಂಡಿದೆ. ರತ್ನಮಾಲಾ ಸಾವನ್ನಪ್ಪಿದ ಬಳಿಕ ಮಾಲಾ ಇನ್ಸ್ಟಿಟ್ಯೂಟ್ ಹಾಗೂ ಮಾಲಾ ಕೆಫೆಗೆ ಭುವನೇಶ್ವರಿ ಮುಖ್ಯಸ್ಥೆಯಾಗಿದ್ದಾರೆ. ಎಂ.ಡಿ ಪಟ್ಟಕ್ಕೇರಿರುವ ಭುವನೇಶ್ವರಿ ಬಹುಮುಖ್ಯ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಎಂ.ಡಿ ಪಟ್ಟಕ್ಕೇರಿದ್ದೇ ತಡ ಸಾನಿಯಾಳ ಬಾಯಿ ಮುಚ್ಚಿಸಿ, ಆಕೆಯನ್ನ ಮಾಲಾ ಇನ್ಸ್ಟಿಟ್ಯೂಟ್ ಸಂಸ್ಥೆಯಿಂದ ಭುವನೇಶ್ವರಿ ಹೊರಹಾಕಿದ್ದರು. ಇದೀಗ ಸಾನಿಯಾ ಕುಮ್ಮಕ್ಕಿನಿಂದ ಮೆರೆಯುತ್ತಿದ್ದ ಪ್ರಿನ್ಸಿಪಾಲ್ ಮೇಡಂಗೆ ಭುವನೇಶ್ವರಿ ಅಲಿಯಾಸ್ ಸೌಪರ್ಣಿಕ ಗೇಟ್ ಪಾಸ್ ಕೊಟ್ಟಿದ್ದಾರೆ. ಭುವನೇಶ್ವರಿ ಮೇಲೆ ಅಟ್ಯಾಕ್ ಮಾಡಿಸಿದ್ದು ಪ್ರಿನ್ಸಿಪಾಲ್! ಮಾಲಾ ಇನ್ಸ್ಟಿಟ್ಯೂಟ್ ಅಡಿಯಲ್ಲಿ ಬರುವ ಶಾಲೆಗಳ ಇನ್ಸ್ಪೆಕ್ಷನ್ ಮಾಡಲು ಎಂ.ಡಿ. ಭುವನೇಶ್ವರಿ ಮುಂದಾಗಿದ್ದರು. ಈ ವಿಷಯ ಗೊತ್ತಾಗಿದ್ದೇ ತಡ.. ಪ್ರಿನ್ಸಿಪಾಲ್ ಆಶಾಲತಾ ಮೇಡಂ ರೌಡಿಗಳನ್ನ ಬಿಟ್ಟು ಭುವನೇಶ್ವರಿ ಮೇಲೆ ಅಟ್ಯಾಕ್ ಮಾಡಿಸಿದ್ದರು. ಪ್ರಾಣಾಪಾಯದಿಂದ ಭುವನೇಶ್ವರಿ ಪಾರಾದರೂ, ಅವರ ಕೈಗೆ ಪೆಟ್ಟು ಬಿದ್ದಿತ್ತು. ದಾಳಿ ವೇಳೆ ಸಿಕ್ಕ ಮೊಬೈಲ್ ಫೋನ್ ಜಾಡು ಹಿಡಿದು, ಹಿಂದಿರುವ ಕಾಣದ ಕೈ ಕಂಡುಹಿಡಿಯಲು ಭುವನೇಶ್ವರಿ ಹೊರಟರು. ಆಗ ಲಭ್ಯವಾದ ಸಾಕ್ಷಿಗಳು ಪ್ರಿನ್ಸಿಪಾಲ್ ಆಶಾಲತಾ ಕಡೆ ಬೆಟ್ಟು ಮಾಡಿ ತೋರಿಸುತ್ತಿತ್ತು. ಆದರೂ ಹೆದರದ ಭುವನೇಶ್ವರಿ ಶಾಲೆಗೆ ಭೇಟಿ ಕೊಟ್ಟೇ ಬಿಟ್ಟರು. ರತ್ನಮಾಲಾ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ಕೆ ಆಗಮಿಸುವಂತೆ ಆಶಾಲತಾಗೆ ಭುವನೇಶ್ವರಿ ಆಹ್ವಾನ ನೀಡಿದರು. ಭುವನೇಶ್ವರಿ ಆಹ್ವಾನದ ಮೇರೆಗೆ ನಿವಾಸಕ್ಕೆ ಆಶಾಲತಾ ಆಗಮಿಸಿದರು. ಆಶಾಲತಾಗೆ ಊಟೋಪಚಾರ ಮಾಡಿ, ವಸ್ತ್ರದಾನ ಕೊಟ್ಟ ಭುವನೇಶ್ವರಿ ಅದರ ಜೊತೆಗೆ ವಜಾ ಪತ್ರವನ್ನೂ ನೀಡಿಬಿಟ್ಟರು. ಡಿಸ್ಮಿಸ್ ಲೆಟರ್ ನೋಡಿ ಪ್ರಿನ್ಸಿಪಾಲ್ ಆಶಾಲತಾ ಶಾಕ್ ಆಗಿದ್ದಾರೆ. ಭುವನೇಶ್ವರಿ ನಡೆ ಕಂಡು ಸಾನಿಯಾಗೂ ದಿಗಿಲು ಹುಟ್ಟಿಕೊಂಡಿದೆ. ಸಾನಿಯಾಗೂ ಶುರು ಭಯ
ಭುವನೇಶ್ವರಿ ಅವರನ್ನ ಕೊಲ್ಲಲು ಸಾನಿಯಾ ಸುಪಾರಿ ಕೊಟ್ಟಿದ್ದಳು. ಸಹ್ಯಾದ್ರಿ ಬೆಟ್ಟದಿಂದ ಭುವನೇಶ್ವರಿಯನ್ನ ತಳ್ಳಿಬಿಡುವಂತೆ ಸುಪಾರಿ ಕಿಲ್ಲರ್ಗೆ ಸಾನಿಯಾ ಸೂಚಿಸಿದ್ದಳು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಭುವನೇಶ್ವರಿ ಪಾರಾದರು. ಇದೀಗ ಸಹ್ಯಾದ್ರಿ ಬೆಟ್ಟದಿಂದ ತಮ್ಮನ್ನ ನೂಕಿದವನ ಜೊತೆ ಸಾನಿಯಾ ಮಾತನಾಡುತ್ತಿರುವ ವಿಡಿಯೋ ಭುವನೇಶ್ವರಿ ಕೈಗೆ ಸಿಕ್ಕಿದೆ. ಅದನ್ನ ಇಟ್ಟುಕೊಂಡು ಸಾನಿಯಾಳನ್ನ ಭುವನೇಶ್ವರಿ ಪ್ರಶ್ನೆ ಮಾಡುತ್ತಿದ್ದಾರೆ. ಸಾನಿಯಾಗೆ ಭಯ ಶುರುವಾಗಿದೆ.
ಅಪರಾಧದ ಹಿನ್ನಲೆ ಹೊಂದಿರುವ ಸಾನಿಯಾಳನ್ನ ಭುವನೇಶ್ವರಿ ಜೈಲಿಗೆ ಕಳುಹಿಸುತ್ತಾರಾ? ರತ್ನಮಾಲಾಗೆ ಜೀವ ಬೆದರಿಕೆ ಹಾಕಿದ್ದ ಸಾನಿಯಾಗೆ ಭುವನೇಶ್ವರಿ ತಕ್ಕ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾರಾ? ತಮ್ಮ ಪ್ರಾಣಕ್ಕೂ ಕಂಟಕ ತಂದಿದ್ದ ಸಾನಿಯಾಳನ್ನ ಭುವನೇಶ್ವರಿ ಸುಮ್ಮನೆ ಬಿಡುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.
ಅಂದ್ಹಾಗೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿ ಅಲಿಯಾಸ್ ಭುವಿ ಆಗಿ ರಂಜನಿ ರಾಘವನ್, ಹರ್ಷ ಆಗಿ ಕಿರಣ್ ರಾಜ್, ಸಾನಿಯಾ ಆಗಿ ಆರೋಹಿ ನೈನಾ, ವರೂಧಿನಿ ಆಗಿ ಸಾರಾ ಅಣ್ಣಯ್ಯ ಮುಂತಾದವವರು ಅಭಿನಯಿಸುತ್ತಿದ್ದಾರೆ.
https://play.google.com/store/apps/details?id=com.speed.newskannada