ಕೊರೊನಾ ಮಹಾಮಾರಿ ಹಿನ್ನಲೆಯಲ್ಲಿ ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಕೊರೊನಾ ರೋಗ ಪತ್ತೆಯ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಆರಂಭವಾಗಿದೆ. ವಿಧಾನ ಪರಿಷತ್ ಸದಸ್ಯ ಅರುಣ ಶಹಪೂರ,ಶಾಸಕ ದೇವಾನಂದ ಚವ್ಹಾಣ, ಬಿ.ಎಲ್.ಡಿ.ಇ ಆಡಳಿತ ಮಂಡಳಿ ಸದಸ್ಯರಾದಂತಹ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಸುನೀಲಗೌಡ. ಬಿ.ಪಾಟೀಲ್, ಡಾ.ಎಂ.ಎಸ್.ಬಿರಾದಾರ ಉಪಸ್ಥಿತಿಯಲ್ಲಿ ಪೂಜೆಯೊಂದಿಗೆ ಲ್ಯಾಬ್ ತನ್ನ ಕಾರ್ಯ ಆರಂಭಿಸಿತು. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿಯೇ ಕೋವಿಡ್-19 ಶಂಕಿತರು ಹಾಗೂ ಸೋಂಕಿತರ ಆರೈಕೆಗಾಗಿ ಪ್ರತ್ಯೇಕ ವಾರ್ಡ್ಗಳನ್ನು ತೆರೆಯಲಾಗಿದ್ದು, ಆಸ್ಪತ್ರೆ ಪ್ರಯೋಗಾಲಯ ಆರಂಭಿಸಲು ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಐ.ಸಿ.ಎಂ.ಆರ್ ಒಪ್ಪಿಗೆ ಸೂಚಿಸಿರುವದು ಸಂತಸ ತಂದಿದೆ. ಇದರಿಂದ ನಮ್ಮ ಆಸ್ಪತ್ರೆಯ ಜವಾಬ್ದಾರಿ ಹೆಚ್ಚಳವಾಗಿದೆ. ಸಾಂಕ್ರಾಮಿಕ ಪೀಡುಗಾಗಿರುವ ಕೊರೊನಾ ಕಾಯಿಲೆ ಇಡೀ ಸಮಾಜವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಸಮಾಜ ಸಂಕಷ್ಟದಲ್ಲಿರುವಾಗ ನಾವು ಅವರ ಸೇವೆಗೆ ಬದ್ದ ಎಂಬ ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್ರವರ ಸೂಚನೆ ಮೇರೆಗೆ ದಿನದ 24 ಘಂಟೆ ಈ ಲ್ಯಾಬ್ ಕಾರ್ಯನಿರ್ವಹಿಸಲಿದ್ದು ಪ್ರತಿ ದಿನ 400 ಕೊರೋನಾ ಪರೀಕ್ಷಾ ವರದಿ ನೀಡಲು ಸಜ್ಜಾಗಿದೆ.