ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದ್ದರಲ್ಲಿ ತಪ್ಪಾಗಿಲ್ಲ, ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೋನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರುತ್ತವೆ, ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪಾದರಾಯನಪುರ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡಿದ್ದೇವೆ. ಜೈಲು ಸಿಬ್ಬಂದಿಗೂ ಪರೀಕ್ಷೆ ಮಾಡಿ ಕ್ವಾರಂಟೈನ್ಗೂ ಒಳಪಡಿಸುತ್ತೇವೆ. ಇಲ್ಲೂ ಪೊಲೀಸರಿಗೆ ತಪಾಸಣೆ ಮಾಡಿ ಅಗತ್ಯಬಿದ್ದರೆ ಕ್ವಾರಂಟೈನ್ ಮಾಡ್ತೇವೆ. ಏನೇ ಮಾಡಿದರೂ ಆಪಾದನೆ ಬಂದೇ ಬರುತ್ತದೆ. ಆರೋಪಿಗಳನ್ನು ಜೈಲಿನ ಬದಲು ಆಸ್ಪತ್ರೆಯಲ್ಲಿಟ್ಟಿದ್ದರೂ ಟೀಕೆ ಬರುತ್ತಿದ್ದವು. ಹೀಗೇ ಮಾಡಬೇಕು ಹಾಗೇ ಮಾಡಬೇಕು ಅಂತ ನೋಡುವ ಕಾಲ ಅಲ್ಲ ಇದು. ಸಂದರ್ಭ, ಸಮಯ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು. ರಾಮನಗರದ ಜೈಲಿನಲ್ಲಿ ಆರೋಪಿಗಳಿಗೆ ಸೋಂಕು ಕಂಡು ಬಂದರೆ ಸ್ಥಳಾಂತರ ಮಾಡುತ್ತೇವೆ ಅಂತ ಮೊದಲೇ ನಾವು ಹೇಳಿದ್ವಿ. ಇದನ್ನು ಹೆಚ್.ಡಿ.ಕುಮಾರಸ್ವಾಮಿಗೂ ಹೇಳಿದ್ದೆವು. ರಾಮನಗರದ ಜೈಲಿನಲ್ಲಿರುವ ಎಲ್ಲರನ್ನೂ ಪರೀಕ್ಷೆ ಮಾಡುತ್ತೇವೆ.. ರಾಮನಗರ ಜನರು ಭಯಪಡುವ ಅಗತ್ಯ ಇಲ್ಲ ಎಂದು ಹೇಳಿದರು.