ಬೆಂಗಳೂರು ನಗರದಲ್ಲಿ ಎರಡು ಗಂಟೆಗಳ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಶನಿವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದ್ದು, ಶನಿವಾರದವರೆಗೆ ಸಾಕಷ್ಟು ನೀರು ಸಂಗ್ರಹಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ನಗರದ ನಿವಾಸಿಗಳಿಗೆ ಸೂಚಿಸಿದೆ.
ತಾತಗುಣಿಯಲ್ಲಿರುವ ಕಾವೇರಿ ನೀರು ಸರಬರಾಜು ಯೋಜನೆಯ ವಿದ್ಯುತ್ ಸ್ವೀಕರಿಸುವ ಕೇಂದ್ರದಲ್ಲಿ ಸರ್ಕ್ಯೂಟ್ ಬ್ರೇಕರ್ ಮತ್ತು ಕರೆಂಟ್ ಟ್ರಾನ್ಸ್ಫಾರ್ಮರ್ಗಳ ಸ್ಥಾಪನೆ, ಪರೀಕ್ಷೆ ಮತ್ತು ಕಾರ್ಯಾರಂಭದಂತಹ ನಿರ್ವಹಣಾ ಕಾರ್ಯಗಳಿಂದ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ ಎಂದು ನೀರು ಸರಬರಾಜು ಮಂಡಳಿ ತಿಳಿಸಿದೆ.
ನೀರಿನ ಪೂರೈಕೆಯಲ್ಲಿ ವ್ಯತ್ಯಯದ ಹೊರತಾಗಿ ನಗರದ ಹಲವು ಭಾಗಗಳಲ್ಲಿ ಗುರುವಾರ ಮತ್ತು ಶುಕ್ರವಾರ ವಿದ್ಯುತ್ ಪೂರೈಕೆಯಲ್ಲಿ ಕೂಡ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಗುರುವಾರ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ನಗರದ ಹಲವು ಪ್ರದೇಶಗಳಲ್ಲಿ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಆರ್ ಬಿಐ ಲೇಔಟ್, ಕೊತ್ತನೂರು, ಜೆಪಿ ನಗರ 5ನೇ ಹಂತ, ಶ್ರೇಯಸ್ ಕಾಲೋನಿ, ಗೌರವನಗರ, ನಟರಾಜ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೇಳಿದೆ.
ಶುಕ್ರವಾರ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಎಲಿಟಾ ಪ್ರೊಮೆನೇಡ್ ಅಪಾರ್ಟ್ಮೆಂಟ್, ಕೆಆರ್ ಲೇಔಟ್, ಶಾರದನಗರ
ಚುಂಚುಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.