ರಾಯಚೂರು: ರಾಯಚೂರು ಜಿಲ್ಲೆಯ ಯರಗೇರಾ ಗ್ರಾಮದ ಪ್ರೌಢಶಾಲೆಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಮಳೆ ನೀರು ಕೊಯ್ಲು ಯೋಜನೆ ಕಾಮಗಾರಿಯನ್ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವೀಕ್ಷಣೆ ಮಾಡಿದರು.
ಕೊರೊನಾ ರೋಗದಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕೆಲಸ ಇಲ್ಲ. ಹೀಗಾಗಿ ನರೇಗಾ ಮೂಲಕ ಹಳ್ಳಿ ಜನರಿಗೆ ಉದ್ಯೋಗ ನೀಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ನರೇಗಾ ಕಾಮಗಾರಿ ಉತ್ತಮ ಯಶಸ್ಸನ್ನು ಕಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 5 ಸಾವಿರ 800 ನೂರು ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಕಾಮಗಾರಿಗಳು ಪ್ರಗತಿಯಲ್ಲಿವೆ. ವಿಶೇಷವಾಗಿ ರಾಯಚೂರು ಜಿಲ್ಲೆಯಲ್ಲಿ ಪ್ರತಿ ದಿನ 1ಲಕ್ಷಕ್ಕೂ ಹೆಚ್ಚು ಜನರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ ನರೇಗಾ ಕಾಮಗಾರಿಯನ್ನು ಮಾಡಿದ ಜನರ ಬಾಕಿ ಇದ್ದ ಹಣವನ್ನು ಈಗಾಗಲೇ ಅವರಿಗೆ ನೀಡಲಾಗಿದೆ. ಮುಂಚೆ 249 ರೂ ಇದ್ದ ಕೂಲಿ ಈಗ 275 ರೂಪಾಯಿಗೆ ಹೆಚ್ಚಳವನ್ನು ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸು ಕೂಡ ಜನರಿಗೆ ಉದ್ಯೋಗ ನೀಡುವುದು. ಜನರ ಅಪೇಕ್ಷೆ ಕೂಡ ಅದೇ ಆಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಮಟ್ಟದಲ್ಲಿ ಎಲ್ಲರಿಗೂ ನರೇಗಾ ಮೂಲಕ ಉದ್ಯೋಗವನ್ನು ನೀಡಲಾಗುತ್ತಿದೆ. ಕೆರೆಗಳ ಹೂಳು ತೆಗೆಯುವುದು, ಬದು ನಿರ್ಮಾಣ ಹಾಗೂ ಅಂತರ್ಜಲ ಹೆಚ್ಚಿಸುವಂತ ಎಲ್ಲ ಕಾಮಗಾರಿಗಳನ್ನು ನರೇಗಾ ಮೂಲಕ ಮಾಡಲಾಗುತ್ತಿದೆ. ಇದರಿಂದಾಗಿ ರಾಜ್ಯ ಪ್ರಗತಿ ಹೊಂದುತ್ತಿದೆ ಎಂದರು.